Monday, October 16, 2006

ದಕ್ಷಿಣಾಪಥೇಶ್ವರ

ದಕ್ಷಿಣಾಪಥೇಶ್ವರ

2006 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.

Language: Kannada
Category: Drama/Thriller
Abstract: This is Part One of the story "pulikESi-harShavardhanara kAladall..." as it appeared in the KKNC magazine. A story of a young man who becomes a spy and helps his king win a war.
Keywords: drama, spy thriller, historical, chalukya, kannada, dakshinapatheshwara, pulikeshi, harshavardhana, aihole

Notice: This is an abridged version of the first part of the story "ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ...", ending with the construction of the Aihole temple as it appeared in the KKNC magazine of 2006. As the story rolls further, sUrya sharma travels all over the country, meets with Hiuen Tsang, gets arrested and escapes. Continue reading "ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ..." after "ದಕ್ಷಿಣಾಪಥೇಶ್ವರ" for another adventure-filled historical yarn.

ನನ್ನ ಹೆಸರು ಸೂರ್ಯ ಶರ್ಮ. ಈ ಕತೆಯ ಪ್ರಾರಂಭದ ಕಾಲದಲ್ಲಿ ನಾನು ಕರ್ನಾಟ ದೇಶದ ವಾತಾಪಿ ನಗರಿಯಲ್ಲಿ ವಾಸವಾಗಿದ್ದೆ. ನಮ್ಮ ತಾತ ಮುತ್ತಾತಂದಿರು ವೈದಿಕ ಬ್ರಾಹ್ಮಣರಾಗಿದ್ದರಂತೆ. ಚಾಳುಕ್ಯ ವಂಶದ ಪುಲಿಕೇಶಿಯು ಕದಂಬರನ್ನು ಅವರ ರಾಜಧಾನಿಯಾದ ವೈಜಯಂತಿ ನಗರಿಯಲ್ಲಿ ಸೋಲಿಸಿ ಚಾಳುಕ್ಯ ಅರಸುತನವನ್ನು ಸ್ಥಾಪಿದ್ದನ್ನು ನಮ್ಮ ಅಜ್ಜ ಪ್ರತ್ಯಕ್ಷವಾಗಿ ಕಂಡಿದ್ದರೆಂದು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ಹೇಳಿದ್ದ ನೆನಪು. ನಮ್ಮ ಅಜ್ಜ ಕೊನೆಯ ವರೆಗೂ ಆ ಪಾಳುಬಿದ್ದ ಹಳ್ಳಿಯಲ್ಲೇ ಇದ್ದರಂತೆ. ನಮ್ಮ ತಂದೆ ಆ ಪಾಳು ಹಳ್ಳಿಯನ್ನು ಬಿಟ್ಟು ವಾತಾಪಿ ನಗರಕ್ಕೆ ಬಂದರಂತೆ. ಯಾವಾಗೆಂದು ತಿಳಿಯದು - ನನಗಂತೂ ನೆನಪಿಲ್ಲ. ಬಹುಶಃ ನಾನು ಹುಟ್ಟುವ ಮುನ್ನವೇ ಇರಬಹುದು.


ನಾನು ಬೆಳೆದಿದ್ದೆಲ್ಲ ವಾತಾಪಿ ನಗರದ ಬಳಿಯೇ. ಆಗ ಹಿಂದಿನ ಮಹಾರಾಜನಾದ ಕೀರ್ತಿವರ್ಮನ ಮರಣದ ಸಮಯದಲ್ಲಿ ಯುವರಾಜ ಎರೆಯ ಬಹಳ ಚಿಕ್ಕವನಾದ ಕಾರಣ ಮಹಾರಾಜ ಕೀರ್ತಿವರ್ಮನ ತಮ್ಮನಾದ ಮಂಗಳೇಶ ರಾಜ್ಯವಾಳುತ್ತಿದ್ದು, ಗುರ್ಜರ ಪ್ರದೇಶದ ಕಳಚೂರಿ ನಗರದ ರಾಜ ಬುದ್ಧಿರಾಜ, ರೇವತೀ ದ್ವೀಪದ ಪಾಳೆಯಗಾರ ಸ್ವಾಮಿರಾಜ ಮತ್ತಿತರರನ್ನು ಪರಾಜಯ ಗೊಳಿಸಿ, ಅವರನ್ನು ಚಾಳುಕ್ಯರ ಆಧೀನರಾಗಿಸಿ, ಊರುರಾಣಪರಾಕ್ರಮ, ರಾಣವಿಕ್ರಮ, ಪರಮಭಾಗವತನೆಂಬ ಬಿರುದುಗಳನ್ನು ಹೊಂದಿ ವಾತಾಪಿ ನಗರಿಯಲ್ಲಿ ವೈಷ್ಣವ ದೇವಾಲಯವೊಂದನ್ನು ಕಟ್ಟಿಸಿದ ಕತೆಗಳು ಕೇಳಿಬರುತ್ತಿದ್ದವು. ನಮ್ಮಂತಹ ಸಾಮಾನ್ಯ ಜನರಿಗೆ ಹೀಗೆ ಕೇಳಿ ಬರುತ್ತಿದ್ದ ಸುದ್ಧಿಗಳೆಷ್ಟೋ ಅಷ್ಟೆ. ನಿಜ ಸಂಗತಿ ತಿಳಿಯಲು ಬೇರಾವ ಸಾಧನಗಳೂ ಇರಲಿಲ್ಲ.


ಈ ಮಂಗಳೇಶ ಮಹಾರಾಜನು ಯುವರಾಜ ಎರಯ ವಯಸ್ಸಿಗೆ ಬಂದಾಗ ಸಿಂಹಾಸನ ಬಿಟ್ಟುಕೊಡಬೇಕಾಗಿದ್ದರೂ, ಅಧಿಕರಣದ ಮದವು ಅವನ ತಲೆಗೇರಿ ತನ್ನ ಮಗನಾದ ಸುಂದರವರ್ಮನನ್ನು ಸಿಂಹಾಸನಕ್ಕೇರಿಸುವ ಕುಯೋಜನೆ ಹೂಡಿದ್ದು ಯುವರಾಜ ಎರೆಯನಿಗೆ ತಿಳಿದುಬಂದು, ಯುವರಾಜನು ತನ್ನ ಸ್ವಾಭಾವಿಕ ದಕ್ಷತೆಯಿಂದ ಅವರಿಬ್ಬರನ್ನೂ ನಿರ್ಮೂಲ ಮಾಡಿ, ಪುಲಿಕೇಶಿ ಎಂಬ ಬಿರುದನ್ನು ಹೊತ್ತು, ತಾನೇ ಸಿಂಹಾಸನವನ್ನೇರಿದ್ದು ಚಿರಪರಿಚಿತ ಕತೆಯಾಗಿತ್ತು.


ಸುಮಾರು ಆ ಕಾಲದಲ್ಲಿ ನನ್ನ ಜನ್ಮವಾದದ್ದು ಎಂದು ನಾನು ಬಾಲಕನಾದಾಗ ಅಮ್ಮ ಹೇಳುತ್ತಿದ್ದ ನೆನಪು. ವಯಸ್ಸು ಸುಮಾರು ಏಳೆಂಟು ಇದ್ದಿರಬಹುದು - ಪರಂಪರೆಯಾನುಸಾರವಾಗಿ ನನ್ನನ್ನು ಗುರುಕುಲಕ್ಕಟ್ಟಲಾಯಿತು. ಅಲ್ಲಿ ನಮ್ಮ ಸಂಪ್ರದಾಯದಂತೆ ನನ್ನ ವಿದ್ಯಾಭ್ಯಾಸ ನಡೆಯಿತು. ಸಂಸ್ಕೃತ, ವೇದ-ಪುರಾಣಗಳು ಹಾಗು ವೇದಾಂತ-ಮೀಮಾಂಸಗಳ ವಿಷಯಗಳಲ್ಲಿ ಶಿಕ್ಷಣೆ ಹೊಂದಿದೆ. ಹೀಗೇ ಹಲವಾರು ಸಂವತ್ಸರಗಳು ಕಳೆದವು. ಸುಮಾರು ಹದಿನಾರರ ವಯಸ್ಸಿರಬಹುದು, ಗುರುಗಳು ನಾನು ಗುರುಕುಲದಿಂದ ಹೊರಹೋಗಲು ಸಮರ್ಥನಾಗಿರುವೆ ಎಂದು ಹೇಳಿ ಕಳುಹಿಸಿಕೊಟ್ಟರು.


ಬೇರೆ ದಾರಿ ಕಾಣದೆ ವಾತಾಪಿ ನಗರಕ್ಕೆ ಹಿಂತಿರುಗಿದೆ. ಬಾಲಕನಾಗಿದ್ದಾಗ ನೋಡಿದ್ದು ಬಿಟ್ಟರೆ, ನಾನು ಕಾಣದ ಊರದು, ಎಲ್ಲವೂ ಹೊಸದು. ನಮ್ಮ ತಂದೆಯವರಿಗೆ ನಾನೂ ಅವರಂತೆ ವೈದಿಕ ಕಾರ್ಯ ನಿರ್ವಹಣೆ ನಡೆಸಿಕೊಂಡು, ವಿವಾಹ ಮಾಡಿಕೊಂಡು ವಾತಾಪಿಯಲ್ಲೇ ನೆಲೆಸಬೇಕೆಂಬ ವಿಚಾರ. ಆಗ ನಾನಿನ್ನೂ ಯುವಕ, ಮೇಲಾಗಿ ನನಗೆ ತಲೆಮಾರುಗಳಿಂದ ಬಂದಿರುವ ಬ್ರಹ್ಮವಿದ್ಯೆ ಮುನ್ನಡೆಸುವ ವಿಶೇಷ ಆಸೆಯೇನು ಇರಲಿಲ್ಲ. ದೇಶ ಸುತ್ತುವ ಸ್ವಾಭಾವಿಕ ಆಸೆ, ಏನಾದರೂ ಬೇರೆ ಕಾಯಕ ನಡೆಸಿ ಪದವಿ, ಹೊನ್ನು ಗಳಿಸುವ ಆಸೆ.


ಹೀಗೇ ನನ್ನ ಪಾಡೇನಾಗುವುದೆಂದು ಯೋಚಿಸುತ್ತ ಒಂದು ದಿನ ಊರಾಚೆ ಕಾಡಿನಲ್ಲಿ ಹೋಗಿ ಚಿಂತೆ ಮಾಡುತ್ತ ಕುಳಿತಿದ್ದೆ. ಹಾಗೆ ಕುಳಿತಿದ್ದಾಗ ಪ್ರಾಣಿಯೊಂದು ನಡೆದು ಹೋಗುತ್ತಿರುವ ಧ್ವನಿ ಕೇಳಿಸಿತು. ಕುಳಿತಲ್ಲೇ ಕುಳಿತು ಕತ್ತು ತಿರುಗಿಸಿ ನೋಡಿದರೆ ವ್ಯಾಘ್ರವೊಂದು ನೀರು ಕುಡಿಯಲು ಸರೋವರದ ಕಡೆ ಹೊರಟಿದೆ. ಅದರ ಸ್ವಲ್ಪ ಹಿಂದೆಯೇ ವ್ಯಕ್ತಿಯೊಬ್ಬ ಬಿಲ್ಲು ಬಾಣಗಳನ್ನು ಹಿಡಿದು ಅದರ ಮೇಲೆ ಗುರಿಯಿಟ್ಟು ಅದನ್ನೇ ಹಿಂಬಾಲಿಸಿ ಹೋಗುತ್ತಿದ್ದದ್ದು ಕಾಣಿಸಿತು.


ಗುರುಕುಲದ ವಿದ್ಯಾಭ್ಯಾಸದಲ್ಲಿ ನಾನು ಕಲಿತ ಒಂದು ಪಾಠವೆಂದರೆ ಪ್ರಕೃತಿಯ ಸೃಷ್ಟಿಯ ರಕ್ಷಣೆ. ಆ ಪಾಪದ ಪ್ರಾಣಿಯನ್ನು ಸಾಯಲು ಬಿಡುವವ ನಾನಾಗಿರಲಿಲ್ಲ. ನಾನು ಮರದ ಮರೆಯಲ್ಲಿದ್ದೆಯಾದ್ದರಿಂದ ಆ ಮನುಷ್ಯನ ಕಣ್ಣಿಗೆ ನಾನು ಕಾಣಿಸಿರಲಿಲ್ಲ. ವ್ಯಾಘ್ರ ನನ್ನ ಪಕ್ಕದಿಂದ ಸುಳಿದಾಗ ನಾನು ಅದರ ಮೇಲೆ ನೆಗೆದೆ. ಅದಕ್ಕೆ ಆಶ್ಚರ್ಯವಾಯಿತಾದರೂ ಅದು ಹೋರಾಡ ತೊಡಗಿತು. ಹೋರಾಟದಲ್ಲಿ ನನ್ನನ್ನು ಬಗರಿ ಓಡಿಹೋಯಿತು. ನೋವಿನಿಂದ ನರಳುತ್ತ ಬಿದ್ದಿದ್ದಲೇ ಬಿದ್ದಿದ್ದೆನಾದರೂ ವ್ಯಾಘ್ರನ ಜೀವ ಉಳಿಸಿದ ತೃಪ್ತಿಯ ಭಾವ ನನ್ನಲ್ಲಿ ಹರಿಯಿತು. ಆದರೆ ನಾನು ಹುಲಿಯನ್ನು ಅಟ್ಟಿ ಬಂದ ಆ ಮನುಷ್ಯನನ್ನು ಎಣಿಸಿರಲಿಲ್ಲ.


ಕೋಪದಿಂದ ನನ್ನ ಬಳಿ ದುರ-ದುರನೆ ನಡೆದು ಬಂದ. ಬಹಳ ಎತ್ತರವಾಗಿದ್ದು, ತೆಳುವಾದ, ಎಲುಬು ಕಾಣುವಂತಹ ಮೈಕಟ್ಟು ಹೊಂದಿದ್ದ. ಅವನ ಮುಖದಲ್ಲಿ ಕಠಿಣ, ನಿಷ್ಟುರ ರೇಖೆಗಳಿದ್ದವು; ರಕ್ತ-ಕೆಂಪಾಗಿದ್ದ ಗರುಡನಂಥಹ ಕಣ್ಣುಗಳು. ಅವನ ದಟ್ಟವಾದ ಒರಟಾದ ತಲೆಗೂದಲು ಅವನ ಮುಖದಸುತ್ತ ಚದುರಿ ಅವನಿಗೇ ವ್ಯಾಘ್ರನ ರೂಪ ಕೊಟ್ಟಿದ್ದವು. ಅವನೆ ಎದೆಯ ಮೇಲೆ ಒಂದು ವರಾಹದ ಲಾಂಛನವಿತ್ತು. ಸಮೀಪ ಬಂದು ಘರ್ಜಿಸಿದ:


"ನಮ್ಮ ಬೇಟೆಯನ್ನು ತಪ್ಪಿಸಲು ಎಷ್ಟು ಧೈರ್ಯವೋ ನಿನಗೆ? ನಾವು ಯಾರೆಂದು ಬಲ್ಲೆಯಾ"


ನಾನು ವಿನಯದಿಂದಾದರೂ ಸ್ವಲ್ಪ ಹೆಮ್ಮೆಯಿಂದ ಉತ್ತರಿಸಿದೆ "ನೀನು ಯಾರಾದರೇನು? ಆ ಮೂಕ ವ್ಯಾಘ್ರನನ್ನು ಕೊಲ್ಲುವ ಹಕ್ಕು ನಿನಗಿಲ್ಲ. ಆ ಕಾರಣದಿಂದ ನಾನು ಅದಕ್ಕೆ ಓಡಿಹೋಗಲು ದಾರಿ ಮಾಡಿಕೊಟ್ಟೆ."


ಅವನಿಗೆ ಕೋಪ ಇನ್ನಷ್ಟು ಹೆಚ್ಚಾಯಿತು. ಅಷ್ಟು ಹೊತ್ತಿಗೆ ಕಾಡಿನಲ್ಲಿ ಯಾರೋ ಬರುತ್ತಿದ್ದ ಸದ್ದು ಕೇಳಿಸಿತು. ಆತ ಒದರಿದ "ಯಾರಲ್ಲಿ"


ಕೆಲವೇ ಕ್ಷಣಗಳಲ್ಲಿ ಇಬ್ಬರು ರಾಜ ಭಟರು ಬಂದು ಆತನಿಗೆ ಬಾಗಿ ಆದರ ತೋರಿ "ಅಪ್ಪಣೆ ಮಹಾರಾಜ" ಎಂದರು. ಮಹಾರಾಜನ ತಂಡದ ಉಳಿದವರು ಒಬ್ಬೊಬ್ಬರಾಗಿ ಪ್ರತ್ಯಕ್ಷರಾಗಲು ಆರಂಭಿಸಿದರು.


ನನಗಾಗ ಹೊಳೆಯಿತು. ಈತ ಮಹಾರಾಜ ಪುಲಿಕೇಶಿ - ವ್ಯಾಘ್ರನ ಕೇಶ ಉಳ್ಳವನು. ಸಿಂಹಾಸನವನ್ನೇರಿದಮೇಲೆ ಈತ ಅಪ್ಪಯಕ ಹಾಗು ಗೋವಿಂದರೆಂಬ ದಂಗೆಯೆದ್ದ ಪಾಳೆಯಗಾರರನ್ನು ಸದೆಬಡೆದು ಅವರು ಕಪ್ಪ ಸಲ್ಲಿಸುವಂತೆ ಮಾಡಿದವ. ವೈಜಯಂತಿಯ ಕದಂಬರನ್ನು ಪೂರ್ಣ ನಿರ್ಮೂಲ ಮಾಡಿ, ನಂತರ ತಲಕಾಡಿನ ಗಂಗರನ್ನು ಹಾಗು ಕರಾವಳಿಯ ಆಳುಪರನ್ನು ಯುದ್ಧ ದಲ್ಲಿ ಸೋಲಿಸಿ ಸಾಮಂತರನ್ನಾಗಿಸಿದವ. ಕೊಂಕಣ ಕರಾವಳಿ ಹಾಗು ಪುರಿ ಬಂದರನ್ನು ಸಮುದ್ರ ಕಾಳಗದ ನಂತರ ಗೆದ್ದವ. ಲಾಟರು, ಗುರ್ಜರರು ಹಾಗು ಮಾಳವರನ್ನು ಪೂರ್ಣ ಸದೆಬಡೆದು ದಕ್ಷಿಣಾಪಥಕ್ಕೇ ಅಧಿಪತಿಯಾದಂತವ. ಕೆಲವೇ ಸಂವತ್ಸರಗಳ ಹಿಂದೆ ಮಹಾರಾಜನು ಪಲ್ಲವ ಚಕ್ರವರ್ತಿ ಮಹೇಂದ್ರವರ್ಮನ ತಾಣವಾದ ಕಾಂಚೀಪುರಕ್ಕೆ ಧಾಳಿಯಿಟ್ಟು, ಪುಳ್ಳಲೂರಿನ ಯುದ್ಧದಲ್ಲಿ ಪಲ್ಲವರನ್ನು ಸೋಲಿಸಿ ಮಹೇಂದ್ರವರ್ಮನು ಕಾಂಚೀಪುರದ ಕೋಟೆಯೊಳಗೆ ಅಡಗಿಕೊಳ್ಳುವ ಪರಿಸ್ಥಿತಿ ಬಂದಾಗ, ಆ ಕೋಟೆಗೆ ಧಾಳಿಯಿಟ್ಟು, ಕಾಂಚೀನಗರದೊಳಗೆ ಹೊಕ್ಕಿ, ಅಲ್ಲಿ ಪಲ್ಲವರನ್ನು ಸದೆಬಡೆದು, ಅವರನ್ನೂ ಕಪ್ಪ-ಕಾಣಿಕೆ ಸಲ್ಲಿಸಲು ಒತ್ತಾಯ ಮಾಡಿದವ. ನಾನು ಇಂತಹ ಮಹಾರಾಜನ ಬೇಟೆ ತಪ್ಪಿಸಿದ್ದೆ! ನನಗೇನು ಕಾದಿತ್ತೋ ಯೋಚನೆ ಮಾಡಲು ಭಯವಾಗುತ್ತಿತ್ತು.


ಇಷ್ಟೆಲ್ಲ ಯೋಚನೆ ಮಾಡಲು ನನಗೆ ಕೆಲವೇ ಕ್ಷಣಗಳ ಸಮಯ ಬೇಕಾಗಿದ್ದದ್ದು. ನನಗಷ್ಟೂ ಸಮಯ ಕೊಡದೆ ಮಹಾರಾಜನು "ಇವನನ್ನು ಒಯ್ದು ಕಾರಾಗ್ರಹಕ್ಕೆ ತಳ್ಳಿ" ಎಂದು ಹೇಳಿ ಹೊರಟು ಹೋದನು.


ಭಟರು ನನ್ನನ್ನು ಸರಪಣಿಗಳಿಂದ ಕಟ್ಟಿ ಹಾಕಿ ಒಂದು ಕತ್ತಲೆ ಕಾರಾಗ್ರಹಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿದರು. ಆ ಕಾರಾಗ್ರಹದಲ್ಲಿ ಎಷ್ಟು ಹೊತ್ತು ಕಳೆಯಿತೋ ಎನೋ ಒಂದೂ ಹೇಳಲಾರೆ. ಆ ಕತ್ತಲೆ ಕೋಣೆಯಲ್ಲಿ ಹಗಲಿಲ್ಲ, ರಾತ್ರಿಯಿಲ್ಲ. ಮೂಷಕಗಳು ಎಲ್ಲೆಡೆ ಓಡಾಡುತ್ತಿದ್ದವು. ವ್ಯಾಘ್ರ ಮಾಡಿದ ಗಾಯಗಳಿಂದ ಪೀಡೆ ಹೆಚ್ಚಾಗಿತ್ತು. ಊಟವೇನೋ ಮಾಡಿದ್ದೇ ನೆನಪಿಲ್ಲ. ನನ್ನ ಯೋಜನೆಗಳು, ಸ್ವಪ್ನಗಳು ಭಂಗವಾದವೆಂದುಕೊಳ್ಳುತ್ತ ಅದೃಷ್ಟದೇವಿಯನ್ನು ದೂರತೊಡಗಿದೆ.


ಕೊನೆಗೊಮ್ಮೆ ಭಟರು ಬಂದು ನನ್ನ ಕಣ್ಣುಗಳನ್ನು ಕಟ್ಟಿ ನನ್ನನ್ನು ಎಲ್ಲಿಗೋ ಕರೆದೊಯ್ದರು. ಯಾವುದೋ ಸುರಂಗ ಮಾರ್ಗಗಳಲ್ಲಿ ಹೋದ ಅನಿಸಿಕೆ. ಕೊನೆಗೆ ಮತ್ತಾವುದೋ ಸ್ಥಳದಲ್ಲಿ ನನ್ನನ್ನು ಕೂರಿಸಿ ಭಟರು ಹೊರಟು ಹೋದರು.


ಸ್ವಲ್ಪ ಸಮಯದ ನಂತರ ನನ್ನ ಕಣ್ಣಿನ ಕಟ್ಟು ಬಿಚ್ಚಲಾಯಿತು. ದೀಪದ ಬೆಳಕಿದ್ದ ಒಂದು ವಿಶಾಲವಾದ ಕೋಣೆಯಲ್ಲಿದ್ದೆ. ಕೋಣೆಗೆ ಯಾವ ಬೆಳಕಿಂಡಿಗಳಿರುವುದು ಕಾಣಿಸಲಿಲ್ಲವಾದರೂ ರಾತ್ರಿ ಹೊತ್ತಿರಬಹುದೆನಿಸಿತು. ನೆಲಮಾಳಿಗೆಯ ಕೋಣೆ ಇರಬಹುದೆಂದುಕೊಂಡೆ. ರಾಜಸೇವಕರು ತಿನ್ನಲು ಒಂದಿಷ್ಟು ಫಲಗಳು ಹಾಗು ಬೇರೆ ಆಹಾರಗಳನ್ನು ನನ್ನ ಮುಂದೆ ಇರಿಸಿದರು. ನನಗೆ ಏನು ತಿಳಿಯಲಿಲ್ಲ. ಆದರೂ ಹೊಟ್ಟೆ ಹಸಿವಾದರಿಂದ ಆ ಫಲಗಳನ್ನು ಭಕ್ಷಿಸಿದೆ. ಏನು ನಡೆಯುತ್ತಿದೆಯೆಂದು ಯೋಚಿಸಬೇಕೆಂಬ ವಿಚಾರ ಇನ್ನೂ ನನ್ನ ಬುದ್ಧಿಗೆ ಹೊಳೆದಿರಲಿಲ್ಲ, ಅಷ್ಟುಹೊತ್ತಿಗೆ ಸ್ವತಃ ಮಹಾರಾಜನೇ ಮತ್ತೊಬ್ಬ ವಯಸ್ಸಾದ ವ್ಯಕ್ತಿಯೊಂದಿಗೆ ಅಲ್ಲಿಗೆ ಬಂದ. ಇಬ್ಬರು ನನ್ನೆದುರಿಗೆ ಕುಳಿತರು.


ಮಹಾರಾಜ ಸ್ವಲ್ಪ ಶಾಂತವಾಗಿದ್ದರೂ ಇನ್ನೂ ಕೋಪದಿಂದಲೇ ಹೇಳಿದ "ನಮ್ಮ ಗುರಿ ಆ ವ್ಯಾಘ್ರನ ಮೇಲಿತ್ತು. ನೀನು ಅದರೊಡನೆ ಹೋರಾಡುತ್ತಿದ್ದಾಗಲೂ ನಿನ್ನನ್ನೂ, ಅದನ್ನೂ ಕೊಲ್ಲುವ ಸಾಮರ್ಥ್ಯವಿದೆ ನಮ್ಮಲ್ಲಿ"


ನಾನು ಪೆಚ್ಚಾದರೂ, ಉತ್ತರಿಸಲಿಲ್ಲ. ಮಹಾರಾಜನೇ ಮತ್ತೂ ಸ್ವಲ್ಪ ಶಾಂತನಾಗಿ ಹೇಳಿದ "ಮೈ ಮೇಲೆ ಒಂದು ಪಂಚೆ ಧರಿಸಿರುವ ನಿಶಕ್ತ ಬ್ರಾಹ್ಮಣ ನೀನು. ಆ ವ್ಯಾಘ್ರನ ಮೇಲೆ ಹಾರಲು ಭಯವಾಗಲಿಲ್ಲವೇ ನಿನಗೆ?"


ಈಗ ಸ್ವಲ್ಪ ಗತ್ತಿನಿಂದಲೇ ಹೇಳಿದೆ "ಭಯವಾಯಿತು. ಯಾರಿಗೆ ವ್ಯಾಘ್ರನ ಮೇಲೆ ಹಾರಿ ಅದರೊಡನೆ ಸೆಣೆಸಾಡಲು ಭಯವಾಗುವುದಿಲ್ಲ? ಆದರೂ ಅದನ್ನು ಬದುಕಿಸುವ ಹೊಣೆ ಆ ಕ್ಷಣದಲ್ಲಿ ನನ್ನದಾಗಿತ್ತು ಎನಿಸಿತು"


ಮಹಾರಾಜ ಹೇಳಿದ "ನಮಗೆ ಭಯವಾಗುವುದಿಲ್ಲ"


ಸ್ವಲ್ಪ ಹೊತ್ತು ಶಾಂತಿ ಕಾದಿತ್ತು. ಮತ್ತೆ ಮಹಾರಾಜನೇ ನುಡಿದ "ನಿನ್ನ ಧ್ಯೇಯದಲ್ಲಿ ನಿನಗಷ್ಟು ನಂಬಿಕೆಯೆ?"


ನಾನು ಹೇಳಿದೆ "ಮಹಾರಾಜ, ನನ್ನ ಜೀವನದಲ್ಲಿ ಕಲಿತಿರುವ ಒಂದು ಪಾಠ ನನ್ನ ಕೈಯಲ್ಲಿ ಸಾಧ್ಯವಾದಾಗ ಪ್ರಕೃತಿಯ ಸೊಬಗಿನ ರಕ್ಷಣೆ"


ಮಹಾರಾಜ ಪ್ರತಿಯುತ್ತರಿಸಿದ "ಆ ವ್ಯಾಘ್ರ ಪ್ರಕೃತಿಯ ಸೊಬಗೆ? ಅದಕ್ಕೆ ಸಾಧ್ಯವಾಗಿದ್ದಿದ್ದರೆ ನಿನ್ನನ್ನೂ ತಿಂದುಬಿಡುತ್ತಿತ್ತು"


ನಾನು ಹೇಳಿದೆ "ಅದು ನನ್ನನ್ನು ತಿಂದಿದ್ದರೂ ಅದನ್ನು ಬದುಕಿಸಲು ಪ್ರಯತ್ನಿಸುತ್ತಿದ್ದೆ. ಅದನ್ನು ವಿನಾಃ ಕಾರಣ ಕೊಲ್ಲುವ ಅನುಮತಿ ಮನುಷ್ಯನಿಗಿಲ್ಲ"


"ಮಹಾಮಂತ್ರಿಗಳೆ..." ಕೆಲವು ಕ್ಷಣಗಳ ಕಾಲ ಯೋಚಿಸಿ, ಮಹಾರಾಜ ನುಡಿದ


ಪಕ್ಕ ಕುಳಿತಿದ್ದ ವ್ಯಕ್ತಿ ಈಗ ನುಡಿದರು "ಯುವಕ, ನಿನಗೆ ನಿನ್ನ ಮಾತೃಭೂಮಿಯಲ್ಲಿ ಎಷ್ಟು ಭಕ್ತಿ ಇದೆ?"


ನಾನು ಹೇಳಿದೆ "ನನ್ನ ಮಾತೃಭೂಮಿಗೆ ಪ್ರಾಣವನ್ನೂ ಕೊಡಬಲ್ಲೆ"


"ಆ ವ್ಯಾಘ್ರನನ್ನು ಕಾಪಾಡುವ ಧ್ಯೇಯದಲ್ಲಿದ್ದ ನಂಬಿಕೆಯೇ ಮಾತೃಭೂಮಿಯನ್ನು ಕಾಪಾಡುವುದರಲ್ಲೂ ಇದೆಯೆ?" ಎಂದು ಕೇಳಿದರು.


ನಾನು ಇದೆ ಎನ್ನುವಂತೆ ತಲೆದೂಗಿದೆ.


"ಹಾಗಾದರೆ ಮಹಾರಾಜನಿಗೆ ರಾಜ್ಯಾಡಳಿತ ಹಾಗು ರಾಜ್ಯ ಸಂರಕ್ಷಣೆಯಲ್ಲಿ ಸಹಾಯ ಮಾಡುವೆಯಾ?" ಎಂದರು.


ನನಗೀಗ ನನ್ನ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವ ಸಾಧನೆ ಕಾಣಿಸತೊಡಗಿತು "ಮಾಡುವೆ - ಏನು ಮಾಡಬೇಕು?" ಎಂದೆ


ಈಗ ಮಹಾರಾಜ ನುಡಿದ "ಮಹಾಮಂತ್ರಿಗಳೇ, ನಾಳೆಯೇ ಈತನು ಮಹಾರಾಜರ ಬೇಟೆ ಅಡ್ಡಪಡಿಸಿದ ಕಾರಣ ಈತನ ಶಿರ ಕಡಿಸುವ ಶಿಕ್ಷೆ ವಿಧಿಸಲಾಗಿರುವುದನ್ನು ಡಂಗೂರ ಹೊಡೆಸಿ"


ನಾನು ತಬ್ಬಿಬ್ಬಾದೆ "ಆ...?"


ಮಹಾಮಂತ್ರಿಗಳು ನುಡಿದರು "ಹೆದರಬೇಡ ಯುವಕ, ನೀನು ಗೂಢಚಾರನಾಗಬೇಕಾದರೆ ನೀನು ಮಾಯವಾಗಬೇಕು. ಯಾರೂ ನಿನ್ನನ್ನು ಗುರುತಿಸಬಾರದು. ಇದಕ್ಕೆ ನಿನಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಡಂಗೂರ ಹೊಡೆಸುವದಕ್ಕಿಂತ ಒಳ್ಳೆಯ ಉಪಾಯ ಬೇರಿಲ್ಲ"


ಮಹಾರಾಜ ನುಡಿದ "ಮಹಾಮಂತ್ರಿಗಳೇ, ನಾಳೆಯೇ ಈ ಯುವಕನ ಗೂಢಚಾರ ಶಿಕ್ಷಣೆ ಪ್ರಾರಂಭವಾಗಲಿ"


ಇಬ್ಬರೂ ಕೋಣೆ ಬಿಟ್ಟು ಹೊರಟು ಹೋದರು. ನನ್ನನ್ನು ಮತ್ತೆ ಕಣ್ಣು ಕಟ್ಟಿ ನನ್ನ ಕಾರಾಗ್ರಹಕ್ಕೆ ಕಳುಹಿಸಲಾಯಿತು. ನಾನು ಬರುವ ಮುಂಜಾವನ್ನು ಕಾಯ್ದು ಕುಳಿತೆ. ನನ್ನ ದೇಶ ಸುತ್ತುವಾಸೆ ಈ ನೆವದಲ್ಲಾದರೂ ಪೂರೈಸಬಹುದೆಂದು ಯೋಚಿಸುತ್ತ ಕಾಲ ಕಳೆದುಹೋಯಿತು.


ಮರುದಿನ ಏನಾಯಿತೆಂಬುದು ನಾನು ಊಹಿಸಬಲ್ಲನಾಗಿದ್ದೆ. ನನಗೆ ಮರಣ ದಂಡನೆ ವಿಧಿಸಲಾಗಿರುವುದಾಗಿ ಡಂಗೂರ ಸಾರಿರಬೇಕು. ನೆರೆಹೊರೆಯವರೆಲ್ಲ ನಾನಿನ್ನು ಬದುಕಿಲ್ಲ ಎಂದುಕೊಂಡಿರಬೇಕು. ಅಮ್ಮ ನಮ್ಮ ತಂದೆ.... "ಒಹ್! ಹೇಗಾದರೂ ಮನೆಗೆ ನನ್ನ ನಿಜ ಸಂಗತಿಯ ಬಗ್ಗೆ ಸಂದೇಶ ತಲುಪಿಸಬೇಕು" ನನಗೆ ನಾನೇ ಹೇಳಿಕೊಂಡೆ. ನನಗೆ ಮರಣದಂಡನೆ ವಿಧಿಸಲಿಲ್ಲವಾದರೂ ನನ್ನನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ನನ್ನ ಕಾತರ ಹೆಚ್ಚಾಗತೊಡಗಿತು. ನಾನು ರಾಜ, ಮಹಾಮಂತ್ರಿಗಳೊಡನೆ ಮಾತನಾಡಿದ್ದು ಕನಸೋ ನನಸೋ ಎಂದು ಯೋಚಿಸತೊಡಗಿದೆ.


ಎಷ್ಟು ಹೊತ್ತು ಕಳೆದಿತ್ತೋ ನನಗೆ ತಿಳಿಯದು. ಮತ್ತೆ ರಾತ್ರಿಯಾಗಿರಬಹುದೆಂಬ ಅನಿಸಿಕೆ. ಏನೊ ಸದ್ದು ಕೇಳಿಸಿತು. ನೋಡುತ್ತಿದ್ದಂತೆಯೇ ನನ್ನ ಕಾರಾಗ್ರಹದ ಕೋಣೆಯ ನೆಲದೊಳಗಿಂದ ಒಂದು ಚೌಕ ಬೆಳಕು ಕಾಣಿಸಿತು. ನೆಲದೊಳಗೆ ಒಂದು ಬಾಗಿಲು ತೆರೆಯಿತು. ಇಬ್ಬರು ಭಟರು ಬಂದು "ನಡೆ ನಮ್ಮ ಜೊತೆ" ಎಂದಷ್ಟೆ ಹೇಳಿದರು. ನನಗೆ ಮಾತನಾಡಲು ಅವಕಾಶವಾಗಲಿಲ್ಲ. ಅವರೊಂದಿಗೆ ಆ ಬಾಗಿಲೊಳಗಿನಿಂದ ಸುರಂಗ ಮಾರ್ಗವಾಗಿ ಎಲ್ಲಿಗೋ ಕರೆದೊಯ್ದರು. ಹೀಗೆ ಸ್ವಲ್ಪ ಹೊತ್ತು ನಡೆದ ಮೇಲೆ ಸುರಂಗದಿಂದ ಆಚೆ ಹೋದೆವು. ಮೂರು ಕುದುರೆಗಳನ್ನು ಕುದುರೆ ಏರಿದ ಮತ್ತೊಬ್ಬ ಕಾಯ್ದು ನಿಂತಿದ್ದ.


"ಕುದುರೆ ಸವಾರಿ ಬಲ್ಲೆಯಾ?" ಭಟರಲ್ಲೊಬ್ಬ ಕೇಳಿದ.


ನಾನೆಂದೂ ಕುದುರೆ ಏರಿದವನಲ್ಲ. "ಇಲ್ಲ" ನಾನು ಉತ್ತರಿಸಿದೆ.


"ಇಂಥವರನ್ನು ಎಲ್ಲಿಂದ ಹಿಡಿಯುತ್ತಾರೋ" ಎಂದು ಗೊಣಗುತ್ತ "ರಿಕಾಬಿನೊಳಗೆ ಎಡಗಾಲು ಹಾಕಿ ಬಲಗಾಲು ಕುದುರೆಯ ಬೆನ್ನಮೇಲೆ ಹಾಕು... ಹೀಗೆ" ಎಂದ ಒಬ್ಬ ಹೇಳಿದ ಮಾತಿಗೆ ಕ್ರಿಯೆ ತೋರಿಸುತ್ತ.


ನಾನು ಪ್ರಯತ್ನಿಸಿದೆ. ಅವನು ತೋರಿಸಿದಷ್ಟು ಸುಲಭವಾಗಿರಲಿಲ್ಲ. ಅಂತೂ ಅವರುಗಳ ಸಹಾಯದಿಂದ ಕುದುರೆ ಏರಿ ನಾನೂ ಅವರೊಂದಿಗೆ ಹೊರಟೆ. ಮೊದಲಿಗೆ ಸ್ವಲ್ಪ ಕಷ್ಟವಾದರೂ ಸಾಗುತ್ತಿದ್ದಂತೆ ಅಳವಡಿಸಿಕೊಂಡು ಕೊನೆಗೆ ಸುಲಭವಾಗಿಯೇ ಸವಾರಿ ಮಾಡ ತೊಡಗಿದೆ. ಮಾರನೆಯ ದಿನ ಮಧ್ಯಾಹ್ನದವರೆಗು ಹೀಗೆ ಅರಣ್ಯದೊಳಗೆ ಹೋಗುತ್ತಿದ್ದು, ಸೂರ್ಯ ನೆತ್ತಿಗೇರುವಷ್ಟು ಹೊತ್ತಿಗೆ ನಮ್ಮ ಗುರಿ ತಲುಪಿದೆವು. ಕಾಡಿನ ಮಧ್ಯೆ ಒಂದು ಸಣ್ಣ ಬಿಡಾರದಂತಿತ್ತು. ನನಗೀಗ ಅರ್ಥವಾಯಿತು. ಇದು ಗೂಢಚಾರ ಪಾಠಶಾಲೆ. ಗೂಢಚರ್ಯೆಯ ಶಿಕ್ಷಣಕ್ಕಾಗಿ ನನ್ನನ್ನು ಇಲ್ಲಿಗೆ ಕರೆತರಲಾಗಿತ್ತು.


ಕಾಲ ಕಳೆದಂತೆ ಏನೇನೊ ಶಿಕ್ಷಣ ಹೊಂದಿದೆ. ಗೂಢಚರ್ಯೆ ಪ್ರಪಂಚದ ಎರಡನೇ ಹಳೆಯ ವೃತ್ತಿ. ವರುಣದೇವನೇ ಇದರ ಮೂಲ ಗುರುವಂತೆ. ಅಂತೆಯೇ ನನ್ನ ಗುರುವಿನ ಹೆಸರೂ ವರುಣಾಚಾರ್ಯ ಎಂದೇ ಆಗಿತ್ತು.

ಹಲವು ಮಾಸಗಳು ಕಳೆದವು. ಕಾಲ ಕಳೆದಂತೆ ನಾನು ಆ ಎಲ್ಲ ವಿಷಯಗಳಲ್ಲಿ ನಿಪುಣನಾಗತೊಡಗಿದೆ.


ಒಂದು ದಿನ ವರುಣಾಚಾರ್ಯರು ನನ್ನನ್ನು ಅವರ ಬಳಿ ಕರೆದು ಹೇಳಿದರು "ಇಂದಿಗೆ ನಿನ್ನ ಶಿಕ್ಷಣೆ ಮುಕ್ತಾಯವಾಯಿತು. ನಾನು ಹೇಳಿರುವ ಎಲ್ಲ ವಿಷಯಗಳನ್ನು ಯಾವಾಗಲೂ ನೆನಪಿರಲಿ"


"ಹಾಗೆಂದರೆ ... " ನಾನು ಹೇಳಿದೆ


"ನೀನು ಇಲ್ಲಿಂದ ಹೊರಡುವ ಕಾಲ ಬಂದಿದೆಯೆಂದು ಅರ್ಥ" ಎಂದು ಹೇಳಿದರು


"ಮುಂದೇನು?" ನಾನು ಕೇಳಿದೆ


"ನಿನ್ನ ಶಿಷ್ಯವೃತ್ತಿಯಿಂದ ನಾನು ಪ್ರಸನ್ನನಾಗಿದ್ದೇನೆ. ವಾತಾಪಿ ನಗರಕ್ಕೆ ಹಿಂತಿರುಗು. ಮಹಾಮಂತ್ರಿಗಳಿಗೆ ನೇರವಾಗಿ ವರದಿ ಒಪ್ಪಿಸುವ ರಾಯಭಾರ ಹೊತ್ತಿರುವ ಸಂಘದಲ್ಲಿ ನೀನೊಬ್ಬ ಪದಾತಿ. ಈ ಓಲೆ ತೆಗೆದುಕೊಂಡು ಸುರಂಗ ಮಾರ್ಗವಾಗಿ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗು. ಮುಂದಿನದನ್ನು ಅವರೇ ನೋಡುತ್ತಾರೆ" ಎಂದು ಹೇಳಿ ಒಂದು ಓಲೆ ನನ್ನ ಕೈಗಿತ್ತು, ನಾನು ಹೋಗಬೇಕಾಗಿರುವ ಸ್ಥಳದ ವಿವರಗಳನ್ನು ಕೊಟ್ಟರು.


ನಾನು ಅವರಿಗೆ ನಮಿಸಿ, ಪ್ರವರ ಹೇಳಿ ಹೊರಬಿದ್ದೆ. ವಾತಾಪಿನಗರವನ್ನು ಸೇರಿದಾಗ ಸಂಜೆಯಾಗಿತ್ತು. ಊರಿನಾಚೆ ಸ್ವಲ್ಪ ದೂರದಲ್ಲಿ ಒಂದು ಸ್ಥಳದಲ್ಲಿ ನಿಂತು, ಕುದುರೆಗೆ ನೀರು, ಹುರುಳಿ ಕೊಟ್ಟೆ. ನಾನೂ ಬೆಳಗಿನಿಂದ ಏನೂ ತಿಂದಿರಲಿಲ್ಲ, ಹೊಟ್ಟೆ ಹಸಿದಿತ್ತು ಆದರೆ ಇನ್ನೂ ಪೂರ್ಣ ಕತ್ತಲೆಯಾಗಿರಲಿಲ್ಲ. ನಾನು ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗಲು ಸ್ವಲ್ಪ ಸಮಯವಿತ್ತು. ಮನೆಗೆ ಹೋಗೋಣವೋ ಬೇಡವೋ ಎಂದು ಸುಮಾರು ಹೊತ್ತು ಯೋಚನೆ ಮಾಡತೊಡಗಿದೆ.

ಇನ್ನೂ ಸ್ವಲ್ಪ ಕತ್ತಲಾಗುವವರೆಗೆ ಕಾಯ್ದು ಮನೆ ಕಡೆ ಕುದುರೆ ತಿರುಗಿಸಿದೆ. ಸ್ವಲ್ಪ ದೂರದಲ್ಲೇ ಕುದುರೆಯನ್ನು ಕಟ್ಟಿ ಹಾಕಿ ಮನೆಯವರೆಗೆ ನಡೆದೇ ಹೋದೆ. ಮನೆಯಲ್ಲಿ ಯಾರಿರುವರು ಏನೂ ತಿಳಿಯದು. ಯಾರಿಗಾದರೂ ಕಾಣಿಸಿದರೆ? ನಾನು ಮಹಾರಾಜನ ಬೇಟೆ ತಪ್ಪಿಸಿದಾಗ ನನಗೆ ಗಡ್ಡ ಮೀಸೆಗಳಿರಲಿಲ್ಲ. ಈಗ ಪೂರ್ಣ ಗಡ್ಡ ಮೀಸೆಗಳಿದ್ದವು. ತಲೆಯ ಮೇಲಿದ್ದ ಜಟೆ ಈಗ ಹೋಗಿ ತಲೆ ತುಂಬ ಕೂದಲಿತ್ತು. ಎಂದೂ ತಲೆಗೆ ಪೇಟ ಧರಿಸದವ ಈಗ ಪೇಟ ಧರಿಸಿದ್ದೆ. ಯಾರೂ ನನ್ನನ್ನು ಗುರುತು ಹಿಡಿಯುವಂತೆ ಇರಲಿಲ್ಲ. ಆದರೂ ಮನೆಯೊಳಗೆ ಹೋಗಲು ಹೆದರಿ ಮರೆಯಲ್ಲೇ ಕಾಯ್ದು ನಿಂತೆ.


ಸ್ವಲ್ಪ ಹೊತ್ತಿನಲ್ಲಿ ಮನೆಯ ಕದ ತೆರೆದು ಅಮ್ಮ ಆಚೆ ಬಂದರು. ನಾನು ಮರೆಯಿಂದ ಇಳಿದು ಅಮ್ಮನ ಕಡೆ ನಡೆದೆ.


"ಯಾರಲ್ಲಿ" ಅಮ್ಮ ಕೂಗಿದರು.


"ನಾನು... ಅಮ್ಮ" ಎಂದು ಹತ್ತಿರಹೋದೆ.


"ಯಾರಪ್ಪ ನೀನು.... ಸೂರ್ಯ" ಅಮ್ಮ ಆಶ್ಚರ್ಯಪಟ್ಟರು.


"ಹೌದು, ನಾನೆ" ನಾನು ಹೇಳಿದೆ.


"ಏನಾಯಿತು? ಹೇಗೆ ತಪ್ಪಿಸಿಕೊಂಡೆ? ಈಗ ಎಲ್ಲಿರುವೆ? ಏನೀವೇಷ?" ಒಟ್ಟಿಗೆ ಪ್ರಶ್ನೆಗಳ ಸುರಿಮಳೆ ಮಾಡಿದರು


"ಒಂದೊಂದಾಗಿ ಹೇಳುವೆ. ನಾನು ತಪ್ಪಿಸಿಕೊಳ್ಳಲಿಲ್ಲ, ನನ್ನನ್ನು ಬಿಟ್ಟರು. ಇಷ್ಟು ದಿನ ಊರಿನಲ್ಲಿರಲಿಲ್ಲ ಇಂದು ಬಂದೆ. ನನಗಾವ ಅಪಾಯವೂ ಇಲ್ಲ ಹೆದರಬೇಡ. ನನ್ನ ಕಾಯಕಕ್ಕಾಗಿ, ಯಾರಿಗೂ ಗುರುತು ಸಿಗಬಾರದೆಂದು ಈ ವೇಷ" ನಾನೂ ಎಲ್ಲ ಒಟ್ಟಿಗೆ ಉತ್ತರಿಸಿದೆ.


"ಕಾಯಕಕ್ಕೆ ವೇಷವೇ? ಏನು ಕಾಯಕ? ಕಳ್ಳನಾಗಿರುವೆಯಾ?" ಪ್ರಶ್ನಿಸಿದರು


"ಇಲ್ಲ ಅಮ್ಮ, ನಾನು ಕಳ್ಳನಲ್ಲ. ದೇಶಸೇವೆಯ ಕೆಲಸ, ಆದರೆ ಗುಪ್ತ ಈಗ ಹೇಳಲಾರೆ" ಎಂದು ಉತ್ತರಿಸಿದೆ


"ಇದೇಕೆ ಹೀಗೆ? ಒಳಗೆ ಬಾ. ಮನೆಯವರನ್ನೆಲ್ಲ ನೋಡುವುದಿಲ್ಲವೆ?" ಅಮ್ಮ ಕೇಳಿದರು


"ನೋಡುವೆ, ಆದರೆ ಈಗಲ್ಲ. ನಾನು ಈಗ ಬೇರೆಲ್ಲೋ ಹೋಗಬೇಕು. ಯಾರಿಗೂ ನನ್ನ ಬಗ್ಗೆ ಹೇಳಬೇಡ" ಎಂದೆ.


"ಇಷ್ಟು ದಿನದ ಮೇಲೆ ಬಂದಿರುವೆ, ಇಷ್ಟು ಬೇಗ ಹೊರಟೆಯಾ?" ಎಂದರು


"ನಾನು ಕಳಿಸಿದ ಓಲೆ ಸಿಕ್ಕಿತೋ ಇಲ್ಲವೋ?" ನಾನು ಪ್ರತಿ ಪ್ರಶ್ನಿಸಿದೆ.


"ಸಿಕ್ಕಿತು, ಆದರೆ ಅದರಲ್ಲಿ ಏನೂ ವಿವರಣೆ ಇರಲಿಲ್ಲ. ಅದೊಂದೆ ನಮ್ಮಿಬ್ಬರಿಗೂ ಆಶಾಜನಕವಾಗಿತ್ತು. ಈಗಲಾದರೂ ನಿಜ ಸಂಗತಿ ಹೇಳು" ಎಂದು ಹೇಳಿದರು


"ಅಮ್ಮ, ತುಂಬಾ ಹೊಟ್ಟೆ ಹಸಿವಾಗಿದೆ. ತಿನ್ನಲು ಏನಾದರೂ ಇದೆಯೆ?" ಎಂದು ಕೇಳಿದೆ ಮಾತು ಮರೆಸಲು.


ಅಮ್ಮ ಒಳಗೆ ಹೋಗಿ ಬಟ್ಟೆಯಲ್ಲಿ ಕಟ್ಟಿ ಏನೋ ಬುತ್ತಿ ತಂದರು. ನಾನು ನಮ್ಮ ತಂದೆಯವರ ಬಗ್ಗೆ ವಿಚಾರಿಸಿದೆ. "ಅಪ್ಪ ಎಲ್ಲಿದ್ದಾರೆ ಹೇಗಿದ್ದಾರೆ?"


"ಒಳಗಿದ್ದಾರೆ. ನಾನು ಹಸು ನೋಡುವ ನೆಪ ಮಾಡಿ ಬಂದಿರುವೆ" ಎಂದರು


ಮತ್ತೆ ಪುಟ್ಟ ಹುಡುಗನೆನಿಸಿತು. ಅಮ್ಮ ತಂದ ಬೋಸಿ ನೀರಲ್ಲಿ ಕೈತೊಳೆದು, ಬುತ್ತಿ ತೆಗೆದೆ. ಅಮ್ಮ ತಮ್ಮ ಕೈಯಿಂದಲೇ ತಿನ್ನಿಸಿದರು. ಇಬ್ಬರೂ ಸ್ವಲ್ಪ ಕಣ್ಣೀರು ಹಾಕಿದೆವು. ಸ್ವಲ್ಪ ಹೊತ್ತಿನ ಬಳಿಕ ಊಟ ಮುಗಿಸಿ ಕೈತೊಳೆದು ಹೇಳಿದೆ.


"ಅಪ್ಪನಿಗೆ ತಿಳಿದರೂ ಯಾವಕಾರಣಕ್ಕೂ ಬೇರೆಯಾರಿಗೂ ತಿಳಿಯಬಾರದು, ನಾನಿನ್ನು ಹೊರಡಬೇಕು" ಎಂದು ಎದ್ದೆ.


ಅಷ್ಟು ಹೊತ್ತಿಗೆ ಅಪ್ಪ ದೀಪ ಹಿಡಿದು ಬಾಗಿಲಾಚೆ ಬಂದರು. "ಯಾರು...? ಯಾರಲ್ಲಿ...?"


ನಾನು ಅಮ್ಮನ ಚರಣ ಸ್ಪರ್ಶಿಸಿ, ಬೇಗನೇ ಅಪ್ಪನ ಬಳಿ ಹೋಗಿ "ನಾನು ಸೂರ್ಯ, ಅಮ್ಮನಿಗೆ ಎಲ್ಲ ವಿಷಯ ಹೇಳಿರುವೆ, ಯಾವಕಾರಣಕ್ಕೂ ನನ್ನ ಹೆಸರು ಕೂಗಬೇಡಿ ನಾನೀಗಲೇ ಹೋಗಬೇಕು" ಎಂದು ಹೇಳಿ ಅವರ ಚರಣ ಸ್ಪರ್ಶಿಸಿ, ಕುದುರೆಯ ಕಡೆ ಓಡಿ ಹೊರಟು ಹೋದೆ.


"ಅವನು ನಮ್ಮ ಸೂರ್ಯ! ನೋಡಿದೆಯಾ? ನಾನು ಹೇಳುತ್ತಿರಲಿಲ್ಲವೇ? ನಮ್ಮ ಸೂರ್ಯ....." ಎಂದು ಅಮ್ಮನಿಗೆ ಹೇಳುತ್ತಿದ್ದ ಅಪ್ಪನ ಧ್ವನಿ ನಾನು ಓಡುತ್ತಿದ್ದಂತೆ ದೂರದಲ್ಲಿ ಕುಂದುತ್ತಿತ್ತು.


ಇಷ್ಟು ಹೊತ್ತಿಗೆ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗುವ ಸಮಯವಾಗಿತ್ತು. ಊರಾಚೆ ಪಾಳುಬಿದ್ದ ಗುಡಿಯ ಬಳಿ ಹೋದೆ. ಎಲ್ಲೆಡೆ ಊರ್ಣನಾಭಗಳು ಬಲೆ ಕಟ್ಟಿ ಬಾಗಿಲ ಅಡ್ಡಕ್ಕೆ ಕಲ್ಲಿನ ಸ್ಥಂಭವೊಂದು ಬಿದ್ದಿತು. ಕುದುರೆಯ ಜೀನು ಬಿಚ್ಚಿ ಅದನ್ನು ತಿರುಗಿಸಿ ಅದರ ಬೆನ್ನ ಮೇಲೆ ಎರಡು ಏಟು ಕೊಟ್ಟೆ. ಕುದುರೆ ಲಾಯಕ್ಕೆ ಓಡಿತು. ನಾನು ಕೆಲ ಕ್ಷಣಗಳ ಕಾಲ ಮರೆಯಲ್ಲಿ ಕಾಯುತ್ತಿದ್ದೆ. ಎಲ್ಲವೂ ನಿಶ್ಯಬ್ಧವೆನೆಸಿದಮೇಲೆ ನಿಧಾನವಾಗಿ ಎದ್ದು ಬಾಗಿಲ ಅಡ್ಡಕ್ಕೆ ಬಿದ್ದ ಸ್ಥಂಭದಿಂದ ನುಸಿದು ಗುಡಿಯೊಳಗೆ ಹೊಕ್ಕೆ.


ಗುಡಿಯೊಳಗೆ ಒಂದು ಕಲ್ಲಿನ ಮೂರ್ತಿ. ಮೂರ್ತಿಯ ಹಿಂದೆ ನಡೆದು ಹೋದೆ. ಅಲ್ಲಿದ್ದ ಒಂದು ಸಣ್ಣ ಗುಬುಟನ್ನು ಒತ್ತಿದಾಗ ನನ್ನ ಕಾರಾಗ್ರಹದ ನೆಲದ ಮೇಲೆ ಬಾಗಿಲು ತೆರೆದಂತೆ ಇಲ್ಲೂ ನೆಲದಲ್ಲಿ ನಿಶ್ಯಬ್ದವಾಗಿ ಒಂದು ಬಾಗಿಲು ತೆರೆಯಿತು. ಇಳಿದುಹೋಗಲು ಮೆಟ್ಟಲುಗಳಿದ್ದವು. ನಿಧಾನವಾಗಿ ಮೆಟ್ಟಲು ಇಳಿದು ಸುರಂಗದೊಳಗೆ ಹೊಕ್ಕೆ. ಒಂದು ಸಣ್ಣ ದೀಪ ಉರಿಯುತ್ತಿತ್ತು. ಒಳಗಿನಿಂದ ಬಾಗಿಲು ಮುಚ್ಚುವ ಗುಬುಟು ಒತ್ತಿದೆ. ಸದ್ದಿಲ್ಲದೆ ಬಾಗಿಲು ಮುಚ್ಚಿಕೊಂಡಿತು. ದೀಪವನ್ನೆತ್ತಿಕೊಂಡು ಸುರಂಗದಲ್ಲಿ ನಡೆದು ಹೊರಟೆ.


ಸ್ವಲ್ಪ ಕಾಲ ನಡೆದು ಹೋದೆ. ಉದ್ದಕ್ಕೂ ನಾನು ವಾತಾಪಿ ನಗರದ ಕೆಳಗೆ ಹೋಗುತ್ತಿರಬಹುದೆಂಬ ನಿರೀಕ್ಷೆ. ಕೊನೆಗೆ ಒಂದು ಬಾಗಿಲ ಎದುರಿಗೆ ಬಂದು ನಿಂತೆ. ಬಾಗಿಲನ್ನು ಗುಪ್ತ ಸಂಜ್ಞೆಯಲ್ಲಿ ತಟ್ಟಿದೆ. ಬಾಗಿಲು ತೆರೆಯಿತು; ಒಳಗೆ ಹೋದೆ. ಅಲ್ಲಿ ಹಲವಾರು ಜನ ಕೂಡಿದ್ದರೂ ನನ್ನೊಡನೆ ಮಾತನಾಡಲು ಯಾರೂ ಬರಲಿಲ್ಲ. ಮುಂದೇನೆಂದು ನಿರೀಕ್ಷಿಸುತ್ತಾ ಮೂಲೆಯೊಂದರಲ್ಲಿ ಕಾಯ್ದು ನಿಂತೆ.


"ಹಿಂದೆ ತಿರುಗಬೇಡ. ವರುಣಾಚಾರ್ಯರ ಓಲೆ ತೆಗೆದುಕೊಡು" ಎಂದು ನನ್ನ ಕಿವಿಯಲ್ಲಿ ಯಾರೋ ಹೇಳಿದಹಾಗಾಯಿತು. ಈ ಮೂಲೆಯಲ್ಲಿ ನನ್ನ ಕಿವಿಯೊಳಗೆ ಯಾರಿರಬಹುದೆಂದು ನನ್ನ ವಸ್ತ್ರಗಳೊಳಗಿಂದ ಓಲೆಯನ್ನು ತೆಗೆದು ಕೈಯಲ್ಲಿ ಹಿಡಿದೆ. ಒಂದು ಕ್ಷಣದಲ್ಲಿ ಮಾಯವಾಯಿತು, ಆದರೆ ಅಷ್ಟರಲ್ಲಿ ನಾನು ಗೋಡೆಯಲ್ಲಿದ್ದ ಸಣ್ಣ ಕಿಂಡಿಯ ಬಾಗಿಲು ಮುಚ್ಚುತ್ತಿರುವುದನ್ನು ನೊಡಿದೆ. ಅದರೊಳಗಿನಿಂದ ಯಾರೋ ಕೈ ಹಾಕಿ ಓಲೆ ತೆಗೆದುಕೊಂಡಿರಬೇಕು ಎಂದುಕೊಂಡೆ.


ಸ್ವಲ್ಪ ಹೊತ್ತಿನ ಬಳಿಕ, ಮಹಾಮಂತ್ರಿಗಳು ಹಾಗು ನನಗೆ ಗೊತ್ತಿಲ್ಲದ ಒಂದಿಬ್ಬರು ಒಟ್ಟಿಗೆ ಬಂದು ಸಭೆಯನ್ನು ಕೂಗಿದರು. ಮಹಾಮಂತ್ರಿಗಳು ನುಡಿದರು "ಮಹಾರಾಜ ಪುಲಿಕೇಶಿ ಸಿಂಹಾಸನವನ್ನೇರಿದ ಮೇಲೆ ಮೊದಲಿಗೆ ಭೀಮಾನದಿ ತೀರದಲ್ಲಿ ಅಪ್ಪಯಕ ಹಾಗು ಗೋವಿಂದರನ್ನು ಸದೆಬಡೆದರು. ಅಪ್ಪಯಕ ಯುದ್ಧಭೂಮಿಯಿಂದ ಹೇಡಿಯಂತೆ ಓಡಿಹೋಗಿ, ಸಾಮಂತ ಗೋವಿಂದ ಶರಣಾಗತನಾದ. ಈ ಯುದ್ಧದಲ್ಲಿ ನೀವೆಲ್ಲ ಸಲ್ಲಿಸಿದ ಸೇವೆ ನೆನೆಸಿಕೊಳ್ಳಿ"


"ನಂತರ ರಾಜ್ಯ ವಿಸ್ತಾರಣಾತ್ಮಕ ಯುದ್ಧಗಳು - ವೈಜಯಂತಿಯ ಅಳಿದುಳಿದ ಕದಂಬರು, ತಲಕಾಡಿನ ಗಂಗರು, ಕರಾವಳಿಯ ಅಳೂಪರನ್ನು ಚಾಳುಕ್ಯ ಸೇನೆಗಳು ಸೋಲಿಸಿದ್ದು ನಿಮ್ಮ ಸಹಾಯದಿಂದಲೆ. ಕೊಂಕಣ ಹಾಗು ಪುರಿ ಬಂದರಿನ ಕಡಲ ಯುದ್ಧದಲ್ಲಿ ಈ ತಂಡದ ಯೋಗದಾನ ಯಾರೂ ಹೇಳಬೇಕಾಗಿಲ್ಲ. ಗುರ್ಜರ ಪ್ರದೇಶದ ಗುರ್ಜರರು, ಲಾಟರು ಹಾಗು ಮಾಲವರು, ಇವರೆಲ್ಲ ಸಾಮಂತರಾಗಲು ಸಹ ನೀವೆಲ್ಲ ಕೆಲಸ ಮಾಡಿದ್ದೀರಿ. ಕೊನೆಗೆ ಕಾಂಚೀಪುರದ ಪಲ್ಲವಾಧೀಶ ಮಹೇಂದ್ರವರ್ಮನ ಪರಾಜಯದ ಪ್ರಕ್ರಿಯೆ ಪ್ರಾರಂಭವಾಗಿದ್ದೂ ಇಲ್ಲಿಂದಲೇ" ಎಂದು ಮೊದಲು ಹುರಿದುಂಬಿಸಿದರು.


"ಈಗ ಉತ್ತರಾಪಥೇಶ್ವರನಾದ ಹರ್ಷ ಚಕ್ರವರ್ತಿಯಕಡೆಯವರು ನರ್ಮದೆಯ ತೀರದಲ್ಲಿ ನಮ್ಮ ಮೇಲೆ ಧಾಳಿ ಮಾಡುವ ಯೋಜನೆ ಹೂಡುತ್ತಿದ್ದಾರೆಂಬ ಸೂಕ್ಷ್ಮ ಸುದ್ಧಿ ತಿಳಿದು ಬಂದಿದೆ. ಹರ್ಷ ಚಕ್ರವರ್ತಿ ಧಾಳಿ ಮಾಡುವ ಮುನ್ನವೇ ನಾವು ಅವರ ಮೇಲೆ ಧಾಳಿ ಮಾಡಬೇಕೆಂಬುದೇ ಮಹಾರಾಜ ಪುಲಿಕೇಶಿಯ ಇಚ್ಚೆ. ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಗಿ ಮಹಾರಾಜ ಪುಲಿಕೇಶಿಗೆ ಜಯ ತರಿಸಿಕೊಡುವಿರಿ ಎಂಬ ನಂಬಿಕೆ ನನಗಿದೆ" ಎಂದು ಮುಂದುವರೆಸಿದರು.


ಇದಾದ ಮೇಲೆ ಮಹಾಮಂತ್ರಿಗಳು ಅಲ್ಲಿ ಸೇರಿದ್ದ ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಕೆಲಸಕ್ಕೆ ನೇಮಿಸಿದರು. ವೈರಿಯ ಸೇನೆಯ ಸಂಖ್ಯೆಗಳನ್ನು ತಿಳಿಯಲು ಒಬ್ಬ, ಅವರ ಬಿಡಾರಗಳ ಸ್ಥಳ ಗಳನ್ನು ತಿಳಿಯಲು ಮತ್ತೊಬ್ಬ, ಅವರು ಯುದ್ಧ ಭೂಮಿಗೆ ನಡೆದು ಬರುವ ದಾರಿ ತಿಳಿಯಲು, ಅವರ ಶಸ್ತ್ರಾಸ್ತ್ರಗಳ ವರದಿಗೆ, ಅವರಲ್ಲಿ ಒಡಕುಂಟು ಮಾಡುವ ಸಾಧನಗಳನ್ನು ಹೂಡಲು, ಅವರ ರಾತ್ರಿಯ ಕಾವಲು ಪದ್ಧತಿ ಹಾಗು ಕಾವಲುಗಾರರು ಬದಲಾಗುವ ಸಮಯಗಳನ್ನು ತಿಳಿಯಲು, ಹೀಗೆ ಏನೇನೊ ನಾನೆಂದೂ ಯೋಚಿಸದಂತಹ ಕಾರ್ಯಗಳಿಗೆ ಒಬ್ಬೊಬ್ಬರನ್ನು ನಿಯುಕ್ತಿಸಿದರು.


ಕಡೆಗೆ ಎಲ್ಲರೂ ತಮ್ಮ ತಮ್ಮ ಆಜ್ಞೆಗಳನ್ನು ಪಡೆದು ಈ ಕೋಣೆಯಲ್ಲಿದ್ದ ಹಲವಾರು ಬಾಗಿಲುಗಳಿಂದ ಹೊರಟುಹೋದರು. ನಾನಿನ್ನೂ ಅಲ್ಲೇ ಇದ್ದೆ. ಕೊನೆಗೆ ಮಹಾಮಂತ್ರಿಗಳು ನನ್ನನ್ನು ನೋಡಿದರು. "ಯುವಕ, ನಿನ್ನ ಶಿಕ್ಷಣೆ ಮುಗಿದಿದೆ. ವರುಣಾಚಾರ್ಯರು ಕೊಟ್ಟ ಓಲೆಯನ್ನು ನಾನು ಓದಿರುವೆ. ಅವರು ನಿನ್ನನ್ನು ಬಹಳ ಹೊಗಳಿದ್ದಾರೆ" ಎಂದರು.

ಒಂದು ಕ್ಷಣ ಮೌನ ತಳಿದು ಬಳಿಕ "ಮನೆಯ ಊಟ ರುಚಿಕರ ಅಲ್ಲವೆ?" ಎಂದರು


"ಆ....?"


"ಇರಲಿ, ನೀನು ಮನೆಗೆ ಹೋಗುವುದರಲ್ಲಿ ಸಂಶಯವೇ ಇರಲಿಲ್ಲ. ಈ ಸಂದರ್ಶನದ ಬಗ್ಗೆ ನಿನ್ನ ಅನಿಸಿಕೆಗಳು?" ಎಂದು ಕೇಳಿದರು


"ನಾನು ಏನು ಬೇಕಾದರೂ ಮಾಡಲು ಸಿದ್ಧ" ಎಂದೆ


"ನೀನು ಬ್ರಾಹ್ಮಣ. ನಿನ್ನ ಕೈಯಲ್ಲಿ ಅವರುಗಳು ಮಾಡುವ ಕೆಲಸ ಮಾಡಲಾಗುವುದಿಲ್ಲ. ಅವರುಗಳು ತರುವ ಸೂಚನೆ ಸುದ್ಧಿಗಳನ್ನು ಒಗ್ಗೂಡಿಸಿ, ಶೋಧಿಸಿ, ನಮಗೆ ಸಂಕ್ಷಿಪ್ತವಾಗಿ, ಯಾವ ವಿಷಯವೂ ಬಿಡದಂತೆ ಹೇಳುವುದು ನಿನ್ನ ಕೆಲಸ. ನೀನು ನಮ್ಮೊಡನೆ ನರ್ಮದಾ ತೀರದ ಯುದ್ಧ ಭೂಮಿಗೆ ಹೋಗುವ ಸಿದ್ಧತೆಗಳನ್ನು ಮಾಡಿಕೊ" ಎಂದು ನುಡಿದರು.


"ಸಿದ್ಧತೆಗಳು...?"


"ಏನಿದ್ದರೂ ಮಾಡಿಕೊ. ಇಂದು ರಾತ್ರಿ ಬೇಕಾದರೆ ಇಲ್ಲೇ ತಂಗುವ ಅವಕಾಶವಿದೆ. ನಾಳೆ ಬೆಳಗ್ಗೆ ಹೊರಡುವೆ" ಎಂದು ಹೇಳಿ ಹೊರಟುಹೋದರು.


ಅಂದು ಅಲ್ಲೇ ಮಲಗಿದ್ದೆ. ನನಗೀಗ ಮಲಗಲು ಹೆಚ್ಚು ಸಿದ್ಧತೆ ಬೇಕಾಗಿರಲಿಲ್ಲ. ಎಲ್ಲಿಯಂದರಲ್ಲಿ, ಮಲಗುವ ಸಾಮರ್ಥ್ಯ ಬೆಳೆಸಿಕೊಂಡಿದ್ದೆ. ಆದರೆ ಮಲಗಿದಾಗಲೂ ಒಂದು ಕಣ್ಣು ತೆರೆದೇ ಮಲಗಿರುತ್ತಿದ್ದೆ. ಮಾರನೆಯ ದಿನ ಬೆಳಗ್ಗೆ ಎದ್ದು ಸುರಂಗಮಾರ್ಗವಾಗಿ ಊರ ಹೊರಬಿದ್ದು ಮೊದಲೇ ನೇಮಿಸಿದ್ದ ಸ್ಥಳಕ್ಕೆ ಹೋದೆ. ಕುದುರೆ ಕಾದಿತ್ತು, ಜೊತೆಗೆ ಒಬ್ಬ ಭಟನೂ ಇದ್ದ. ಸ್ವಲ್ಪ ಪ್ರಯಾಣದ ನಂತರ ಮಹಾಮಂತ್ರಿಗಳೊಡನೆ ಕೂಡಿ ಅಲ್ಲಿಂದ ಒಟ್ಟಿಗೆ ಹೋರಟೆವು.


ನಾವು ಸುಮಾರು ಹದಿನೈದು ಜನ ಒಟ್ಟು. ದಿನ ನಿತ್ಯ ಸಂಜೆ ಯಾವುದಾದರು ನದಿ, ತೊರೆ ಅಥವ ಸರೋವರದ ಬಳಿ ಬಿಡಾರ ಊರುವುದು. ಮುಂಜಾವು ಎದ್ದು ಪ್ರಯಾಣ ಮುಂದುವರೆಸುವುದು. ಊರೂರುಗಳಲ್ಲಿ ಊಟ ಉಪಹಾರಗಳ ವ್ಯವಸ್ಥೆ ಹೇಗೋ ಅಗುತ್ತಿತ್ತು. ಮರಾಠ, ಮಾಳವ ಪ್ರದೇಶಗಳನ್ನು ಹಾಯ್ದು ಕೊನೆಗೆ ನರ್ಮದೆಯ ತೀರವನ್ನು ತಲುಪಿದೆವು. ಇಷ್ಟು ಪ್ರಯಾಣ ಸುಮಾರು ಒಂದು ಮಾಸ ಸಮಯ ತೆಗೆದುಕೊಂಡಿತ್ತು. ನರ್ಮದೆಯ ತೀರದಲ್ಲಿ ಒಂದು ಸಣ್ಣ ಪಟ್ಟಣವಾದ ವರಾಹಪುರಿ ನಮ್ಮ ಗುರಿಯಾಗಿತ್ತು.


ಊರಿನಿಂದ ಹಲವು ಕ್ರೋಶಗಳ ಹಿಂದೆಯೇ ಪರ್ವತಗಳಲ್ಲಿದ್ದ ಒಂದು ಗುಹೆ ಹೊಕ್ಕೆವು. ಇಲ್ಲಿ ಊರು ಸೇರುವ ಯೋಜನೆಯೊಂದನ್ನು ಹೂಡಿದೆವು. ಎಲ್ಲರೂ ಒಟ್ಟಿಗೆ ಹೋಗುವಂತಿಲ್ಲ. ಇಬ್ಬಿಬ್ಬರಾಗಿ, ಸಾಧ್ಯವಾದರೆ ಯಾರಾದರೂ ಹೆಂಗಸರೊಡಗೂಡಿ ಇಲ್ಲವಾದರೆ ನಮ್ಮಲ್ಲೆ ಯಾರಾದರು ಹೆಣ್ಣು ವೇಷ ಧರಿಸಿ ರಾತ್ರಿ ಸಮಯಗಳಲ್ಲಿ ಊರು ತಲುಪುವ ಯೋಜನೆಯಾಗಿತ್ತು. ಅದೇ ಊರಿನಲ್ಲಿದ್ದ ನಮ್ಮ ಪಡೆಯ ಒಬ್ಬ ಗೂಢಚಾರನ ಮನೆ ನಮ್ಮ ಕೇಂದ್ರವಾಗುವುದಿತ್ತು.


ಬಂದ ಹಲವು ದಿನಗಳಲ್ಲಿ ನಾವೆಲ್ಲರೂ ನಮ್ಮ ಈ ಕೇಂದ್ರವನ್ನು ಹೇಗೋ ತಲುಪಿದೆವು. ಗೂಢಚಾರರು ತಂದ ಸುದ್ಧಿಗಳಿಂದ ಯಾರಿಗೂ ನಾವು ಬಂದ ವಿಚಾರ ತಿಳಿದಿಲ್ಲವೆಂಬುದು ಖಚಿತವಾಯಿತು. ಮಹಾಮಂತ್ರಿಗಳು ಸ್ವಲ್ಪ ದಿನಗಳ ಕಾಲ ನಮ್ಮೊಡನೆಯೇ ಇದ್ದು ನನಗೆ ಇನ್ನಷ್ಟು ನಿರ್ದೇಶನ ನೀಡಿ ವಾತಾಪಿಗೆ ಹಿಂತಿರುಗಿದರು. ನಾನು ನನ್ನ ವಿಶ್ಲೇಷಣಾ ಕಾರ್ಯವನ್ನು ಆರಂಭಿಸಿದೆ. ನನಗೆ ಕೆಲಸ ಮಾಡಲು ಮನೆಯ ನೆಲಮಾಳಿಗೆಯಲ್ಲಿ ಒಂದು ಸಣ್ಣ ಕತ್ತಲು ಕೋಣೆ ಕೊಡಲಾಗಿತ್ತು. ಮೇಲಿನಿಂದ ನೋಡಿದರೆ ಕಂಬಳಿ ಹಾಸಿದ್ದ ನೆಲ. ಕಂಬಳಿಯ ಕೆಳಗೆ ಒಂದು ಗುಪ್ತ ದ್ವಾರ. ಅದು ನನ್ನ ತಲೆಯ ಮೇಲೆ ತೆರೆಯುತ್ತಿತ್ತು. ಗಾಳಿ ಬರಲು ನಾಲ್ಕಾರು ಸಣ್ಣ ಕಿಂಡಿಗಳು ಬಿಟ್ಟರೆ ಹೊರ ಪ್ರಪಂಚಕ್ಕೆ ಸಂಪರ್ಕವೇ ಇರಲಿಲ್ಲ. ನನಗಾದರೋ ಬಿಡುವಿಲ್ಲದ ಕೆಲಸ.


ಹತ್ತಾರು ಗೂಢಚಾರರು ಸಂದೇಶಗಳನ್ನು ತಂದು ಕೊಡುತ್ತಿದ್ದರು. ಎಲ್ಲವನ್ನೂ ದಿನಕ್ಕೆ ಎರಡು ಬಾರಿ ನನ್ನ ಗೂಡಿನೊಳಕ್ಕೆ ಮೇಲಿನಿಂದ ಹಾಕುತ್ತಿದ್ದರು. ಇವೆಲ್ಲವನ್ನೂ ಓದಿ, ಒಗ್ಗೂಡಿಸಿ, ಸತ್ಯಾಸತ್ಯಗಳನ್ನು ಬೇರ್ಪಡಿಸಿ, ವರದಿ ಬರೆದು, ಅದನ್ನು ಗುಪ್ತ ಲಿಪಿಗೆ ಬದಲಿಸಿ ಮೇಲಕ್ಕೆ ಹಿಂತಿರುಗಿಸುವುದು ನನ್ನ ಕೆಲಸ. ಮೇಲಿನವರು ಅದನ್ನು ನಾನಾ ಮಾರ್ಗಗಳಲ್ಲಿ ವಾತಾಪಿಗೆ ಕಳುಹಿಸುತ್ತಿದ್ದರು. ಹೀಗೆಯೇ ನಾಲ್ಕು ಮಾಸಗಳು ಕಳೆದವು. ನನಗೆ ಹರ್ಷರಾಜನ ಚರಿತ್ರೆ, ಇತಿಹಾಸಗಳ ಬಗ್ಗೆ ಬಹಳಷ್ಟು ಮಾಹಿತಿ ಸ್ವಲ್ಪ ಸ್ವಲ್ಪವಾಗಿ ತಿಳಿಯಿತು.


ಹರ್ಷವರ್ಧನನ ತಂದೆ ಪ್ರಭಾಕರವರ್ಧನ ಸ್ಥಾನೇಶ್ವರದ ಅರಸನಾಗಿದ್ದನು. ಪ್ರಭಾಕರವರ್ಧನನ ಹಿರಿಯ ಪುತ್ರ ರಾಜ್ಯವರ್ಧನ; ಹರ್ಷವರ್ಧನ ಕಿರಿಯ ಪುತ್ರ. ರಾಜ್ಯವರ್ಧನ-ಹರ್ಷವರ್ಧನರ ಸಹೋದರಿಯಾದ ರಾಜ್ಯಶ್ರೀ ಮೌಖಾರಿ ದೇಶದ ರಾಜ ಗೃಹವರ್ಮನ ವಧುವಾಗಿದ್ದಳು. ಪ್ರಭಾಕರವರ್ಧನನು ಮುಪ್ಪಿನಿಂದ ಮರಣಹೊಂದಿದ ದಿನವೇ ಆ ಸಮಯದಲ್ಲಿ ಮಾಳವ ದೇಶದ ರಾಜನು ಗೌಡದೇಶದ ರಾಜ ಶಶಾಂಕನನ್ನೊಡಗೂಡಿ ಹರ್ಷನ ಶ್ಯಾಲ ಗೃಹವರ್ಮನನ್ನು ಯುದ್ಧದಲ್ಲಿ ಸೋಲಿಸಿ, ಅವನನ್ನು ಕೊಂದು ಅವನ ಪತ್ನಿಯಾದ ರಾಜ್ಯಶ್ರೀಯನ್ನು ಕನ್ಯಾಕುಬ್ಜದಲ್ಲಿ ಬಂಧಿಸಿದ ಸುದ್ಧಿ ಸ್ಥಾನೇಶ್ವರವನ್ನು ಮುಟ್ಟಿತು.


ರಾಜ್ಯವರ್ಧನ ಇದರಿಂದ ಕೋಪಗೊಂಡು, ಹರ್ಷವರ್ಧನನನ್ನು ಸ್ಥಾನೇಶ್ವರದಲ್ಲಿಯೇ ಉಳಿಯಲು ಒಪ್ಪಿಸಿ, ತಾನೊಬ್ಬನೇ ಸೈನ್ಯದೊಡನೆ ಶಶಾಂಕ ರಾಜನ ಮೇಲೆ ದಂಡೆತ್ತಿ ಯುದ್ಧಕ್ಕೆ ಹೋದನು. ತಂದೆಯನ್ನು ಕಳೆದುಕೊಂಡು, ಶ್ಯಾಲನ ಸಂಹಾರವಾಗಿರುವುದು ತಿಳಿದು ಸಹೋದರಿ ಬಂಧಿತಳಾಗಿರುವುದನ್ನು ಕೇಳಿ, ಭ್ರಾತೃ ಯುದ್ಧಕ್ಕೆ ಹೋದಾಗ ಕುಮಾರ ಹರ್ಷವರ್ಧನನಿಗೆ ಕಾಲ ಕಳೆಯಲಾಗದೆ ಮದವೇರಿದ ಆನೆಯಂತಾದನು. ಸ್ವಲ್ಪವೇ ಕಾಲದಲ್ಲಿ ರಾಜ್ಯವರ್ಧನನ ಸೇನಾಧಿಪತಿಯೊಬ್ಬನು ಶೋಕಭಾವದಲ್ಲಿ ಬಂದು "ರಾಜ್ಯವರ್ಧನನು ಮಾಳವ ಸೈನ್ಯವನ್ನು ಸುಲಭವಾಗಿ ಸೋಲಿಸಿದರೂ ಗೌಡರಾಜ ಅವನನ್ನು ಸಂಧಾನಕ್ಕೆಂದು ಕರೆದು ವಂಚನೆಯಿಂದ ಅವನ ಸಂಹಾರ ಮಾಡಿದನು" ಎಂದು ಹೇಳಲು, ಕುಮಾರ ಹರ್ಷನು ಕಿಡಿಕಿಡಿಯಾದನು.


"ಗೌಡ ರಾಜನನ್ನು ಬಿಟ್ಟು ಇಂತಹ ಹೀನ ಕೃತ್ಯವನ್ನು ಬೇರೆ ಯಾರು ಮಾಡಲು ಸಾಧ್ಯ? ಅಗ್ನಿಪುತ್ರನಾದ ದೃಷ್ಟದ್ಯುಮ್ನನು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ದ್ರೋಣರನ್ನು ಕೊಂದಂತೆ! ಗಂಗಾನದಿಯ ನೊರೆಯಂತೆ ಅಕಳಂಕಿತನಾದ ಹಾಗು ಪರಶುರಾಮನ ವೀರ್ಯವನ್ನು ಮನಸ್ಸಿಗೆ ತರಿಸುವಂತಹ ನನ್ನ ಭ್ರಾತೃವನ್ನು ಕೊಲ್ಲುವ ಸಂಚು ಆ ಅನಾರ್ಯನನ್ನು ಬಿಟ್ಟು ಬೇರೆ ಯಾರ ಮನದಲ್ಲಿ ಬರಲು ಸಾಧ್ಯ? ಗ್ರೀಷ್ಮ ಋತುವಿನ ಸೂರ್ಯ ರಾಜೀವಪುಷ್ಪಗಳ ಸರೋವರಗಳನ್ನು ಬತ್ತಿಸುವಂತೆ ಸ್ನೇಹದಲ್ಲಿ ಕೈಯೊಡ್ಡಿ ನನ್ನ ಅರಸನ ಪ್ರಾಣ ಹೇಗೆ ತಾನೆ ತೆಗೆದಾನು? ಇವನ ಶಿಕ್ಷೆ ಏನಾದೀತು? ಯಾವ ಹುಳುವಾಗಿ ಪುನರ್ಜನಿಸುವನು? ಯಾವ ನರಕಕ್ಕೆ ಬಿದ್ದಾನು? ಯಾವ ಭ್ರಷ್ಟನೂ ಮಾಡದಂತಹ ಕೃತ್ಯವಿದು! ಈ ಪಾಪಿಯ ಹೆಸರನ್ನು ನನ್ನ ಜಿಹ್ವೆಗೆ ತಂದರೇ ನನ್ನ ಜಿಹ್ವೆ ಕಶ್ಮಲವಾಗುವುದು. ಸಣ್ಣ ಗೆದ್ದಲು ಚಂದನದ ಮರವನ್ನು ಕೊರೆಯುವಂತೆ ಯಾವ ವಿಧದಿಂದ ಈ ಕಠಿಣ ಪ್ರಾಣಿ ನನ್ನೊಡೆಯನ ಪ್ರಾಣ ತೆಗೆದ? ಸಿಹಿಯ ಲೋಭದಲ್ಲಿ ನನ್ನ ಭ್ರಾತೃವಿನ ಜೇನುತುಪ್ಪದಂತಹ ಪ್ರಾಣ ತೆಗೆದ ಮೂರ್ಖ, ಬರುತ್ತಿರುವ ಜೇನು ನೊಣಗಳ ಸಮೂಹವನ್ನು ನೋಡಲಿಲ್ಲವೇ? ಈ ದುರುಳ ಪಥಕ್ಕೆ ಬೆಳಕು ಚೆಲ್ಲಿ ಈ ಗೌಡರ ದುಷ್ಟ ತನ್ನ ಮನೆಯ ದೀಪದ ಕಜ್ಜಲದಂತೆ ಕೇವಲ ಮಲಿನ ನಾಚಿಕೆಗೇಡನ್ನೇ ಸಂಪಾದಿಸಿದ್ದಾನೆ. ಉತ್ತಮ ರತ್ನಗಳನ್ನು ಕೆಡಿಸುವ ಇಂತಹ ಕಶ್ಮಲ ರತ್ನವ್ಯಾಪಾರಿಗಳಿಗೆ ಶಿಕ್ಷೆ ಕೊಡುವುದು ಯಾರಿಗೆ ಸೂಕ್ತವಲ್ಲ? ಇವನ ಗತಿ ಇನ್ನೇನಾದೀತು?" ಎಂದೆಲ್ಲ ಹೇಳಿ ತನ್ನ ಕ್ರೋಧ ತೋಡಿಕೊಂಡನಂತೆ.


ಇತ್ತ ರಾಜ್ಯವರ್ಧನನ ಮರಣದಿಂದ ಸಿಂಹಾಸನ ಬರಿದಾಯಿತು. ಮಹಾಮಂತ್ರಿ ಭಂಧಿ ಪಂಡಿತರು "ದೇಶದ ಅನುಲೇಖ ಇಂದು ನಿರ್ಧಾರವಾಗಬೇಕಾಗಿದೆ. ಮಹಾರಾಜನು ಯುದ್ಧದಲ್ಲಿ ಮರಣ ಹೊಂದಿದ್ದಾನೆ, ಆದರೆ ಮಹಾರಾಜನ ಸಹೋದರನಾದ ರಾಜಕುಮಾರನು ಸಕಲ ಗುಣ ಸಂಪನ್ನನಾಗಿರುವನು. ರಾಜಕುಮಾರ ಮಹಾರಾಜನ ವಂಶದವನೇ ಆದರಿಂದ ಪ್ರಜೆಗಳಿಗೆ ಇವನ ಮೇಲೆ ನಂಬಿಕೆಯೂ ಇರುತ್ತದೆ. ಹಾಗಾಗಿ ರಾಜಕುಮಾರನೇ ರಾಜ್ಯಭಾರ ವಹಿಸಿಕೊಳ್ಳಬೇಕೆಂಬುದು ನನ್ನ ಅನಿಸಿಕೆ" ಎಂದು ಹೇಳಿದರು.


ಅದಕ್ಕೆ ಪ್ರತಿಯಾಗಿ ಹರ್ಷರಾಜನು "ನಿಮ್ಮ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ. ಆದರೆ ಭೂಮಿಯನ್ನು ಎತ್ತಿ ಹಿಡಿದಿರುವ ನಾಗರಾಜನನನ್ನೇ ಹಕ್ಕುದಾರನಾಗಿ ನೋಡುತ್ತಿರುವೆ. ಗ್ರಹಗಳು ಸುತ್ತುತ್ತಿರಲು ಅವುಗಳನ್ನು ನಿಲ್ಲಿಸಲು ನನ್ನ ಭ್ರೂಹಗಳು ಏಳುತ್ತವೆ. ಬಾಗದ ಪರ್ವತಗಳ ಕೇಶಗಳನ್ನೇ ಹಿಡಿದು ಬಗ್ಗಿಸುವ ಬಯಕೆ ನನಗೆ. ಆ ಆದಿತ್ಯನ ಕೈಗಳಿಗೇ ಶಂಖಗಳನ್ನು ಕೊಡುವ ಮನೋರಥ. ರಾಜನೆಂಬ ಬಿರುದಿನಿಂದಲೇ ಉದ್ರಿಕ್ತನಾಗಿ ವ್ಯಾಘ್ರನನ್ನೂ ನನ್ನ ಕಾಲುಮಣೆ ಮಾಡಿಕೊಳ್ಳಬೇಕೆನಿಸುತ್ತದೆ. ನನ್ನ ಮನವು ಕ್ರೋಧದಿಂದ ತುಂಬಿ ಶೋಕಕ್ಕೆ ಸ್ಥಳವೇ ಇಲ್ಲವಾಗಿದೆ. ಶಿಕ್ಷಾರ್ಹನಾದ ಗೌಡರಾಜ ಬದುಕಿರುವುದು ನನ್ನ ಹೃದಯವನ್ನು ಮುಳ್ಳಿನಂತೆ ಚುಚ್ಚುತ್ತಿದೆ. ಆ ಕ್ರೂರ ಪ್ರಾಣಿಯ ಪತ್ನಿಯರ ಈಕ್ಷಣದಲ್ಲಿ ಆಶ್ರುಗಳ ಮಳೆ ಸುರಿಸದಿದ್ದರೆ ನಾನು ಆಚಮ್ಯವಾದರು ಹೇಗೆ ಮಾಡಲಿ? ಆ ಗೌಡರಾಜನ ಚಿತೆಯ ಧೂಮಕ್ಕಾಗಿ ಸ್ವಲ್ಪ ಆಶ್ರು ಕಾದಿರಿಸಿದ್ದೀನಿ. ನನ್ನೊಡೆಯನ ಪಾದದ ಧೂಳಿನ ಸಾಕ್ಷಿಯಾಗಿ ಪ್ರತಿಜ್ಞೆ ಮಾಡುವೆ - ಬರುವ ಕೆಲವೇ ದಿನಗಳಲ್ಲಿ ಗೌಡರನ್ನು ನಿರ್ಮೂಲ ಮಾಡಿ ಅವರ ಬೆಂಬಲಿಗರನ್ನು ಬಂಧಿಸದಿದ್ದರೆ ಪತಂಗ ಹುಳುವಿನಹಾಗೆ ಎಣ್ಣೆಯ ಅಗ್ನಿಯಲ್ಲಿ ಹಾರಿ ಪ್ರಾಣ ತ್ಯಜಿಸುತ್ತಿನಿ." ಎಂಬ ಘೋರ ಪ್ರತಿಜ್ಞೆ ಮಾಡಿದನು. ತನ್ನ ಸಹೋದರಿಯನ್ನು ವಿಧವೆಯಾಗಿಸಿ, ಬಂಧಿಸಿ, ತನ್ನ ಸಹೋದರನನ್ನು ಕೊಂದ ವೈರಿ ಇನ್ನು ಜೀವಂತವಾಗಿರಲು ಸಿಂಹಾಸನವನ್ನೇರಿ ರಾಜನಾಗಲು ನಿರಾಕರಿಸಿ, ರಾಜನ ಕುಮಾರನೆಂದೇ ರಾಯಭಾರ ಹೊತ್ತು ಶಿಲಾದಿತ್ಯನೆಂಬ ಬಿರುದು ಪಡೆದನು.


ಮೊದಲು ಮಾಳವರನ್ನು ಸದೆಬಡೆಯಲು ಹರ್ಷನು ಮಹಾಮಂತ್ರಿ ಭಂಧಿಯನ್ನು ಒಂದು ಅಪಾರ ಸೈನ್ಯದೊಡನೆ ಕಳುಹಿಸಿದನು. ಸ್ವಲ್ಪ ಕಾಲದ ನಂತರ ಭಟನೊಬ್ಬನು ಭಂಧಿ ಪಂಡಿತರು ಮಾಳವ ರಾಜನ ಸೈನ್ಯವನ್ನು ಸೋಲಿಸಿ ಶರಣಾಗತರಾಗುವಂತೆ ಮಾಡಿ ಹತ್ತಿರದಲ್ಲಿಯೇ ಬಿಡಾರ ಊರಿರುವರೆಂದು ಓಲೆ ತಂದು ಹರ್ಷನ ಮುಂದಿಟ್ಟನು. ಹರ್ಷನು ಭಂಧಿಯನ್ನು ಭೇಟಿ ಮಾಡಲು ಧಾವಿಸಿ, ರಾಜ್ಯಶ್ರೀಯ ವಿಷಯವನ್ನು ಕುರಿತು ಅವರನ್ನು ಕೇಳಿದನು. ಆಗ ಅವರು "ಮಹಾರಾಜ, ರಾಜ್ಯವರ್ಧನನ ಮರಣದನಂತರ ಕನ್ಯಾಕುಬ್ಜವನ್ನು ಗುಪ್ತನೆಂಬ ರಾಜನು ಗ್ರಹಿಸಿದನು ಎಂದು ಜನರ ಮಾತುಗಳಿಂದ ತಿಳಿದುಬಂದಿತು. ಆಗ ಮಹಾರಾಣಿ ರಾಜ್ಯಶ್ರೀ ಬಂಧನದಿಂದ ತಪ್ಪಿಸಿಕೊಂಡು ತನ್ನ ಸಖಿಯರೊಡನೆ ವಿಂದ್ಯಾ ಪರ್ವತಗಳ ಕಾಡಿಗೆ ಹೊರಟುಹೋದಳಂತೆ. ಅಂದಿನಿಂದ ಹತ್ತಾರು ಶೋಧಕ ವೃಂದಗಳು ಮಹಾರಾಣಿಯನ್ನು ಹುಡುಕಿಕೊಂಡು ಹೋಗಿದ್ದಾರೆ. ಆದರೆ ಯಾರಿಗೂ ಮಹಾರಾಣಿ ಸಿಕ್ಕಲಿಲ್ಲ" ಎಂದು ಹೇಳಿದರು.


ಇದನ್ನೂ ಕೇಳಿದ ಹರ್ಷವರ್ಧನನು ರಾಜ್ಯದ ಕೆಲಸಗಳಿಗೆ ಜನರನ್ನು ನೇಮಿಸಿ ಕುದುರೆ ಏರಿ ಒಂದು ಸಣ್ಣ ಸೈನಿಕರ ಗುಂಪಿನೊಡನೆ ರಾಜ್ಯಶ್ರೀಯನ್ನು ಹುಡುಕಲು ವಿಂಧ್ಯಾಚಲಕ್ಕೆ ತೆರಳಿದನು. ವಿಂಧ್ಯಾಚಲದಲ್ಲಿ ಭಿಲ್ಲ ಮುಖಂಡನೊಬ್ಬನು ಹರ್ಷರಾಜನನ್ನು ಅಗ್ನಿ ಪ್ರವೇಷ ಮಾಡಲು ಹೊರಟಿದ್ದ ರಾಜ್ಯಶ್ರೀಯ ಬಳಿ ಕರೆದೊಯ್ದು ಭ್ರಾತೃ-ಭಗಿನೀಯರ ಸಂಗಮಕ್ಕೆ ಕಾರಣನಾದನು.


ನಂತರ ಹರ್ಷನು "ಜಂಬೂದ್ವೀಪದಾದ್ಯಂತ ಎಲ್ಲ ರಾಜರಿಗೆ ಎರಡು ವಿಕಲ್ಪಗಳನ್ನು ಹೇಳಿ. ಕಪ್ಪ ಕಾಣಿಕೆ ಸಲ್ಲಿಸುವುದು ಇಲ್ಲವಾದರೆ ಯುದ್ಧಕ್ಕೆ ಸಿದ್ಧವಾಗುವುದು. ಅವರು ಬೇಕಾದರೆ ತಲೆ ಬಾಗಲಿ ಇಲ್ಲವಾದರೆ ಧನಸ್ಸು ಬಾಗಿಸಲಿ. ತಮ್ಮ ಕರ್ಣಗಳನ್ನು ನನ್ನ ಆಜ್ಞೆಯಿಂದ ಅಲಂಕರಿಸಲಿ ಇಲ್ಲವಾದರೆ ತಮ್ಮ ಧನಸ್ಸು ದೊರಕದಿಂದ ಅಲಂಕರಿಸಿಕೊಳ್ಳಲಿ. ತಮ್ಮ ತಲೆಯಮೇಲೆ ನನ್ನ ಪಾದದ ಧೂಳು ಹೊತ್ತುಕೊಳ್ಲಲಿ ಇಲ್ಲವಾದರೆ ಕಿರೀಟಗಳನ್ನು ಧರಿಸಲಿ. ನನ್ನ ಭ್ರಾತೃವಿನ ಹಂತಕರಿಗೆ ಶಿಕ್ಷೆ ವಿಧಿಸಿ, ಸುತ್ತ ಮುತ್ತಲಿನ ದೇಶಗಳಿನ್ನೂ ನಮ್ಮ ಹಿಡಿತಕ್ಕೆ ತಂದುಕೊಳ್ಳುವ ವರೆಗು ನಾನು ನನ್ನ ಬಲಗೈಯಿಂದ ಊಟಮಾಡುವುದಿಲ್ಲ" ಎಂದು ಮತ್ತೊಂದು ಪ್ರತಿಜ್ಞೆ ಮಾಡಿ ಎಲ್ಲರಿಗೂ ಯುದ್ಧಕ್ಕೆ ಸಿದ್ಧರಾಗುವ ಆಜ್ಞೆಮಾಡಿದನು. ಅಂತೆಯೇ ಐದು ಸಹಸ್ರ ಆನೆ, ಎರಡು ಸಹಸ್ರ ರಥ ಹಾಗು ಐವತ್ತು ಸಹಸ್ರ ಪದಾತಿಗಳ ಸೈನ್ಯದೊಡನೆ ಪೂರ್ವದಿಂದ ಪಶ್ಚಿಮದವರೆಗು ಎಲ್ಲರನ್ನೂ ಸದೆಬಡೆದನು. ಆರು ವರ್ಷಗಳ ಯುದ್ಧಾನಂತರ ಇಡೀ ಉತ್ತರಾಪಥವನ್ನು ತನ್ನ ಆಧೀನಕ್ಕೆ ತಂದುಕೊಂಡು ಅರವತ್ತು ಸಹಸ್ರ ಆನೆಗಳು ಹಾಗು ಒಂದು ಲಕ್ಷ ರಥಗಳ ಸೈನ್ಯ ಮಾಡಿಕೊಂಡು ಉತ್ತರಾಪಥೇಶ್ವರನೆಂಬ ಬಿರುದು ಹೊಂದಿ ಕೊನೆಗೆ ಸಿಂಹಾಸನವನ್ನೇರಿದನು.


ಈ ಸುದ್ಧಿಗಳೆಲ್ಲ ಬಂದಂತೆ ನಮಗೆ ಹರ್ಷರಾಜನು ಪುಲಿಕೇಶಿ ಅರಸನ ಮೇಲೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರುವ ಸುದ್ಧಿಗಳೂ ತಲುಪಿದವು. ಆ ಅಪಾರ ಸೈನ್ಯವನ್ನು ಸಿದ್ಧಗೊಳಿಸಿ ದೇಶದ ಸೀಮೆಯಾದ ನರ್ಮದಾ ನದಿ ತೀರದಲ್ಲಿ ಬಿಡಾರ ಊರಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಈ ವಾರ್ತೆಗಳೆಲ್ಲ ನಮಗೆ ತಿಳಿದುಬಂದ ಕ್ಷಣದಲ್ಲಿ ನಾನು ವಾತಾಪಿನಗರಕ್ಕೆ ಸಂದೇಶ ಕಳುಹಿಸಿದೆ. ಅಂತೆಯೇ ದಳಶಕ್ತಿಗಳು, ದೌರ್ಬಲ್ಯಗಳು, ಹಾಗು ಸೈನ್ಯಕ್ಕೆ ಸಂಬಂಧಿಸಿದ ಇತರ ವಾರ್ತೆಗಳನ್ನೂ ಕಳುಹಿಸಿದೆ.


ನೋಡುತ್ತಿದ್ದಂತೆಯೇ, ಕೆಲವೇ ದಿನಗಳಲ್ಲಿ ಎರಡೂ ಸೈನ್ಯಗಳು ನರ್ಮದೆಯ ತೀರದಲ್ಲಿ ಬಂದು ಎದುರಿಸಿ ನಿಂತವು. ದಕ್ಷಿಣ ತೀರದಲ್ಲಿ ಪುಲಿಕೇಶಿ ಅರಸನ ಸಮರ್ಥ ಧನುರ್ಧರರಿಂದ ಕೂಡಿದ ಅಪಾರ ಆನೆಯ ಸೈನ್ಯ, ಉತ್ತರ ತೀರದಲ್ಲಿ ನಿಪುಣ ಕುಂತಲಧರರಿಂದ ಕೂಡಿದ ಪ್ರಬಲ ರಥಗಳ ಸೈನ್ಯ. ಪುಲಿಕೇಶಿ ಅರಸ ಹಾಗು ಹರ್ಷರಾಜ ಇಬ್ಬರು ಘಟಾನುಘಟಿಗಳು ಯುದ್ಧಭೂಮಿಗೆ ತಮ್ಮ ತಮ್ಮ ಸೈನ್ಯಗಳನ್ನು ನಿರ್ದೇಶಿಸಲು ಬಂದು ನಿಂತರು.

ಘೋರ ಯುದ್ಧ ಆರಂಭವಾಯಿತು. ಹರ್ಷರಾಜನ ಕಡೆಯವರು ಕದನಕ್ಕೆ ನಾಂದಿ ಹಾಡುತ್ತ ನಮ್ಮನ್ನು ಕುಂತಲಗಳಿಂದ ಹಾಗು ದೊಡ್ಡ ದೊಡ್ಡ ಶಿಲೆಗಳನ್ನು ಎಸೆಯುವ ಆಯುಧಗಳಿಂದ ಆಕ್ರಮಣ ಮಾಡಿದರು. ಪುಲಿಕೇಶಿ ರಾಜನ ಧ್ಯೇಯ ನದಿಯನ್ನು ದಾಟಿ ಆಕ್ರಮಣ ಮಾಡುವುದಾಗಿತ್ತು. ಆದರೆ ವೈರಿಗಳು ಅದಕ್ಕೆ ಅವಕಾಶವೇ ಕೊಡಲಿಲ್ಲ. ನಮ್ಮ ಸೈನಿಕರು ನೀರಿಗಿಳಿದಂತೆ ಅವರು ಶಿಲೆಗಳನ್ನು ಎಸೆದು ನಮ್ಮವರನ್ನು ಕೊಲ್ಲುತ್ತಿದ್ದರು ಇಲ್ಲವಾದರೆ ಗಾಯಗೊಳಿಸುತ್ತಿದ್ದರು. ಹಲವಾರು ದಿನ ಹೀಗೆಯೇ ನಡೆಯಿತು. ನಮ್ಮ ಸೈನ್ಯದ ಉತ್ಸಾಹ ಕಿಂಚಿತ್ತು ಕುಂದ ತೊಡಗಿತು.


ಕೊನೆಗೆ ನಮ್ಮ ಕಡೆಯ ಸೇನಾಪತಿಗಳು ನಮ್ಮ ಬಳಿ ಇದ್ದ ವಿಶಿಷ್ಟ ದರ್ಪಣಾಸ್ತ್ರವನ್ನು ಪ್ರಯೋಗಿಸುವ ನಿರ್ಣಯ ಮಾಡಿದರು. ಅಂತೆಯೇ ಮಾರನೆಯ ದಿನ ಸೂರ್ಯನು ನೆತ್ತಿಗೇರಿದಾಗ ನಮ್ಮ ಸೈನಿಕರು ನದಿಯಬಳಿ ಹೋಗಿ ನಿಂತರು. ಅವಕಾಶ ಸಿಕ್ಕಿದ ಕೂಡಲೆ ಅವರು ನದಿಯನ್ನು ದಾಟಿ ಆಕ್ರಮಣಮಾಡುವುದಾಗಿತ್ತು. ಅವಕಾಶ ದೊರಕಿಸುವುದು ದರ್ಪಣಾಸ್ತ್ರದ ಗುರಿಯಾಗಿತ್ತು. ದರ್ಪಣಾಸ್ತ್ರ ಪ್ರಯೋಗ ಮಾಡುವವರು ತೀರದಲ್ಲಿ ದೊಡ್ಡ ದೊಡ್ಡ ದರ್ಪಣಗಳನ್ನು ಹಿಡಿದು ನಿಂತರು. ಸೇನಾಧಿಪತಿಯಿಂದ ಅಪ್ಪಣೆ ಬರುತ್ತಲೇ ಈ ರಾಕ್ಷಸಗಾತ್ರದ ದರ್ಪಣಗಳನ್ನು ನೆಟ್ಟಗೆ ನಿಲ್ಲಿಸಿ ಸೂರ್ಯನ ಕಿರಣಗಳು ಅವುಗಳಿಂದ ಪ್ರತಿಬಿಂಬಿಸಿ ಶತ್ರುಗಳ ಕಣ್ಣು ಕುಕ್ಕುವಂತೆ ಮಾಡಲಾಯಿತು. ಆ ಕೋಲಹಲದಲ್ಲಿ ನಮ್ಮ ಸೈನಿಕರು ನದಿಯೊಳಗೆ ಧುಮುಕಿ, ನದಿಯನ್ನು ದಾಟಿ ಶತ್ರುಗಳೊಡನೆ ಹೋರಾಡಲು ಆರಂಭಿಸಿದರು. ಸ್ವಲ್ಪವೇ ಕಾಲದಲ್ಲಿ ನಮ್ಮ ವೀರ ಸೈನಿಕರು ಹರ್ಷರಾಜನ ಸೈನ್ಯವು ದಿಕ್ಕಾಪಾಲಾಗಿ ಓಡುವಂತೆ ಮಾಡಿದರು.


ಕಂಗೆಟ್ಟ ಹರ್ಷರಾಜನ ಸೈನ್ಯವು ಪಲಾಯನ ಮಾಡಿತು. ಯುದ್ಧದ ಈ ಪಾದದಲ್ಲಿ ಹರ್ಷರಾಜನ ಸೈನ್ಯವು ಬಹಳಷ್ಟು ನಷ್ಟ ಹೊರಬೇಕಾಯಿತು. ನಮ್ಮಲ್ಲಿಯೂ ಸಾಕಷ್ಟು ಭಟರು ಹತರಾಗಿ ಮತ್ತಷ್ಟು ಜನ ಗಾಯಗೊಂಡಿದ್ದರೂ, ಯುದ್ಧದ ಈ ಹಂತ ನಮ್ಮದೆನಿಸಿತು. ಆದರೆ ಹರ್ಷರಾಜನು ಇನ್ನೂ ಸೋಲನ್ನೊಪ್ಪಿಲ್ಲವೆನ್ನುವುದನ್ನು ನಾವೆಲ್ಲ ಅರಿತಿದ್ದೆವು. ವೈರಿ ಸೈನ್ಯದ ಮುಂದಿನ ಸಂಚನ್ನು ಕಾಯ್ದು ನಮ್ಮ ತೀರದಲ್ಲಿಯೇ ಬಿಡಾರ ಮುನ್ನಡೆಸಿದೆವು. ಸ್ವಲ್ಪವೇ ಕಾಲದಲ್ಲಿ ಸ್ವತಃ ಹರ್ಷರಾಜನೇ ಮುಂದಾಳತ್ವ ವಹಿಸಿಕೊಂಡು ವಿಶಾಲ ಕುಂಜರ ಸೈನ್ಯದೊಡನೆ ಯುದ್ಧಭೂಮಿಗೆ ಬರುತ್ತಿರುವ ಸುದ್ಧಿ ಗೂಢಚಾರರಿಂದ ತಿಳಿಯಿತು.


ಮಾರನೆಯ ದಿನ ಮತ್ತೆ ಯುದ್ಧ ಪ್ರಾರಂಭವಾಯಿತು. ಮತ್ತೆ ಮೊದಲಿನಂತೆ ತುಲದ ಎರಡೂ ಕಡೆ ಒಂದೇ ಭಾರದಂತೆ ಯಾವ ಸೈನ್ಯಕ್ಕೂ ಏನೂ ಸಾಧಿಸಲಾಗಲಿಲ್ಲ. ಈ ಕಗ್ಗಂಟು ಬಹಳ ದಿನಗಳ ಕಾಲ ಸಾಗಿತು. ದರ್ಪಣಾಸ್ತ್ರದ ನವ್ಯತೆ ಮುಗಿದುಹೋಗಿ ಈಗ ಅವರು ಆ ಅಸ್ತ್ರ ಪ್ರಯೋಗಕ್ಕೆ ಸಿದ್ಧರಾಗಿದ್ದರು. ಸಂತುಲನವನ್ನು ಮುರಿಯಲು ಹಾಗು ವೈರಿಯ ಮೇಲೆ ಜಯ ಸಾಧಿಸಲು ಪುಲಿಕೇಶಿ ಅರಸನು ನಮ್ಮ ಮತ್ತೊಂದು ವಿಶೇಷ ಅಸ್ತ್ರವಾದ ಅಗ್ನಿಯಸ್ತ್ರವನ್ನು ಪ್ರಯೋಗ ಮಾಡುವ ನಿಶ್ಚಯ ಮಾಡಿದನು.


ರಾತ್ರಿ ಕತ್ತಲಾಗಿ ಸುಮಾರು ಹೊತ್ತಾಗಿತ್ತು. ಆಗ ಸದ್ದಿಲ್ಲದೆ ನಮ್ಮ ಧನುರ್ಧರರನ್ನು ಸಾಲಾಗಿ ನದಿಯ ನಮ್ಮ ಕಡೆಯ ತೀರದಲ್ಲಿ ನಿಲ್ಲಿಸಿದೆವು. ಅಗ್ನಿ ಶರಗಳನ್ನು ಸಿದ್ಧಗೊಳಿಸಿ ಧನುರ್ಧರರಿಗೆ ಒದಗಿಸುವವರೂ ಸಿದ್ಧರಾದರು. ಈ ಶರಗಳ ವಿಶಿಷ್ಟತೆ ಏನೆಂದರೆ ಇವು ಸಾಮಾನ್ಯ ಶರಗಳಿಗಿಂತ ಹೆಚ್ಚು ಉದ್ದವಾಗಿದ್ದು ಇವುಗಳಿಗೆ ತೈಲದಲ್ಲಿ ಹಾಗು ಕೀಲೆಣ್ಣೆಯಲ್ಲಿ ಅದ್ದಿ ಸಿದ್ಧಪಡಿಸಿದ ಉದ್ದವಾದ ವಸ್ತ್ರಗಳು ಸುತ್ತಲ್ಪಟ್ಟಿದ್ದವು. ಕೊನೆಗೆ ನಮ್ಮ ಅಗ್ನಿಯಸ್ತ್ರಗಳಿಗೆ ಅಗ್ನಿಯನ್ನು ಕೊಡುವ ಭಟರೂ ಸಿದ್ಧರಾಗಿ ನಿಂತರು. ಸೇನಾದಿಪತಿಯ ಆಜ್ಞೆ ಬಂದಂತೆ ಧನುರ್ಧರರು ಶರಗಳನ್ನು ಧನುಸ್ಸಿಗೆ ಏರಿಸಿ ದೊರಕವನ್ನು ಕಿವಿಗೆಳೆದರು, ಅಗ್ನಿ ಕೊಡುವ ಭಟರು ಶರಗಳಿಗೆ ಅಗ್ನಿ ತಗುಲಿಸಿದರು, ಧನುರ್ಧರರು ಆ ಶರಗಳ ಪ್ರಯೋಗ ಮಾಡಿದರು. ಅಷ್ಟು ಹೊತ್ತಿಗೆ ಶರ ಒದಗಿಸುವವರು ಹೊಸ ಶರಗಳನ್ನು ಸಂಯೋಜಿಸುತ್ತಿದ್ದರು.


ಆಗ್ನೇಯಸ್ತ್ರಗಳು ಹರ್ಷರಾಜನ ಸೈನ್ಯದ ಬಿಡಾರದ ಮೇಲೆ ಬಿದ್ದಂತೆ ಎಲ್ಲೆಡೆ ಕೋಲಾಹಲ. ವೈರಿಯ ಆನೆಗಳು ನಿಶೀತದಲ್ಲಿ ಬಂದು ಬೀಳುತ್ತಿದ್ದ ಅಗ್ನಿ ಜ್ವಾಲೆಗಳನ್ನು ಕಂಡು ಬೆದರಿ ತಮ್ಮ ಸೈನ್ಯದವರನ್ನೇ ತುಳಿದು ಓಡತೊಡಗಿದವು. ಎಲ್ಲೆಡೆ ಬೆಂಕಿ, ಶಿಬಿರಗಳೆಲ್ಲ ಧೂಮವಾಗಿ ಹೋದವು. ಮಾರನೆಯ ದಿನ ಪ್ರಾತಃ ಕಾಲದಲ್ಲಿ ಎದುರು ತೀರವನ್ನು ನೋಡಿದಾಗ ಅಲ್ಲಿ ಕಂಡದ್ದು ಕೇವಲ ಹತವಾದ ಕುಂಜರಗಳು, ಭಟರು; ಅಲ್ಲಿಗೆ ಯುದ್ಧವು ಮುಗಿದಿತ್ತು.


ಹರ್ಷರಾಜನನಿಗೀಗ ತಾನು ದಕ್ಷಿಣಾಪಥವನ್ನು ಜಯಿಸುವುದು ಅಸಾಧ್ಯವೆಂದು ಮನದಟ್ಟಾಗಿತ್ತು. ಪುಲಿಕೇಶಿ ಅರಸನು ಯುದ್ಧದಲ್ಲಿ ಜಯ ಹೊಂದಿದರೂ ಹರ್ಷರಾಜನ ಶಕ್ತಿ ಹಾಗು ಪ್ರಾಬಲ್ಯತೆ ಅರಿತಿದ್ದನು. ಉತ್ತರಾಪಥವನ್ನು ತನ್ನದಾಗಿಸಿಕೊಳ್ಳುವುದು ಸುಲಭಕಾರ್ಯವಲ್ಲವೆಂಬುದೂ ಅರಿತಿದ್ದನು. ಕೆಲವು ದಿನಗಳ ನಂತರ ವೈರಿ ಪಡೆಯ ಒಬ್ಬ ದೂತನು ಹರ್ಷರಾಜನ ಓಲೆಯೊಂದನ್ನು ತೆಗೆದುಕೊಂಡು ಬಂದನು.


ದೂತನನ್ನು ಪುಲಿಕೇಶಿಯ ರಾಜ್ಯ ಸಭೆಗೆ ಕರೆಸಲಾಯಿತು. ದೂತನು ಪುಲಿಕೇಶಿ ಅರಸನಿಗೆ ತಲೆಬಾಗಿ ಕಾಣಿಕೆ ಸಲ್ಲಿಸಿ, ನಂತರ "ಮಹಾರಾಜ ಪುಲಿಕೇಶಿಗೆ ಜಯವಾಗಲಿ. ನನ್ನ ಒಡೆಯನಾದ ಹರ್ಷವರ್ಧನ ಮಹಾರಾಜನ ಕಡೆಯಿಂದ ಓಲೆಯೊಂದನ್ನು ತಂದಿರುವೆ. ಅದನ್ನು ಓದಿ ಹೇಳುವ ಅಪ್ಪಣೆ ಬೇಡುವೆ" ಎಂದು ಹೇಳಿದನು.


"ಅಪ್ಪಣೆ ಇದೆ" ಅರಸ ಉತ್ತರಿಸಿದನು.


"ಹರ್ಷವರ್ಧನ ಚಕ್ರವರ್ತಿ ಚಾಳುಕ್ಯರ ಕಡೆ ಸಂಧಾನದ ಕೈ ಬೆಳೆಸಲು ಸಿದ್ಧರಾಗಿರುತ್ತಾರೆ. ಅವರು ಪುಲಿಕೇಶಿ ಮಹಾರಾಜರೊಡನೆ ಕೂಡಿ ಸಂಧಾನದ ವಿವರಗಳನ್ನು ಚರ್ಚಿಸುವ ಅನುಮತಿಯನ್ನು ಕೇಳುತ್ತಾರೆ. ಸಾಧ್ಯವಾದಷ್ಟು ಶೀಘ್ರವಾಗಿ ಪುಲಿಕೇಶಿ ಮಹಾರಾಜರು ಹರ್ಷ ಚಕ್ರವರ್ತಿಯ ಆತಿಥ್ಯವನ್ನು ಸ್ವೀಕರಿಸುತ್ತಾರೆಂಬ ನಂಬಿಕೆ ಹೊಂದಿರುತ್ತಾರೆ. ಪುಲಿಕೇಶಿ ಮಹಾರಾಜರು ದೂತರ ಮೂಲಕ ಉತ್ತರ ಕಳುಹಿಸಲೆಂದು ಕೋರುತ್ತಾರೆ" ಎಂದು ದೂತನು ಓಲೆಯನ್ನೋದಿದನು.


"ನಮ್ಮ ಮಂತ್ರಿಗಳ ಜೊತೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಉತ್ತರ ಕೊಡುವೆವು. ಅಲ್ಲಿಯವರೆಗು ಈ ದೂತನನ್ನು ನಮ್ಮ ಅತಿಥಿಯಾಗಿ ಕಾಣುವುದು" ಎಂದು ಹೇಳಿ ಪುಲಿಕೇಶಿ ಅರಸ ಸಭೆಯನ್ನು ಅಂತ್ಯ ಗೊಳಿಸಿದನು.


ಕಾಲ ಕ್ರಮೇಣವಾಗಿ ಸಂಧಾನ ಧೃಡವಾಯಿತು. ಅದರ ಪ್ರಕಾರ ಪುಲಿಕೇಶಿ- ಹರ್ಷವರ್ಧನರ ಸಾಮ್ರಾಜ್ಯಗಳ ಸೀಮೆ ನರ್ಮದಾ ನದಿಯೆಂದು ನಿಶ್ಚಯ ಮಾಡಲಾಯಿತು. ಯಾರೊಬ್ಬರೂ ಇನ್ನೊಬ್ಬರ ಮೇಲೆ ಯುದ್ಧ ಆರಂಭಿಸಬಾರದೆಂಬ ವ್ಯವಸ್ಥೆಯೂ ಆಯಿತು. ಇದರ ಬದಲಾಗಿ ಪುಲಿಕೇಶಿ ಅರಸನಿಗೆ ಹರ್ಷರಾಜನು ಐದು ಸಹಸ್ರ ಆನೆಗಳು ಹಾಗು ನೂರು ಮಣ ಬಂಗಾರ, ರತ್ನ ವಜ್ರ ವೈಢೂರ್ಯಗಳನ್ನು ಕಾಣಿಕೆಯಾಗಿ ಕೊಟ್ಟು, ದಕ್ಷಿಣಾಪಥೇಶ್ವರನೆಂಬ ಬಿರುದನಿತ್ತು ಸನ್ಮಾನಿಸಿದನು.


ಪುಲಿಕೇಶಿ ಮಹಾರಾಜನು ಸಾಧಿಸಿದ ದಿಗ್ವಿಜಯದಿಂದ ಅವನು ತಲಾ ತೊಂಬತ್ತೊಂಬತ್ತು ಸಹಸ್ರ ಗ್ರಾಮಗಳ ಮೂರು ಮಹಾರಾಷ್ಟ್ರಕಗಳ ಒಡೆಯನಾಗಿದ್ದನು. ಇದರಿಂದಾಗಿ ಅರಸನು ಪರಮೇಶ್ವರನೆಂಬ ಬಿರುದನ್ನೂ ಹೊಂದಿದನು. ಕರ್ನಾಟ್ಟ ದೇಶ, ಮರಾಠದೇಶ, ಆಂಧ್ರದೇಶ ಕೂಡಿದಂತೆ ಇಡೀ ದಕ್ಷಿಣಾಪಥದ ಒಡೆಯನಾಗಿದ್ದನು.


ಮಹಾರಾಜ, ಮಹಾಮಂತ್ರಿ, ಸೇನಾಧಿಪತಿ ಸಮೇತರಾಗಿ ಎಲ್ಲ ಸಾಮಂತರೂ ಸೈನ್ಯಗಳೊಡನೆ ವಾತಾಪಿಗೆ ಹಿಂತಿರುಗಿದರು. ನಾನೂ ಅವರೊಡನೆಯೇ ವಾತಾಪಿ ನಗರಕ್ಕೆ ಹಿಂತಿರುಗಿದೆ. ನನ್ನ ಗೂಢಚಾರನ ವೇಷ ಯಾ ಅಜ್ಞಾತವಾಸದ ಅವಶ್ಯಕತೆಯೂ ಇನ್ನಿರಲಿಲ್ಲ. ನನ್ನ ಶ್ಮಶ್ರುಗಳನ್ನು ಕ್ಷೌರಿಕನಿಗೆ ಅರ್ಪಿಸಿ, ನನ್ನ ಕಂಚುಕ ಪಗಡಿಗಳನ್ನು ತ್ಯಜಿಸಿ, ಪುನಃ ನನ್ನ ಶ್ವೇತ ವರ್ಣದ ಕಚ್ಚೆ ಪಂಚೆ ಹಾಗು ಶಿರದಲ್ಲಿ ಜಟೆ ಧರಿಸಿದೆ. ಮನೆಗೆ ಹಿಂತಿರುಗಿ ಮಾತಾ-ಪಿತರನ್ನು ಮತ್ತೆ ಕಂಡು ಸಂತೋಷವಾಯಿತು. ಮನ ಮುಟ್ಟುವ ಪುನರ್ಮಿಲನ - ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನಾನೂ ಮನೆಯ ಜೀವನದ ಆನಂದವನ್ನು ಮತ್ತೆ ಕಾಣುವಂತಾಯಿತು.


ಈ ಸಮಯದಲ್ಲಿ ಪುಲಿಕೇಶಿ ಅರಸನು ಹರ್ಷರಾಜನ ಮೇಲೆ ತಾನು ಸಾಧಿಸಿದ ದಿಗ್ವಿಜಯ ಸ್ಮರಣೆಗೆಂದು ದೇವಾಲಯವೊಂದನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿದನು. ಅಂತೆಯೇ ಅರಸನ ವಂಶಜರ ಮೊದಲ ರಾಜಧಾನಿಯಾದ, ಹತ್ತಿರದಲ್ಲಿಯೇ ಮಲಪ್ರಭಾ ನದಿಯ ತೀರದಲ್ಲಿದ್ದ ಅಯ್ಯವೊಳೆ ನಗರದಲ್ಲಿ ದೇವಾಲಯವನ್ನು ಕಟ್ಟಿಸುವ ಯೋಜನೆ ಹೂಡಿದನು. ಇದನ್ನು ಕಾರ್ಯರೂಪಕ್ಕೆ ತರಲು ಅರಸನು ಮಂತ್ರಿ ಹಾಗು ಕವಿಯಾದ ರವಿಕೀರ್ತಿಯನ್ನು ಕರೆಸಿ ಹೀಗೆ ಹೇಳಿದನು:


"ಮಂತ್ರಿ ರವಿಕೀರ್ತಿ, ನಾವು ನಮ್ಮ ಮುದ್ರೆಯನ್ನು ಇತಿಹಾಸದಮೇಲೆ ಒತ್ತಲು ಇಚ್ಚಿಸಿದ್ದೇವೆ. ಅಂತೆಯೇ, ನಮ್ಮ ಮೂಲ ರಾಜಧಾನಿಯಾದ ಅಯ್ಯವೊಳೆಯಲ್ಲಿ ದೇವಾಲಯವೊಂದನ್ನು ನಿರ್ಮಿಸಿ. ಬರುವ ಪೀಳಿಗೆಗಳಿಗೆ ನಮ್ಮ ಶೌರ್ಯ, ದಿನಾಂಕ, ಖ್ಯಾತಿ ಹಾಗು ವೈಭವಗಳನ್ನು ನೆನಪಿಗೆ ತರಿಸುವಂತಹ ಸ್ಮಾರಕವೊಂದನ್ನು ರಚಿಸಿ. ಈ ಮಂದಿರವು ನಮ್ಮ ದಿಗ್ವಿಜಯದ ಸಂಕೇತವಾಗಿರಲಿ. ಎಷ್ಟು ವೆಚ್ಚವಾದರೂ ಸರಿ, ನಮ್ಮ ಬೊಕ್ಕಸದಿಂದ ಕೊಡಲಾಗುವುದು. ಈ ಕಾರ್ಯವನ್ನು ಸಾಧಿಸಲು ನೀವೇ ಸಮರ್ಥ ವಾಸ್ತುಶಿಲ್ಪಿ"


ಮಂತ್ರಿ ರವಿಕೀರ್ತಿಯು "ಅಪ್ಪಣೆಯಂತಾಗಲಿ, ದೊರೆ. ಆದರೆ ನನ್ನದೊಂದು ಸಣ್ಣ ಕೋರಿಕೆ" ಎಂದರು


"ಏನದು" ಅರಸ ಪ್ರಶ್ನಿಸಿದನು.


"ಬ್ರಾಹ್ಮಣ ಧರ್ಮದ ದೇವತೆಗಳೊಂದಿಗೆ ನನ್ನ ಮೆಚ್ಚಿನ ದೇವನಾದ ಜಿನೇಂದ್ರನ ಮೂರ್ತಿಯೊಂದನ್ನು ಆ ಸ್ಮಾರಕ ದೇವಾಲಯದಲ್ಲಿ ಇರಿಸುವ ಅನುಮತಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಧಾರ್ಮಿಕ ಸಹಿಷ್ಣುತೆಗೂ ಸಂಕೇತವಾಗಲಿ" ಎಂದು ಮಂತ್ರಿ ಕೋರಿಕೊಂಡರು.


ಜೈನ ಶ್ರಾವಕರು ಅರಸನ ಪೂರ್ವದಿನಗಳಲ್ಲಿ ಅವನು ಮಂಗಳೇಶನನ್ನು ಸೋಲಿಸಿ ಚಾಲುಕ್ಯಾಧಿಪತಿಯಾಗಲು ಹೆಚ್ಚು ಬೆಂಬಲ ನೀಡಿದ್ದ ಕಾರಣ ಪುಲಿಕೇಶಿ ಅರಸನು ಅವರ ಪ್ರತಿ ತನ್ನ ಋಣವನ್ನು ಅರಿತಿದ್ದನು. "ಹಾಗೆಯೇ ಆಗಲಿ" ಎಂದು ಸಮ್ಮತಿಸಿ "ನಾಳೆಯ ದಿನವೇ ನಿಮ್ಮ ಶಿಲ್ಪಕಲೆಯ ಮೇರುಕೃತಿಗೆ ಸಂಕಲ್ಪ ಹಾಗು ನಾಂದಿ" ಎಂದು ಹೇಳಿ ರವಿಕೀರ್ತಿಯನ್ನು ಅಯ್ಯವೊಳೆಗೆ ಕಳುಹಿಸಿಕೊಟ್ಟನು.


ರವಿಕೀರ್ತಿ ಅಯ್ಯವೊಳೆಗೆ ನಿರ್ಗಮಿಸಿದರು. ಅಲ್ಲಿ ಭವ್ಯ ಮಂದಿರ ನಿರ್ಮಾಣದ ಕಾರ್ಯದಲ್ಲಿ ತೊಡಗಿದರು. ಆ ಸಮಯದಲ್ಲಿ ಪುಲಿಕೇಶಿ ಅರಸನು ಉತ್ತಮ ಪ್ರಶಾಸಕನಾಗಲು ಯತ್ನಿಸುತ್ತಿದ್ದನು. ರಾಜ್ಯವನ್ನು ವಿಷಯ, ರಾಷ್ಟ್ರ, ಭೋಗ ಕಾಂಪನ ಹಾಗು ಗ್ರಾಮಗಳಾಗಿ ವಿಭಾಜಿಸಲಾಗಿತ್ತು. ಅಲ್ಲಿಯ ಆಡಳಿತಕ್ಕೆ ಅರಸನು ಪ್ರಬಲ ಹಾಗು ಸಮರ್ಥ ಸಾಮಂತರನ್ನು ನೇಮಿಸಿದನು. ಇವರಲ್ಲಿ ಹಲವರು ಹೆಂಗಳೆಯರೂ ಇದ್ದರು. ನಾಡು ಸಮೃದ್ಧವಾಗಿದ್ದು ಜನರು ಸುಖಸಂತೋಷಗಳಿಂದ ಕೂಡಿದ್ದರು. ಸತ್ಯ, ಧರ್ಮ, ನ್ಯಾಯಗಳೇ ಚಾಳುಕ್ಯ ರಾಷ್ಟ್ರದ ಕಂಬಗಳಾಗಿದ್ದವು.

ಹೀಗೆ ಶ್ರೀಮುಖ ಸಂವತ್ಸರವು ಭವ, ಭವವು ಯುವ ಸಂವತ್ಸರಕ್ಕೆ ತಿರುಗಿದವು. ಮಂತ್ರಿ ರವಿಕೀರ್ತಿಯು ಸ್ಮಾರಕ ದೇವಾಲಯವು ಸಂಪೂರ್ಣವೆಂಬ ಸುದ್ಧಿಯೊಂದಿಗೆ ಅಯ್ಯವೊಳೆಯಿಂದ ವಾತಾಪಿ ನಗರಕ್ಕೆ ಹಿಂತಿರುಗಿದರು. ಎಲ್ಲ ಸಾಮಂತರಾಜರು ಹಾಗು ಪಾಳೆಯಗಾರರಿಗೆ ಓಲೆ ಕಳುಹಿಸಲಾಯಿತು. ದೇವಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಸಮಾರಂಭಕ್ಕೆ ಎಲ್ಲರಿಗೂ ನಿಮಂತ್ರಣ ನೀಡಲಾಗಿತ್ತು. ಅಂತೆಯೇ ನಿಯಮಿತ ದಿನದಂದು ಎಲ್ಲರೂ ಅಯ್ಯವೊಳೆಯಲ್ಲಿ ನೆರೆದಿದ್ದರು.


ಮಂತ್ರಿ ರವಿಕೀರ್ತಿಯು ಯಾರೂ ಕಾಣದಂತಹ ಭವ್ಯ ದೇವಾಲಯವನ್ನು ನಿರ್ಮಿಸುವ ಪ್ರಯತ್ನವನ್ನು ಈ ಪ್ರಯೋಗದ ಮೂಲಕ ಮಾಡಿದ್ದರು. ದೇವಾಲಯವು ಒಂದು ಸಣ್ಣ ಗುಡ್ಡದಮೇಲೆ ನಿಂತಿದೆ. ಎತ್ತರಿಸಿದ ಜಗಲಿಯೊಂದರ ಮೇಲೆ ದೇವಾಲಯದ ಕಟ್ಟಡವನ್ನು ಕಟ್ಟಲಾಗಿದೆ. ಮೆಟ್ಟಲು ಹತ್ತಿ ಹೋದರೆ ಭಕ್ತರು ಮುಖಮಂಟಪದೊಳಗೆ ಇರುತ್ತಾರೆ. ವಿಶಾಲವಾದ ಮುಖಮಂಟಪದ ಛಾವಣಿಯನ್ನು ಕಂಬಗಳು ಎತ್ತಿ ಹಿಡಿದಿವೆ. ಗರ್ಭಗುಡಿಯಲ್ಲಿ ಜಿನೇಂದ್ರನ ಕಲ್ಲಿನ ಪ್ರತಿಮೆ ಇರಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾಪಥವಿದೆ. ದೇವಾಲಯದ ಸುತ್ತಲೂ ಸುಂದರ ಕೆತ್ತನೆಗಳನ್ನು ಹೊತ್ತ ಕಂಬಗಳುಳ್ಳ ಜಗಲಿ ಇದೆ.


ಮುಖಮಂಟಪ ಹಾಗು ಗರ್ಭಗುಡಿಗಳ ಮಧ್ಯೆ ಒಂದು ವಿಶಾಲ ಅಂತರಾಳವಿದೆ. ಅಂತರಾಳದಲ್ಲಿ ಅರ್ಧ ಲಲಿತಾಸನದಲ್ಲಿ ಕುಳಿತ ಚಾಳುಕ್ಯ ಕುಲದೇವಿಯಾದ ಕೌಶಿಕಾಂಬಿಕೆಯ ಬಹುಸುಂದರ ಕಲ್ಲಿನ ವಿಗ್ರಹವಿದೆ. ಆದಿಸ್ಥಾನದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ದೇವಾಲಯದ ಎಲ್ಲ ಕಕ್ಷಗಳಲ್ಲಿ ಹಲವಾರು ದೇವಾದೇವಿಯರ ಸುಂದರ ಶಿಲಾ ಪ್ರಥಿಮೆಗಳಿವೆ. ಮೆಟ್ಟಲು ಹತ್ತಿ ದೇವಾಲಯದ ಛಾವಣಿಯ ಮೇಲೆ ಹೋದರೆ ಗರ್ಭಗೃಹದ ಮೇಲೆ ಮತ್ತೊಂದು ಗರ್ಭಗುಡಿಯಲ್ಲಿ ತೀರ್ಥಂಕರನ ಮತ್ತೊಂದು ಪ್ರತಿಮೆಯನ್ನು ಕಾಣಬಹುದು. ಛಾವಣಿಯಿಂದ ಇಡೀ ಅಯ್ಯವೊಳೆ ಊರಿನ ನೋಟವನ್ನೂ ಕಾಣಬಹುದು. ಪುಲಿಕೇಶಿ ಅರಸನ ಪಿತಾಮಹ ಕಟ್ಟಿಸಿದ ದೇವಾಲಯಗಳು, ಹಾಗು ಹಿಂದಿನ ಕಾಲದ ಅರಮನೆ ಎಲ್ಲವೂ ಕಾಣಿಸುತ್ತವೆ.


ಪ್ರತಿಷ್ಠಾಪನೆಗೆ ಬ್ರಾಹ್ಮಾಣರ ಹಾಗು ಜೈನ ಶ್ರಾವಕರ ಮಂತ್ರಗಳು ಮೊಳಗುತ್ತಿದ್ದವು. ರಾಷ್ಟ್ರದ ಪದವೀಧರರಲ್ಲದೆ ಸಾಮಾನ್ಯ ಜನರೂ ಆ ದಿವ್ಯ ನೋಟವನ್ನು ಕಾಣಲೆಂದು ಅಂದು ಅಲ್ಲಿ ನೆರೆದಿದ್ದರು. ಆಡಂಬರ ಅಭಿಷೇಕಗಳೊಂದಿಗೆ ದೇವತೆಗಳ ಪ್ರತಿಷ್ಠಾಪನೆಯಾಯಿತು.


"ಜೈ ಕೌಶಿಕಾಂಬಿಕೆ", "ಜೈ ಚಾಲುಕ್ಯೇಶ್ವರ" ಎಂಬ ಘೋಷಣೆಗಳು ಗಗನಕ್ಕೇರಿದವು.

Monday, October 09, 2006

ದೇವಿಯ ಪತನ

ದೇವಿಯ ಪತನ (ಮೂಲ ರಿಚ್ಮಲ್ ಕ್ರಾಂಪ್ಟನ್ - ಜಸ್ಟ್ ವಿಲಿಯಂ)

Language: Kannada
Category: Humor
Abstract: This is a humorous story about a young boy, his obsession with his teacher, and the funny events that fall out of this situation. The story is based on 'Fall of the Idol' from the William series by Richmal Crompton.
Keywords: kannada, richmal crompton, william, valleesha, fall of the idol, humor, humour, hasya, haasya

ಹಿನ್ನೆಲೆ: ವಲ್ಲೀಶ ೧೦ ವರ್ಷದ ಒಡ್ಡ, ಮೊಂಡ ಹುಡುಗ. ಛೇಷ್ಟೆ, ತುಂಟತನ ಬಹಳವಾದರೂ, ಎದೆಯಲ್ಲಿ ಆಗಾಗ ಕರಗುವ ಹೃದಯ. ದೊಡ್ಡವರೊಂದಿಗೆ ಸದಾ ಇವನ ಕದನ. ಇವನಿಗೊಬ್ಬಳು ಅಕ್ಕ, ಒಬ್ಬ ಅಣ್ಣ (ಇಬ್ಬರೂ ದೊಡ್ಡವರು). ಇವನ ಪ್ರಾಣ ಸ್ನೇಹಿತ ಜಗ್ಗು. ವಲ್ಲೀಶ, ಜಗ್ಗು, ಹನ್ಮು, ಡೊಳ್ಳು - ಈ ನಾಲ್ಕು ಮಂದಿ ಗಡಿಪಾರಕರೆಂದೇ ಪ್ರಸಿದ್ಧರಾದ ಗುಂಪು.


ದೇವಿಯ ಪತನ

ವಲ್ಲೀಶನಿಗೆ ಬೇಸರವಾಗಿತ್ತು. ಇಷ್ಟವಿಲ್ಲದಿದ್ದರೂ ಹಿರಿಯರ ಜಬರದಸ್ತಿಯ ಕಾರಣ ತನ್ನ ಕುರ್ಚಿಯಲ್ಲಿ ಕುಳಿತು ಬೋರ್ಡಿನ ಮೇಲೆ ಬರೆದ ಅಕ್ಷರಗಳನ್ನು ನೋಡುತ್ತಿದ್ದ.

"ಇದಕ್ಕೆ ಅರ್ಥವೇ ಇಲ್ಲ" ಧಿಕ್ಕಾರಾತ್ಮಕ ಧ್ವನಿಯಲ್ಲಿ ಗೊಣಗಿದ.

ಭಾನು "ಮಿಸ್‌ಗೂ ಬೇಸರವಾಗಿತ್ತು. ಆದರೆ ವಲ್ಲೀಶನಂತೆ ಅದನ್ನು ತೋರ್ಪಡಿಸುವವರಾಗಿರಲಿಲ್ಲ.

"ನೂರು ರೂಪಾಯಿಗಳಿಗೆ ಒಂದು ವರ್ಷಕ್ಕೆ ಐದು ರೂಪಾಯಿ ಬಡ್ಡಿಯಾದರೆ", ಬೇಸರದಿಂದ ನುಡಿದು, ನಂತರ, "ವಲ್ಲೀಶ, ಸರಿಯಾಗಿ ಕೂತ್ಕೋ - ಪೆದ್ದನ ಹಾಗೆ ಕಾಣಸ್ತಿದ್ದೀಯ" ಎಂದರು.

ವಲ್ಲೀಶ ಮೇಜಿನ ಒಂದು ಬದಿಯಿಂದ ಮತ್ತೊಂದು ಬದಿಗೆ ವಾಲಿಕೊಂಡು ತನ್ನ ಬೇಸರವನ್ನು ಸಮರ್ಥಿಸ ತೊಡಗಿದ.

"ನನಗಂತೂ ಏನೂ ಅರ್ಥವಾಗ್ತಿಲ್ಲ. ಏನೂ ಅರ್ಥವಾಗ್ಲಿಲ್ಲ ಅಂದ್ರೆ ಪೆದ್ದನ ತರಹನೇ ಕಾಣ್ಸೋದು. ಜನ ಯಾಕೆ ತುಂಬ ದುಡ್ಡು ಕೊಟ್ಟು ಸೊಲ್ಪ್ ಸೊಲ್ಪೇ ವಾಪಸ್ ಇಸ್ಕೊತಾರೆ ಅಂತ ನನಗಂತೂ ಗೊತ್ತಾಗ್ತಿಲ್ಲ. ನೂರು ರುಪಾಯಿ ಕೊಟ್ಟು ಐದ್ ರುಪಾಯಿ ಇಸ್ಕೊಂಡ್ರೆ ಕೊಟ್ಟ ಕೋಡಂಗಿ ಪೆದ್ದ. ಇಸ್ಕೊಂಡ್ ಈರ್ಭದ್ರ ಆ ನೂರ್ ರುಪಾಯಿ ಯಾವಾಗ್ಲೋ ವಾಪಸ್ ಕೊಡ್ತಾನೆ ಅಂತ ನಂಬೋದ್ ಹೇಗೆ?" ಅಷರಲ್ಲೆ ಮತ್ತೊಂದು ಯೋಚನೆ ಬಂದು "ನೂರ್ ರುಪಾಯಿ ಹೋಗ್ಲಿ ಆ ಐದ್ ರುಪಾಯೇ ಕೊಡ್ತಾನೆ ಅನ್ನೋ ಗ್ಯಾರಂಟೀ ಏನು?"

ಭಾನೂ ಮಿಸ್ ಕೈ ಎತ್ತಿ ಅವನ ಮಾತಿನ ನೆರೆ ನಿಲ್ಲಿಸಿದರು.

"ವಲ್ಲೀಶ," ಸಹನೆಯಿಂದ ನುಡಿಯುತ್ತ "ನನ್ನ ಮಾತು ಕೇಳು. ಈಗ.." ಕಣ್ಣು ಕೋಣೆಯ ಸುತ್ತ ಸುತ್ತುತ್ತ ಒಬ್ಬ ಪುಟ್ಟ ಆಕಾರದ ಹುಡುಗನ ಮೇಲೆ ನಿಂತವು. "ಆ ವಾಸುಗೆ ನೂರು ರೂಪಾಯಿ ಬೇಕಾಗಿತ್ತು, ಅದನ್ನ ನೀನು ಅವನಿಗೆ ಕೊಟ್ಟೆ ಅಂತಿಟ್ಕೋ..."

"ವಾಸುಗೆ ನಾನು ನೂರು ರುಪಾಯಿ ಖಂಡಿತ ಕೊಡಲ್ಲ" ವಲ್ಲೀಶ ಕಠಿಣ ಧ್ವನಿಯಲ್ಲಿ ಹೇಳಿದ "ನನ್ನ ಹತ್ರ ನೂರು ರುಪಾಯಿ ಇಲ್ವೂ ಇಲ್ಲ. ನನ್ನ ಹತ್ತ್ರ ಬರೀ ಮೂರು ರುಪಾಯಿ ಎಪ್ಪತ್ತೈದು ಪೈಸ ಇದೆ, ಅದನ್ನ ನಾನೇನೇ ಕಾರ್ಣಕ್ಕು ವಾಸುಗೆ ಕೊಡೋದಿಲ್ಲ. ನಾನಂಥ ಕೋಡಂಗಿ ಅಲ್ಲ. ಒಂದ್ಸರ್ತಿ ಔನ್ಗೆ ನನ್ನ ಶಿಲ್ಪಿ ಕೊಟ್ಟು ಅದನ್ನ ಕಾಚ್ಚಿ ತಿಂದ್ಬಿಟ್ಟಿದ್ದ, ಆಮೇಲೆ..."

ಭಾನು ಮಿಸ್ಸು ಸ್ವಲ್ಪ ಖಾರವಾಗೇ ಅವನನ್ನು ತಡೆಹಿಡಿದರು. ಮಧ್ಯಾಹ್ನದಲ್ಲಿ ಶಕೆಯಿರುವಾಗ ಪಾಠ ಹೇಳಿಕೊಡುವುದು ಕಠಿಣ.

"ಶಾಲೆ ಮುಗಿದ ಮೇಲೆ ಹಿಂದುಳಿದುಕೋ, ವಲ್ಲೀಶ. ಆಗ ನಾನು ನಿನಗೆ ಹೇಳಿಕೊಡ್ತೀನಿ"

ವಲ್ಲೀಶ ಗಂಟು ಮುಖ ಹಾಕಿಕೊಂಡು ತಾತ್ಸಾರದಿಂದ 'ಹೋ' ಎಂದು ಗೊಣಗಿ ಸಧ್ಯಕ್ಕೆ ತನ್ನ ಬೇಸರದೆಡೆ ಹಿಂತಿರುಗುದ.

ನಂತರ, ಶಾಲೆಗೆ ಬರುವಾಗ ದಾರಿಯಲ್ಲಿ ತಾನು ಹಿಡಿದ ಹೋತಿಕೇತವನ್ನು ನೆನಪಿಸಿಕೊಂಡು ಅದರ ಗುಟ್ಟು ಸ್ಥಳವಾದ ಅವನ ಜೇಬಿನಿಂದ ಹೊರತೆಗೆದ. ಆದರೆ ಆ ಹೋತಿಕೇತ ವಲ್ಲೀಶನ ಜೇಬಿನ ಇತರ ನಿವಾಸಿಗಳಾದ ಕಲ್ಲು, ಕಡ್ಡಿ, ಕಸಗಳೊಡನೆ ತನ್ನ ಜೀವಕ್ಕಾಗಿ ಹೋರಾಡಲಾಗದೆ ಸೋಲನ್ನೊಪ್ಪಿತ್ತು.

ವಲ್ಲೀಶನ ಬೇಸರ ಭೀಭತ್ಸಕ್ಕೆ ತಿರುಗಿ ಅವನು ತನ್ನ ಪೆನ್ನಿನಿಂದ ಪಕ್ಕದವನ ಮೇಲೆ ಇಂಕನ್ನು ಎರಚಿದ. ಪಕ್ಕದವ ತಕರಾರು ತೆಗೆದು ಚೈತನ್ಯ ಭರಿತ ಗುದ್ದಾಟ ನಡೆಯಿತು.

ಕೊನೆಗೆ ಸತ್ತ ಹೋತಿಕೆತವನ್ನು ವಲ್ಲೀಶನ ಸಧೃಡ ವೈರಿಯ ಅಂಗಿಯೊಳಗೆ ನಿಧಾನವಾಗಿ ಇಳಿಸಿ, ಗೆಳೆಯರ ಮೂಲಕ ಹೊರತೆಗೆದು ಹಿಂಪಡೆಯಲಾಯಿತು. ಸೇಡಿನ ಬೆದರಿಕೆಗಳು ಅದರ ಹಿಂದೆಯೇ ಬಂದವು. ಭಾನು ಮಿಸ್ ಬಡ್ಡಿ - ಚಕ್ರಬಡ್ಡಿಗಳನ್ನು ಮುಂದಿನ ಬೆಂಚುಗಳ ಮೇಲೆ ಕುಳಿತ ಅವರ ಮೆಚ್ಚಿನ ಹುಡುಗರಿಗೆ ಪಾಠ ಹೇಳುತ್ತಿದ್ದರು. ಹಿಂದಿನ ಬೆಂಚಿನಲ್ಲಿ ಕುಳಿತ ವಲ್ಲೀಶ ಕಷ್ಟ ಪಟ್ಟು ಕಾಲ ಹಾಕುತಲಿದ್ದ.

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಎಂಬಂತೆ ಇವನಿಗೂ ಕಾಲ ಬಂದಿತ್ತು.

ಶಾಲೆ ಮುಗಿದು ಹುಡುಗರೆಲ್ಲ ಕೋಣೆ ಬಿಟ್ಟು ಹೊರಹೋದರು; ವಲ್ಲೀಶ ಕಾಗದದ ಉಂಡೆಯೊಂದನ್ನು ಅಗಿಯುತ್ತ, ಭಾನು ಮಿಸ್ಸನ್ನು ದುರ್ಗುಟ್ಟುತ್ತ ಉದಾಸೀನದಿಂದ ಕುಳಿತೇ ಇದ್ದ.

"ಈಗ ಹೇಳು, ವಲ್ಲೀಶ" ಭಾನು ಮಿಸ್ ತೀವ್ರ ಶಾಂತತೆಯಿಂದ ಹೇಳಿದರು.

"ಯಾರಾದ್ರು ಮತ್ತೊಬ್ಬರಿಂದ ನೂರು ರೂಪಾಯಿಗಳ ಸಾಲ ಪಡೆದರೆ..."

ತಮ್ಮ ತಲೆ ಬಗ್ಗಿಸಿ ಮೇಜಿನ ಮೇಲಿದ್ದ ಹಾಳೆಯಮೇಲೆ ಬರೆಯಲಾರಂಭಿಸಿದರು. ಹೊರಗಿನಿಂದ ಮಧ್ಯಾಹ್ನದ ಬಿಸಿಲು ಒಳಬರುತ್ತ ಅವರ ಉದ್ದವಾದ ಜಡೆಯಮೇಲೆ ಬೀಳುತ್ತಿತ್ತು. ಅವರು ತಮ್ಮ ತೀವ್ರ ದೃಷ್ಟಿಯನ್ನು ವಲ್ಲೀಶನ ಕಡೆ ಹರಿಸಿದರೂ ಅವು ಉದ್ದನೆ ಕಣ್ಣುರೆಪ್ಪೆಯುಳ್ಳ ಬಟ್ಟಲುಗಣ್ಣುಗಳಾಗಿದ್ದವು.

"ಅರ್ಥವಾಗ್ತಿದೆಯೇ, ವಲ್ಲೀಶ" ಎಂದು ನುಡಿದರು.

ಅವರ ಸುತ್ತ ಅವರು ಬೆಳಗ್ಗೆ ಮುಡಿದಿದ್ದ - ಈಗ ಬಾಡಿಹೋದ ಮಲ್ಲಿಗೆ ಹೂಗಳ ಸೊರಗಿದ ಸುಗಂಧ ತುಂಬಿತ್ತು. ನಮ್ಮ ನಾಯಕ ವಲ್ಲೀಶ - ಕಳ್ಳ, ಡಕಾಯಿತ, ಕಾಡು ಮನುಷ್ಯ, ಹೆಣ್ಣೆಂದರೆ ತೃಣೀಕರಿಸುವವ - ಕಾಮನ ಬಾಣದ ಪ್ರಹಾರವನ್ನು ಅನುಭವಿಸಿದ. ನಾಚಿ, ಮುಖ ಕೆಂಪಾಗಿ ಹಲ್ಲುಕಿಸಿದ.

"ಈಗ ಎಲ್ಲ ಅರ್ಥವಾಗ್ತಿದೆ. ನೀವು ಎಲ್ಲ ಸರಿಯಾಗಿ ಸುಲಭವಾಗಿ ಹೇಳಿಕೊಟ್ಟಿದ್ದೀರ. ಮೊದ್ಲು ನನಗರ್ಥವಾಗಿರ್ಲಿಲ್ಲ."

"ಮೊದಲು ನೀನು ಸತ್ತ ಹಲ್ಲಿಗಳು, ಪೆನ್ನು ಇಂಕುಗಳ ಜೊತೆ ಆಟವಾಡದಿದ್ದರೆ, ಆಗಲೇ ಅರ್ಥವಾಗಿರುತ್ತಿತ್ತು" ಬೇಸತ್ತ ಧ್ವನಿಯಲ್ಲಿ ಪುಸ್ತಕಗಳನ್ನು ಮುಚ್ಚುತ್ತ ನುಡಿದರು.

ವಲ್ಲೀಶ ಉಸಿರೆಳೆದ.

ಭಾನು ಮಿಸ್ ಶರಣಾಗತನಾಗಿ, ಅವರ ಕಾಲಾಳಾಗಿ ಮನಗೆ ಹೋದ. ಶಾಲೆಯ ಕೆಲವು ಹುಡುಗರು ಭಾನು ಮಿಸ್‌ಗೆ ಆಗಾಗ ಮುಡಿಯಲು ಹೂವು, ಹೂವಿನ ಗುಚ್ಛಗಳನ್ನು ತಂದು ಕೊಡುವುದು ವಾಡಿಕೆಯಾಗಿತ್ತು. ತಾನು ಎಲ್ಲರಿಗಿಂತ ಹೆಚ್ಚು ಯೋಗ್ಯ ಎಂದು ತೋರಿಸುವ ಹಂಬಲ. ಮಾರನೆ ದಿನ ಶಾಲೆಗೆ ಹೊರಡುವ ಮುನ್ನ ಒಂದು ದೊಡ್ಡ ಬುಟ್ಟಿ ಹಾಗು ಕತ್ತರಿ ಹಿಡಿದು ಹೂದೋಟಕ್ಕೆ ಹೋದ.

ಸುತ್ತ ಯಾರೂ ಇರಲಿಲ್ಲ. ಮೊದಲಿಗೆ ಗುಲಾಬಿ ಗಿಡಗಳಿದ್ದೆಡೆಗೆ ಹೋದ. ನಾನಾ ಬಣ್ಣಗಳ ಗುಲಾಬು ಹೂಗಳು ಅರಳಿದ್ದವು. ಕೂಲಂಕುಷವಾಗಿ ಏಕಾಗ್ರತೆಯಿಮ್ದ ಕೆಲಸ ಮಾಡಿ ತುಂಬಿದ ಬುಟ್ಟ್ಯನ್ನು ಹಿಡಿದು ಗುಲಾಬಿ ತೋಟದಿಂದ ನಡೆದ. ಗುಲಾಬಿ ತೋಟ ಬೋಡಾಗಿ ಪಾಳುಬಿದ್ದಿತ್ತು.

ಬಾಗಿಲು ತೆರೆಯುವ ಶಬ್ಧ ಕೇಳಿ ತಡಮಾಡದೆ ಶಾಲೆಗೆ ಹೊರಟ. ಆದಷ್ಟು ಯಾರ ಗಮನವೂ ಅವನ ಮೇಲೆ ಬೀಳದಂತೆ ನಡೆದು ಶಾಲೆ ಸೇರಿದ.

ಭಾನು ಮಿಸ್ ತಮ್ಮ ಕ್ಲಾಸ್ ಒಳಬರುತ್ತ ಸಾಮಾನ್ಯವಾಗಿ ತಮ್ಮ ಮೇಜಿನ ಮೇಲೆ ಇರುತ್ತಿದ್ದ ಮಲ್ಲಿಗೆ, ಸ್ಪಟೀಕ ಹೂಗಳ ಬದಲಿಗೆ ಆಗಲೆ ಬಾಡುತ್ತಿದ್ದ ಗುಲಾಬಿ ಹೂಗಳ ರಾಶಿ ನೋಡಿ ಬೆರಗಾದರು.

ವಲ್ಲೀಶ ಎಂದೂ ಅರ್ಧಂಬರ್ದ ಕೆಲಸ ಮಾಡಿದವನಲ್ಲ.

"ಅಯ್ಯೋ ದೇವರೆ!" ಎಂದರು ದಿಗ್ಭ್ರಾಂತಿಯಿಂದ

ವಲ್ಲೀಶನ ಮುಖ ಸಂತೋಶದಿಂದ ಕೆಂಪಾಯಿತು.

ಅಂದು ತನ್ನ ಬೆಂಚನ್ನು ಬದಲಾಯಿಸಿ ಮುಂದಿನ ಬೆಂಚಲ್ಲೇ ಕುಳಿತ. ದಿನವಿಡೀ ಭಾನು ಮಿಸ್ ಮುಖದಿಂದ ಕಣ್ಣು ಕೀಳದೆ ಅವರನ್ನೇ ದಿಟ್ಟಿಸಿ ನೋಡುತ್ತ, ಅವರನ್ನು ಕಳ್ಳ-ಕಾಕರಿಂದ ತಾನು ಬಚಾಯಿಸುತ್ತಿರುವುದನ್ನು (ಇಲ್ಲಿ ತಾನೇ ಕಳ್ಳ, ಖದೀಮರ ಪಾತ್ರ ಧಾರಿಯಾಗಿ ಸ್ವಲ್ಪ ಗೊಂದಲಬ್ವುಂಟಾಯಿತು), ಭಾನು ಮಿಸನ್ನು ತನ್ನ ತೋಳುಗಳಲ್ಲೆತ್ತಿಕೊಂಡು ಹೋಗುವುದನ್ನು ಕನಸು ಕಾಣುತ್ತ ಕುಳಿತ. ಭಾನು ಮಿಸ್ಸ್ ವಲ್ಲೀಶನನ್ನು ಪ್ರೀತಿ-ಕೃತಜ್~ಜತೆಗಳಿಂದ ಅವನನ್ನು ಆಲಿಂಗಿಸುತ್ತಿದ್ದಂತೆ ಕೋಟೆ ವೆಂಕಟರಮಣನ ಸನ್ನಿಧಾನದಲ್ಲಿ ಅವರಿಬ್ಬರ ವಿವಾಹವಾಯಿತು.

ವಲ್ಲೀಶ ಅರ್ಧ ಕೆಲಸವನ್ನು ಮಾಡುವಂಥವನಲ್ಲ. ಇವರ ಮದುವೆ ಇಲ್ಲವೇ ಕೋಟೆ ವೆಂಕಟರಮಣನ ಸನ್ನಿಧಾನದಲ್ಲಿ, ತಪ್ಪಿದರೆ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ. ಮದುವೆಯಲ್ಲಿ ತನ್ನಬಳಿ ಇದ್ದ ಖದೀಮನ ವೇಷ ಧರಿಸುವುದಾಗಿ ಯೋಚಿಸಿದ. ಉಹೂಂ - ಅದು ಎಂದೂ ಆಗದು...

"ಇಷ್ಟು ಹೊತ್ತೂ ನಾನೇನು ಹೇಳುತ್ತಿದ್ದೆ, ವಲ್ಲೀಶ? ಭಾನು ಮಿಸ್ ಅವನ ಕನಸಿನೊಳಗೆ ಪ್ರತ್ಯಕ್ಷ ಪ್ರವೇಶಿಸಿದರು.

ವಲ್ಲೀಶ ಒಮ್ಮೆ ಕೆಮ್ಮಿ, ಗಂಟಲು ಸರಿಪಡಿಸಿಕೊಂಡು ಭಾವಮಯವಾಗಿ ಅವರನ್ನು ನೋಡಿದ.

"ಅದೇ... ಸಾಲ ತೊಗೊಳ್ಳೋದು, ಕೊಡೋದು..." ಆಶೆಯಿಂದ ಹೇಳಿದ.

"ವಲ್ಲೀಶ!" ಕೋಪದಿಂದ ಹೇಳಿದರು ಭಾನು ಮಿಸ್ "ಇದು ಗಣಿತದ ಪಾಠವಲ್ಲ. ನಾನು ಸ್ವಾತಂತ್ರ್ಯ ಹೋರಾಟದ ಬಗ್ಗೆ ಪಾಠ ಮಾಡ್ತಿದ್ದೆ"

"ಒಹ್ ಅದಾ.." ಜ್~ಜಾನೋದಯವಾದವನಂತೆ ನಿರಾತಂಕದಿಂದ ಹೇಳಿದ "ಹೂ.. ಹೌದು ಹೌದು"

"ಸರಿ ಹಾಗಿದ್ರೆ, ಅದರ ಬಗ್ಗೆ ಏನಾದ್ರು ಹೇಳು"

"ಅದರ್ ಬಗ್ಗೆ ನಂಏನು ಗೊತ್ತಿಲ್ಲ... ಇನ್ನೂವೆ.."

"ಅಷ್ಟ್‌ಹೊತ್ತ್‌ನಿಂದ ಹೇಳ್ತಿದ್ದೀನಿ. ಕೇಳಿಸ್ಕೊಂಡ್ರೆ ತಾನೆ" ಹೀಯಾಳಿಸಿದರು ಭಾನು ಮಿಸ್.

ವಲ್ಲೀಶನ ಉತ್ಸಾಹ ಕುಗ್ಗದಿದ್ದರೂ, ಸಧ್ಯಕ್ಕೆ ತನ್ನ ಮೌನ ಕನಸಿನ ಲೋಕಕ್ಕೆ ಹಿಂತಿರುಗಿದ.

ಸಂಜೆ ಮನೆ ತಲುಪಿದಾಗ ಮನೆಯ ತೋಟದಲ್ಲಿ ತುಮುಲ ಚಟುವಟಿಕೆಗಳನ್ನು ಗಮನಿಸಿದ. ಪೋಲೀಸ್ ಪೇದೆಯೊಬ್ಬ ನೆಲದಲ್ಲಿದ್ದ ಹೆಜ್ಜೆ ಗುರುತನ್ನು, ಪಕ್ಕದಲ್ಲಿದ್ದ ಕಿಟಕಿಯನ್ನು ಅಳಿಯುತ್ತಿದ್ದ. ಮತ್ತೊಬ್ಬ ಅತ್ತಿತ್ತ ಠಳಾಯಿಸುತ್ತಿದ್ದ. ವಲ್ಲೀಶನ ೧೮ ವರ್ಷ ವಯಸ್ಸಿನ ಅಕ್ಕ ಈಶ್ವರಿ, ಬಾಗಿಲ ಬಳಿ ನಿಂತಿದ್ದಳು.

"ಯಾರೋ ತೋಟದೊಳ್ಗಿಂದ ಒಂದೊಂದು ಗುಲಾಬಿನೂ ಕದ್ದ್ಕೊಂಡ್ ಹೋಗಿದ್ದಾರೆ ಇವತ್ತು ಬೆಳಗ್ಗೆ" ಉದ್ರೇಕದಿಂದ ಹೇಳಿದಳು. "ಈಗಷ್ಟೇ ಪೋಲೀಸರು ಬಂದಿದ್ದಾರೆ. ವಲ್ಲೀಶ ನೀನೇನಾದ್ರೂ ನೋಡಿದ್ಯೇನೋ ಬೆಳಗ್ಗೆ ಶಾಲೆಗೆ ಹೋಗ್ತಾ?"

ವಲ್ಲೀಶ ಆಳವಗಿ ಯೋಚಿಸಿದ. ಮುಗ್ಧ ಭಾವ ಅವನ ಮುಖವನ್ನು ಆವರಿಸಿತು.

"ಇಲ್ಲ" ಕೊನೆಗೆ ಹೇಳಿದ. "ಇಲ್ವೆ ಅಕ್ಕ, ನಾನ್ಯಾರನ್ನೂ ನೋಡ್ಲಿಲ್ಲ"

ಒಮ್ಮೆ ಕೆಮ್ಮಿ, ಗಂಟಲು ಸರಿಪಡಿಸಿಕೊಂಡು ಸದ್ದಿಲ್ಲದೆ ಮಾಯವಾದ.

ಅಂದು ಸಂಜೆ ತನ್ನ ಕೋಣೆಯಲ್ಲಿ ಪುಸ್ತಕಗಳನ್ನೆಲ್ಲ ಹರಡಿಕೊಂಡು, ಮುಖಕ್ಕೆ ನಿರ್ಣಾಯಕ ಗಂಟಿಕ್ಕಿ ಓದಲು ಕುಳಿತ.

ವಲ್ಲೀಶನ ಅಪ್ಪ ಹೊರಗೆ ವರಾಂಡಾದಲ್ಲಿ ಕಿಟಕಿಯ ಬಳಿ ತಂಗಾಳಿ ಸೇವಿಸುತ್ತ ಸಂಜೆಯ ಪತ್ರಿಕೆಯನ್ನು ಓದುತ್ತ ಕುಳಿತಿದ್ದರು.

"ಅಪ್ಪ" ಧಿಡೀರನೆ ವಲ್ಲೀಶನ ಕರ್ಕಶ ಧ್ವನಿ ಸಂಜೆಯ ಶಾಂತಿಯನ್ನು ಭೇದಿಸಿ ಬಂತು "ನಾನ್ ನಿಮ್ಮ್ ಹತ್ರ ಬಂದು ನನ್ಗೆ ನೂರ್ ರುಪಾಯ್ ಕೊಡಿ, ನಾನ್ ಮುಂದಿನ್ ವರ್ಷ ನಿಮ್ಗೆ ಐದ್ ರುಪಾಯ್, ಅದ್ರ್ ಮುಂದಿನ್ ವರ್ಷ ಐದ್ ರುಪಾಯ್ ಹಾಗೇ ಕೊಡ್ತಿರ್ತೀನಿ ಅಂದ್ರೆ ನೂರ್ ರುಪಾಯ್ ಕೊಡ್ತೀರ?"

"ಕೊಡೋದಿಲ್ಲ, ನನ್ನ ಕುಮಾರ ಕಂಠೀರವನೆ" ಧೃಡವಾಗಿ ಹೇಳಿದರು ಅವರಪ್ಪ. ವಲ್ಲಿಶ ಉದ್ಗಾರದ ಉಸಿರೆಳೆದ.

"ಏನೋ ಎಡವಟ್ಟಿದೆ ಇದ್ರಲ್ಲಿ ಅಂತ ಗೊತ್ತೇ ಇತ್ತು" ಎಂದ

"ಅಪ್ಪಾ, ಸ್ವಾತಂತ್ರ್ಯ ಹೋರಾಟ ಯಾವಾಗ್ ಆಯ್ತು?"

"ಅಯ್ಯೋ ರಾಮ! ನನಗ್ಗೊತ್ತಿಲ್ಲ ಹೋಗೋ. ನಾನಿರ್ಲಿಲ್ಲ. ಪೇಪರ್ ಓದಕ್ಕ್ ಬಿಡು ನನ್ನ"

ವಲ್ಲೀಶ ಮತ್ತೊಂದು ನಿಟ್ಟುಸಿರನ್ನು ತೆಗೆದ.

"ಹೋರಾಟ ಯಾವಾಗ್ ಆಯ್ತು, ಸ್ವಾತಂತ್ರ್ಯ ಯಾವಗ್ ಬಂತು ಅಂತ ತಿಳ್ಕೊಳಕ್ ಪ್ರಯತ್ನ ಪಡ್ತಿದೀನಿ"

ಅಪ್ಪ ತಮ್ಮ ಪತ್ರಿಕೆಯನ್ನೆತ್ತಿಕೊಂಡು ಮನೆಯೊಳಗೆ ಮಾಯವಾದರು.

ಇನ್ನೇನು ಮುಖ ಪುಟ ಓದಿ ಮುಗಿಸಿದ್ದರು ಅಷ್ಟು ಹೊತ್ತಿಗೆ ವಲ್ಲೀಶ ಸದ್ದಿಲ್ಲದೆ ತನ್ನ ಪುಸ್ತಕಗಳನ್ನೆತ್ತಿಕೊಂಡು ಬಂದು ಅವರ ಬಳಿ ಕುಳಿತ.

"ಅಪ್ಪ, 'ನನ್ನ ಅತ್ತೆ ಹೂದೋಟದಲ್ಲಿ ನಡೆಯುತ್ತಿದ್ದಾರೆ' ಅನ್ನಕ್ ಹಿಂದೀಲಿ ಏನಪ್ಪ?

"ಏನ್ ಮಾಡ್ತಿದ್ದೀಯೋ ನೀನು" ಕಿಡಿಕಿಡಿಯಾದರು ಅಪ್ಪ.

"ಶಲೆಲ್ ಕೊಟ್ಟ ಮನೆ ಕೆಲ್ಸ ಮಾಡ್ತಿದೀನಿ" ಸದ್ಗುಣಿಯಂತೆ ನುಡಿದ ವಲ್ಲೀಶ.

"ಮನೆ ಕೆಲಸ ಬೇರೆ ಇರತ್ತೆ ನಿನಗೆ ಅಂತ ಗೊತ್ತೇ ಇರ್ಲಿಲ್ಲ"

"ಉಹೂಂ" ಮೆಲ್ಲಗೆ ಉಸುರಿದ ವಲ್ಲೀಶ "ದಿನಾಗ್ಲು ನಾನ್ ತುಂಬ ಕಷ್ಟ ಪಡಲ್ಲ ಮನೆ ಕೆಲ್ಸಕ್ಕೆ. ಆದ್ರೆ ಇನ್ಮೇಲಿಂದ ಮಾಡ್ತೀನಿ... ಯಾಕೇಂದ್ರೆ ಭಾನು ಮಿಸ್" ಮುಖ ಕೆಂಪಾಗಿ ತಡವರಿಸಿದ "ಯಾಕೇಂದ್ರೆ ಭಾನು ಮಿಸ್" ಮುಖ ಮತ್ತಷ್ಟು ಕೆಂಪಾಗಿ, ನಾಚಿ ತೊದಲ ತೊಡಗಿದ "ಯಾ - ಯಾಕೇಮ್ದ್ರೆ ಬ್- ಬ- ಭಾನು ಮಿಸ್" ಕೊನೆಗೆ ನಡುಗಿ ಮೂರ್ಛೆ ಬೀಳುವುದೊಂದು ಬಾಕಿ.

ಅಪ್ಪ ತಮ್ಮ ಪತ್ರಿಕೆಯನ್ನು ಕೈಗೆತ್ತಿಕೊಂಡು ಅಡುಗೆ ಮನೆಗೆ ಹೋದರು. ಅಲ್ಲಿ ಅವರ ಪತ್ನಿ ಅಡುಗೆ ಮಾಡುತ್ತಿದ್ದರು.

"ವಲ್ಲೀಶನಿಗೆ ತಲೆ ಪೂರ್ತಿ ಕೆಟ್ಟು ಹುಚ್ಚ ಆಗಿದ್ದಾನೆ" ವಿನೋದದಿಂದ ಹೇಳಿದರು ಕುಳಿತುಕೊಳ್ಳುತ್ತ. "ಏನೋ ವಿದ್ಯೆ ಕಂಡ್ರೆ ಎಲ್ಲಿಲ್ಲದ್ ಪ್ರೀತಿ, ಯಾರೋ ಭಾನುನೋ ಮೋನುನೋ ಯಾರೋ ಮಿಸ್ ಬಗ್ಗೆ ಗೊಣಗ್ತಾ ಇದಾನೆ. ಅವನಷ್ಟಕ್ಕೆ ಅವನನ್ನೇ ಬಿಟ್ರೆ ಒಳ್ಳೇದು"

ವಲ್ಲೀಶನ ಅಮ್ಮ ಮುಗುಳ್ನಕ್ಕು ಕೆಲಸ ಮುಂದುವರೆಸಿದರು.

ಇನ್ನೇನು ಒಂದು ಪುಟ ಮುಗಿಸಿ ಮುಂದಿನ ಪುಟಕ್ಕೆ ಹೋಗ ಬೇಕು ಅಷ್ಟು ಹೊತ್ತಿಗೆ ವಲ್ಲೀಶ ಪುನಃ ಮುಖಕ್ಕೆ ಗಂಟಿಕ್ಕೆ ಕಡಾಕಡಿಯಾಗಿ ಬಾಗಿಲಲ್ಲಿ ನಿಂತು ಕೇಳಿದ

"ಅಪ್ಪ, ಹಾಲೆಂಡ್ ದೇಶದ ರಾಜಧಾನಿ ಯಾವುದು?"

"ಅಯ್ಯೋ ದೇವರೆ!" ಅಪ್ಪ ಗಟ್ಟಿಯಾಗಿ ಹೇಳಿದರು. "ಅವನಿಗೆ ಪುಸ್ತಕಗಳೋ ಏನಾದ್ರು ಕೊಡಿಸು. ಏನಾದ್ರು! ಏನುಬೇಕಾದ್ರು! ನನ್ನನೇನ್ ಅಂದ್ಕೊಂಡಿದಾನೆ ಅವ್ನು? ನಾನೇನ್..."

"ಇನ್ಮೇಲೆ ಅವನ ಓದಿಗೆ ಅಂತಲೇ ಒಂದು ಬೇರೆ ಕೋಣೆ ಮಾಡಿದ್ರಾಯಿತು" ಅಮ್ಮ ಸಮಜಾಯಿಷಿ ಹೇಳುತ್ತ ನುಡಿದರು. "ಅವನು ಓದಿನಲ್ಲಿ ಇಷ್ಟೊಂದು ಅಭಿರುಚಿ ತೋರಿಸ್ತಿದ್ದಾನೆ ಅಂದ್ಮೇಲೆ"

"ಕೋಣೆ!" ಅಪ್ಪ ಕಟುವಾಗಿ ಪ್ರತಿಧ್ವನಿಸಿದರು "ಕೋಣೆಯಲ್ಲ ಅವನಿಗೆ ಇಡೀ ಮನೇನೆ ಬೇಕು"

ಮಾರನೆಯ ದಿನ ಕ್ಲಾಸಿನಲ್ಲಿ ವಲ್ಲೀಶನ ಗಮನ ಹಾಗು ಮುತುವರ್ಜಿಗಳನ್ನು ನೋಡಿ ಭಾನು ಮಿಸ್‌ಗೆ ಆಶ್ಚರ್ಯ ಹಾಗು ಸಹಾನುಭೂತಿ ಭಾವನೆಗಳುಂಟಾದವು. ಶಾಲೆ ಮುಗಿದ ನಂತರ ವಲ್ಲೀಶ ಪ್ರೀತಿಯಿಂದ ಅವರ ಪುಸ್ತಕಗಳನ್ನು ಅವರ ಮನೆಯವರೆಗೆ ಎತ್ತಿಕೊಂಡು ಹೋಗುವ ನಿವೇದನೆ ಮಾಡಿದನು. ಅವರು ಬೇಡವೆಂದರೂ ಕೇಳಲಿಲ್ಲ. ರಮಣೀಯವಾಗಿ ವಾರ್ತಾಲಾಪ ಮಾಡುತ್ತ, ಅವನ ಹುಡುಗು ಮುಖದಲ್ಲಿ ಸಂತೋಷದ ಛದ್ಮ ಧರಿಸಿ ಅವರ ಪಕ್ಕದಲ್ಲೇ ನಡೆದು ಅವರ ಮನೆ ಕಡೆಗೆ ಹೊರಟ.

"ನನಗೆ ಕೇಡಿಗರು ಅಂದ್ರೆ ತುಂಬ ಇಷ್ಟ, ನಿಮಗೆ ಮಿಸ್? ಕೇಡಿಗರು, ಕಳ್ಳರು ಅಂಥವರು? ಮಿಸ್ ನೀವು ಒಬ್ಬ ಕಳ್ಳನ್ನ ಮದ್ವೆ ಮಾಡ್ಕೊತೀರಾ?"

ಕಳ್ಳನಾಗುವ ತನ್ನ ಹಳೆ ಕನಸಿನೊಂದಿಗೆ ಭಾನು ಮಿಸ್ ಪತಿಯಾಗುವ ತನ್ನ ಹೊಚ್ಚ ಹೊಸ ಕನಸನ್ನು ಮಿಶ್ರಣ ಮಾಡಲು ಪ್ರಯತ್ನಿಸುತ್ತಿದ್ದ.

"ಇಲ್ಲ" ಧೃಡವಾಗಿ ನುಡಿದರು ಭಾನು ಮಿಸ್.

ವಲ್ಲೀಶನ ಉತ್ಸಾಹ ಕುಗ್ಗಿ ಠುಸ್ಸಾಯಿತು.

"ಕೇಡಿಗನ್ ಜೊತೆ?" ದುಃಖದಿಂದ ನುಡಿದ.

"ಇಲ್ಲ"

"ಡಕಾಯಿತ್ರು ಒಳ್ಳೆಯವ್ರೇ..." ಅವರಿಗೆ ಧೈರ್ಯ ಕೊಡಲು ಯತ್ನಿಸಿದ.

"ಸಧ್ಯ ಸುಮ್ಮನಿರು"

"ಸರಿ," ರಾಜಿ ಮಾಡಿಕೊಳ್ಳುವನಂತೆ ಹೇಳಿದ "ಹಾಗಿದ್ರೆ ನವು ಕಾಡ್ ಪ್ರಾಣಿಗ್ಳನ್ನ, ಪಕ್ಷಿಗ್ಳನ್ನ ಬೇಟೆ ಆಡ್ಬೇಕಷ್ಟೆ. ಪರ್ವಾಗಿಲ್ಲ ಬಿಡಿ"

"ಯಾರು" ವಿಭ್ರಾಂತರಾದರು ಭಾನು ಮಿಸ್

"ಕಾಯ್ದ್ ನೋಡಿ ನೀವು" ನಿಗೂಢವಾಗಿ ನುಡಿದ

ನಂತರ "ನೀವು ಕೋಟೆ ವೆಂಕಟರಮಣ ದೇವಸ್ಥಾನ್ದಲ್ಲಿ ಮದ್ವೆ ಮಾಡ್ಕೊತೀರೋ ಇಲ್ಲ ತಿರುಪತಿ ತಿಮ್ಮಪ್ಪನ್ ದೇವಸ್ಥಾನ್ದಲ್ಲೋ"

"ಕೋಟೆ ವೆಂಕಟರಮಣನೇ ಸಾಕು ಅನ್ನಿಸುತ್ತೆ" ಗಂಭೀರವಾಗಿ ನುಡಿದರು. ಅವನು "ಹೂಂ" ಎನ್ನುವಂತೆ ತಲೆದೂಗಿದನು

"ಸರಿ ಹಾಗಿದ್ರೆ"

ಭಾನು ಮಿಸ್‌ಗೆ ವಿನೋದಾಭಾಸವಾಯಿತು. ಆದರೆ ಮಾರನೆಯ ದಿನ ಆ ವಿನೋದಾಭಾಸ ಕಡಿಮೆಯಾಗಿತ್ತು. ಭಾನು ಮಿಸ್ ಅತ್ತೆ ಮಗ ಒಬ್ಬರಿದ್ದರು. ಅವರೊಂದಿಗೆ ಭಾನು ಮಿಸ್ ಆಗಾಗ ಸಂಜೆ ಹೊತ್ತಿನಲ್ಲಿ 'ವಾಕಿಂಗ್' ಹೋಗುತ್ತಿದ್ದರು. ಇಂದು ಸಂಜೆ ಅಕಸ್ಮಾತ್ ಅವರು ವಲ್ಲೀಶನ ಮನೆಯ ಮುಂದೆ ನಡೆದು ಹೋದರು. ಆಚೆ ಅಂಗಳದಲ್ಲಿ ಆಡುತ್ತಿದ್ದ ವಲ್ಲೀಶ ತನ್ನ ಖದೀಮನ ಪಾತ್ರವನ್ನು ಪಕ್ಕಕ್ಕೆಸೆದು, ಹರ್ಷದಿಂದ ಭಾನು ಮಿಸ್ ಮತ್ತೊಂದು ಪಕ್ಕದಲ್ಲಿ ನಡೆದು ಹೊರಟ. ಚರ್ಚೆಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡ. ಅತ್ತೆ ಮಗ ಯಾಕೋ ವಲ್ಲೀಶನಿಗೆ ಕುಮ್ಮಕ್ಕು ಕೊಡುತ್ತಿರುವುದನ್ನು ನೋಡಿ ಭಾನು ಮಿಸ್‌ಗೆ ಮತ್ತಷ್ಟು ಕೋಪ ಬಂತು. ಭಾನು ಮಿಸ್ ಒತ್ತೊತ್ತಿ ತೋರಿದ ಸಂಕೇತಗಳನ್ನು ಕಡೆಗಾಣಿಸಿ ಹೋಗುತಲಿದ್ದ, ವಲ್ಲೀಶ. ಮಾತನಾಡಲು ಬಹಳಷ್ಟು ವಿಚಾರಗಳನ್ನಿಟ್ಟುಕೊಂಡಿದ್ದ. ಕೇಳಿಸಿಕೊಳ್ಳುವವರು ವಿಸ್ಮೃತರಾಗಿ ಇವನ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದಾರೆಂಬುವಂತೆ ವಿಚಾರಧಾರೆ ಹರಿಸ ತೊಡಗಿದ. ನೆನ್ನೆಯ ದಿನ ಸತ್ತ ಇಲಿಯೊಂದು ಕೈಗೆ ಸಿಕ್ಕಿತ್ತು. ಅದನ್ನು ತನ್ನ ನಾಯಿಗೆ ಕೊಟ್ಟಿದ್ದ. ನಾಯಿಗೆ ಅದು ಹಿಡಿಸಲಿಲ್ಲ - ಪಕ್ಕದ ಮನೆ ಬೆಕ್ಕೂ ಅದನ್ನು ಮೂಸಲಿಲ್ಲ, ಕೊನೆಗೆ ಅದನ್ನು ಹುಗಿದುಬಿಟ್ಟ. ಭಾನು ಮಿಸ್‌ಗೆ ತಾನು ತಂದು ಕೊಟ್ಟ ಹೂಗಳು ಇಷ್ಟವಾದವೆ? ಸಧ್ಯಕ್ಕೆ ಪುನಃ ಅದೇ ರೀತಿ ಹೂವುಗಳನ್ನು ತರಲಾರ. ಕಡಲ್ಗಳ್ಳರು ಈಗಿನ ಕಾಲದಲ್ಲೂ ಇದ್ದರ್ಯೆ? ಅಕಸ್ಮಾತ್ ಕಡಲ್ಗಳ್ಳರರಿದ್ದರೆ ಜನ ಏನು ಮಾಡಿಯಾರು? ಈ ಕಾಲದಲ್ಲಿ ಏಕಿರಬಾರದು? ತಾನೇ ಒಬ್ಬ ಕಡಲ್ಗಳ್ಳನಾಗಿ ಪುನಃ ಆ ವೃತ್ತಿಯನ್ನು ಆರಂಭಿಸುವನು. ಒಂದು ದಿನ ಹುಲಿಯ ಬೇಟೆ ಆಡುವವನು ತಾನು. ಭಾನು ಮಿಸ್‌ಗೆ ಇಷ್ಟವಿದ್ದರೆ ಅದರ ಚರ್ಮ ತಂದು ಕೊಡುವುದಾಗಿ ಹೇಳಿದ. ನಂತರ ಸ್ವಲ್ಪ ದುಡುಕು ಉದಾರತನ ಹೆಚ್ಚಾಯಿತು. ಹತ್ತಾರು ಪ್ರಾಣಿಗಳ ಚರ್ಮವನ್ನು ಮನೆಗೆ ತಂದು ಭಾನು ಮಿಸ್‌ಗೆ ಕೋಡುವುದಾಗಿ ಹೇಳಿದ.

"ನೀನು ಮನೆಗೆ ಹೋಗುವ ಸಮಯ ಆಗ್ಲಿವೇ, ವಲ್ಲೀಶ?" ಭಾನು ಮಿಸ್ ಸ್ವಲ್ಪ ಕಿಡಿಕಿಡಿಯಾಗಿ ಕೇಳಿದರು.

ವಲ್ಲೀಶ ಠಕ್ಕನೆ ಅವರ ಭೀತಿ ನಿವಾರಿಸಿದ "ಓಹ್! ನನಗೇನೂ ಅರ್ಜೆಂಟಿಲ್ಲ. ಎಷ್ಟೊತ್ತಿಗ್ ಹೋದ್ರೂ ಪರ್ವಾಗಿಲ್ಲ"

ಅತ್ತೆ ಮಗ ಯಾಕೋ ಅವನಿಗೆ ಇನ್ನೂ ಕುಮ್ಮಕ್ಕು ಕೊಡುವಂತೆ ಕಾಣಿಸಿತು.

"ನೀನು ಮಲಗೋ ಸಮಯವಾಗಿಲ್ವೇ?"

"ಓಹ್! ಇಲ್ಲ... ಇನ್ನೂ ಇಲ್ಲ... ಇನ್ನೂ ಸುಮಾರ್ ಹೊತ್ತಿದೆ ನಾನ್ ಮಲಗಕ್ಕೆ"

"ಭಾನು ಮಿಸ್ ಶಾಲೆಲಿ ನಿನಗೇನ್ ಹೇಳ್ಕೊಡ್ತಾರೆ, ವಲ್ಲೀಶ?" ಅತ್ತೆ ಮಗ ಕೇಳಿದರು.

"ಓ-ಓಹ್ ಏನೇನೋ ಹೇಳ್ಕೊಡ್ತಾರೆ. ಸ್ವಾತಂತ್ರ್ಯ ಅಂತೆ, ನೂರ್ ರುಪಾಯ್ ಸಾಲ ಅಂತೆ. ಅದಂತೂ ಸಕತ್ ಪೆದ್ದ್‌ತನ. ನನಗರ್ಥ ಆಗಿದೆ" ಅಷ್ಟರಲ್ಲೆ ಸಮಾಧಾನ ಹೇಳಿದ. "ಆದ್ರೆ ನಿಜ್ವಾಗ್ಲೂ ಪೆದ್ದ್‌ತನನೇ. ನಮ್ಮಪ್ಪನೂ ಹಾಗೇ ಅಂದ್ರು - ಅವ್ರಿಗೆ ಗೊತ್ತಿರತ್ತೆ - ಫಾರಿನ್‌ಗೆಲ್ಲ ಹೋಗ್ಬಂದಿದಾರೆ. ಒಂದ್ ಸರ್ತಿ ಗೂಳಿ ಅಟ್ಟಿಸ್ಕೊಂಡ್ ಬಂದಿತ್ತಂತೆ ನಮ್ಮಪ್ಪನ್ನ..."

ವಲ್ಲೀಶ ತನ್ನ ಗಟ್ಟಿ ಧ್ವನಿಯಲ್ಲಿ ಭಾಷಣ ಭಿಗಿಯುತ್ತಾ ಭಾನು ಮಿಸ್ ಮನೆಯ ಬಳಿ ಬರುವಷ್ಟು ಹೊತ್ತಿಗೆ ಕತ್ತಲಾಗುತ್ತಿತ್ತು. ಅವನಿಗೆ ಸಾಧನೆಯ ಮದವೇರಿತ್ತು. ಆರಾಧ್ಯ ದೇವಿಯ ಮೌನವನ್ನು ಆಕೆಗೆ ಇವನಲ್ಲಿ ಇರುವ ಮೆಚ್ಚಿಕೆಯಾಗಿ ಕಂಡ.

ಭಾನು ಮಿಸ್ ಮತ್ತು ಅತ್ತೆ ಮಗನೊಡನೆ ಇನ್ನೇನು ಭಾನು ಮಿಸ್ ಮನೆಯೊಳಗೆ ಹೋಗಬೇಕಿತ್ತು ಅಷ್ಟರಲ್ಲಿ ಭಾನು ಮಿಸ್ ಅವನನ್ನು ತಡೆಗಟ್ಟಿ "ಇನ್ನು ನೀನು ಮನೆಗೆ ಹೋಗು, ವಲ್ಲೀಶ" ಎಂದು ಹೇಳಿ ಬಾಗಿಲನ್ನು ಮುಚ್ಚಿದರು.

ವಲ್ಲೀಶ ಕೊಂಚ ತಬ್ಬಿಬ್ಬಾದ.

"ನಾನೂ ಒಳಗ್ ಬರ್ತೀನಿ" ಎಂದ "ನನಗೇನು ಬೇಜಾರಿಲ್ಲ, ಸುಸ್ತೂ ಆಗಿಲ್ಲ"

ಆದರೆ ಭಾನು ಮಿಸ್ ಮತ್ತು ಅತ್ತೆ ಮಗ ಮನೆಯೊಳಗೆ ಮಾಯವಾಗಿದ್ದರು.

ವಲ್ಲೀಶ ಮನೆ ಕಡೆ ಹೆಜ್ಜೆ ಹಾಕಿದ. ಬಾಗಿಲಲ್ಲಿ ಅಕ್ಕ ಈಶ್ವರಿಯನ್ನು ಕಂಡ.

"ಎಲ್ಲಿಗ್ಹೋಗಿದ್ಯೋ, ವಲ್ಲೀಶ? ಎಷ್ಟ್ಹೊತ್ತಿಂದ ನಿನ್ನ ಹುಡ್ಕ್ತಾ ಇದೀನಿ. ಹೋಗ್ ಮಲಕ್ಕೋ - ನೀನ್ ಮಲ್ಗೋ ಟೈಮ್‌ಆಗಿ ಎಷ್ಟೋ ಹೊತ್ತಾಯ್ತು"

"ಭಾನು ಮಿಸ್ ಜೊತೆ ವಾಕಿಂಗ್ ಹೋಗಿದ್ದೆ"

"ಸರಿ, ಅದಕ್ಕೆ? ಮಲ್ಗೋ ಟೈಮ್ ಆದಾಗ್ ಮನೆಗ್ ಬರ್ಬೇಕು"

"ಅವರ್ಗೆ ನಾನ್ ಬರೋದ್ ಇಷ್ಟ ಇರ್ಲಿಲ್ಲ." ಘನತೆ ಹುಟ್ಟಿಸಿಕೊಂಡು ಹೇಳಿದ "ಹಾಗ್ ಬರೋದು ಸಭ್ಯರ ಲಕ್ಷಣ ಅಲ್ಲ" ಎಂದು ಒಂದು ತಿರುಗು ಬಾಣವನ್ನು ಬಿಟ್ಟ

ವಲ್ಲೀಶನ ಜೀವನದಲ್ಲಿ ಹೊಚ್ಚ ಹೊಸ ಗಾಂಭೀರ್ಯ ಪ್ರವೇಶಿಸಿತ್ತು. ಆದರೆ ಅದು ತನ್ನ ಜೊತೆಗೆ ಹಲವು ಅನಾನುಕೂಲಗಳನ್ನೂ ತಂದಿತ್ತು. ಶಾಲೆಯಲ್ಲಿನ ಪಾಠದ ವೇಳೆಯಲ್ಲಿ ಹೊತ್ತು ಕಳೆಯಲು ಹೂಡಿಕೊಂಡಿದ್ದ ಮನರಂಜನೆ ಕಾರ್ಯಕ್ರಮಗಳು ಕೈ ಬಿಡಲೊಲ್ಲಾದವು. ಭಾನು ಮಿಸ್‌ನ ಆರಾಧಕನಾಗಿದ್ದರೂ, ಕಳೆದ ಜನ್ಮದ ನಿರಾತಂಕ ಹುಮ್ಮಸ್ಸು ಅವನನ್ನು ಕೂಗಿ ಕರೆಯುತ್ತಿತ್ತು. ಆದರೂ ಕಷ್ಟ ಪಟ್ಟು ತನ್ನ ಮೊದಲ ಬೆಂಚ್‌ನ ಸ್ಥಳಕ್ಕಂಟಿಕೊಂಡು ಶ್ರದ್ಧಾತ್ಮಕ ವಿಧ್ಯಾರ್ಥಿಯ ಪಾತ್ರ ನಿರ್ವಹಿಸಲಾರಂಭಿಸಿದ್ದ. ಶಾಲೆಯ ನಂತರ ಮಾಡಬೇಕಾಗಿದ್ದ ಮನೆ-ಪಾಠಗಳು ಅವನ ಶಾಲೆಯ ನಂತರದ ಕಾರ್ಯಕರಮಗಳನ್ನು ಸೀಮಿತಗೊಳಿಸಿದ್ದವು. ಆದರೂ ಎಡಬಿಡದೆ ಕಚ್ಚಿಕೊಂಡಿದ್ದ. ಭಾನು ಮಿಸ್ ಪಾಠ ಕ್ಲಾಸಿನ ಮುಂದೆ ಕುಳಿತು ಮಾಡುತ್ತಿರಲು ವಲ್ಲೀಶನ ಭಾವಮಯ, ಏಕಾಗ್ರ ನೋಟ ಅವರಿಗೆ ಮುಜುಗರ ಉಂಟುಮಾಡಿಸಿದರೆ, ಅವನು ಕೇಳುತ್ತಿದ್ದ ಪ್ರಶ್ನೆಗಳು ಪೀಕಲಾಟಕ್ಕೆ ಸಿಕ್ಕಿಸುತ್ತಿದ್ದವು.

ಶಾಲೆಯಿಂದ ಹೀಗೆ ಹೊರಹೋಗುತ್ತಿದ್ದಾಗ ಭಾನು ಮಿಸ್ ಮತ್ತೊಬ್ಬ 'ಮಿಸ್' ಜೊತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ.

"ನನಗೆ ಮಲ್ಲಿಗೆ ಹೂವ್‌ಗಳನ್ ಕಂಡ್ರೆ ಬಹಳ ಇಷ್ಟ" ಎನ್ನುತ್ತಿದ್ದರು "ಅದರ ಘಮ ನೋಡ್ತಿದ್ರೆ ಆಹಾ..."

ಸರಿ ಮತ್ತೇನು? ವಲ್ಲೀಶ ಭಾನು ಮಿಸ್‌ಗೆ ಕೈತುಂಬ, ಬುಟ್ಟಿ ತುಂಬ ಮಲ್ಲಿಗೆ ಹೂಗಳನ್ನು ತರುವ ನಿರ್ಧಾರ ಮಾಡಿದ.

ನೇರವಾಗಿ ಮನೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಾಲಿಯ ಬಳಿ ಹೋದ.

"ಹಿಲ್ರ ಸಣ್‌ಬುದ್ದಿ - ನಮ್ ತೋಟ್ದಾಗ್ ಮಲ್ಗಿ ಊವ್ ಹಿಲ್ರ. ಹಲ್ಲಿ ಗುಲಾಬಿ ಗಿಡದ್ ಪಾತಿ ಮೇಲಿಂದ್ ಜರ್ಕಳಿ. ಹಿಲ್ರ ನಿಮ್ ಮನಿ ತೋಟ್ದಾಗ್ ಮಲ್ಗಿ ಊವ್ ಹಿಲ್ರ. ನನ್ಗೇನ್ ಗೊತ್ತೈತಿ? ನಿಮ್ ಹಮ್ಮನ್ ಕೇಳಿ. ಕೈ ಬಿಡಿ ಆ ನೀರಿನ್ ಪೈಪ, ಸಣ್ ಬುದ್ದಿ."

'ಹೋ' ತೃಣೀಕರಿಸುವ ಧ್ವನಿಯಲ್ಲಿ ಹೇಳುತ್ತ, ತಿರುಗಿ ಹೊರಟು ಹೋದ.

ಮನೆ ತೋಟದ ಸುತ್ತ ಹೋದ - ಮಾಲಿ ಹೇಳಿದ್ದು ನಿಜವೇ ಎಂದು ಗೊತ್ತಾಯಿತು. ಎಲ್ಲೆಲ್ಲೂ ಗುಲಾಬಿ ಹೂಗಳು ಕಂಡವು, ಆದರೆ ಮಲ್ಲಿಗೆ ಹೂವುಗಳ ಸುಳಿವೇ ಇರಲಿಲ್ಲ.

ಮೋಟು ಗೋಡೆ ಹತ್ತಿ ಪಕ್ಕದ ಮನೆ ಅಂಗಳ ನೋಡಿದ. ಅಲ್ಲಿಯೂ ಬರೀ ಗುಲಾಬೀ ಹೂಗಳೇ, ಮಲ್ಲಿಗೆ ಹೂಗಳಿರಲೇ ಇಲ್ಲ. ನೆಲದಲ್ಲೇನೋ ಎಡವಟ್ಟಿರಬೇಕೆಂದು ಕೊಂಡ.

ಮೆಲ್ಲಗೆ ನಡೆಯುತ್ತ, ಎಲ್ಲ ಮನೆಗಳ ಅಂಗಳಗಳನ್ನು ಇಣುಕಿ ನೋಡುತ್ತ ರಸ್ತೆಯುದ್ದಕ್ಕೂ ಹೋದ. ಎಲ್ಲೆಲ್ಲೂ ಗುಲಾಬಿಗಳೇ, ಮಲ್ಲಿಗೆ ಎಲ್ಲಿಯೂ ಇರಲಿಲ್ಲ.

ಇದ್ದಕ್ಕಿದ್ದಂತೆ ಒಮ್ಮೆಲೇ ನಿಂತ.

ರಸ್ತೆಯ ಮೂಲೆಯಲ್ಲಿದ್ದ ಒಂದು ಮನೆಯಲ್ಲಿ ಒಂದು ಸಣ್ಣ ಕುಂಡದಲ್ಲಿ ಬೆಳೆಸಿದ್ದ ಮಲ್ಲಿಗೆ ಗಿಡ ಕಿಟಕಿಯಿಂದ ಕಾಣಿಸುತ್ತಿತ್ತು. ಆ ಮನೆಯ ನಿವಾಸಿಗಳಾರೆಂದು ವಲ್ಲೀಶನಿಗೆ ಗೊತ್ತಿರಲಿಲ್ಲ. ಮೆಲ್ಲಗೆ ಗೇಟ್ ತೆಗೆದು ಅಂಗಳದಲ್ಲಿ ಹೊಕ್ಕ. ಸುತ್ತ ಯಾರೂ ಇದ್ದಂತೆ ಕಾಣಿಸಲಿಲ್ಲ.

ಬಾಗಿಲು ತೆರೆದೇ ಇತ್ತು. ಬಗ್ಗಿ ನೋಡಿದ, ನರಪಿಳ್ಳೆಯೂ ಇರಲಿಲ್ಲ.

ನಿಧಾನವಾಗಿ (ಅವನ ಲೆಕ್ಕದಲ್ಲಿ - ವಾಸ್ತವವಾಗಿ ಹೊಸ್ತಿಲಿಗೆ ಹಾಕಿದ್ದ ರಂಗೋಲಿ ಪಟ್ಟಿಯನ್ನು ಹರಿದು) ಮನೆಯೊಳಹೊಕ್ಕ. ಮಲ್ಲಿಗೆ ಹೂವುಗಳನ್ನು ಪಡೆಯಲೇಬೇಕೆಂಬ ಕಿಚ್ಚು. ಗಿಡವನ್ನು ಕುಂಡದಿಂದ ಬೇರು ಸಹಿತ ಎಳೆದ. ಬೇರಿಗಂಟಿದ್ದ ಮಣ್ಣು ನೆಲದಮೇಲೆ ಬೀಳುತ್ತಿದ್ದಂತೆ ಪರಾರಿಯಾಗುವ ಯೋಚನೆಯಲ್ಲಿದ್ದ. ಅಷ್ಟರಲ್ಲಿ ಓರ್ವ ದಪ್ಪಗಿದ್ದ ಹೆಂಗಸು ಒಳಗಿನಿಂದ ಹೊರಬಂದಳು. ವಲ್ಲೀಶನನ್ನು ಕಂಡು ಅವಳು ಅರಚಿದ ಕೂಗು ಅವನ ರಕ್ತವನ್ನೇ ಹೆಪ್ಪುಗಟ್ಟಿಸಿಬಿಟ್ಟಿತು. ಅವಳು ವಲ್ಲೀಶನ ಕಡೆ ಓಡುತ್ತಿದ್ದಂತೆ ಅವನು ಆತ್ಮರಕ್ಷಣೆಗೆಂದು ಕೋಣೆಯ ಮಧ್ಯದಲ್ಲಿರಿಸಿದ್ದ ಮೇಜೊಂದನ್ನು ಸುತ್ತುವರಿದು ಮನೆಯೊಳಗೋಡಿದ. ಹಿತ್ತಲ ಬಾಗಿಲು ತೆರೆದಿತ್ತು, ನೋಡದೆ ವಲ್ಲೀಶ ಅದನ್ನು ಹಾಯ್ದು ಹೊರಬಿದ್ದ. ಡುಮ್ಮಿ ಹೆಂಗಸು ಹಿಂಬಾಲಿಸಲಿಲ್ಲ. ಬಾಗಿಲಲ್ಲೇ ನಿಂತು ಕರ್ಕಶ ಧ್ವನಿಯಲ್ಲಿ ಅರಚುತ್ತಿದ್ದಳು.

"ಪೋಲೀಸ್! ಸಹಾಯ ಮಾಡಿ! ಕಾಪಾಡಿ! ಕಳ್ಳ! ಖದೀಮ! ಕೊಲೆಗಾರ!"

ಶಾಂತವಾಗಿದ್ದ ರಸ್ತೆಯಲ್ಲಿ ಅವಳ ಕೂಗುಗಳು ಪ್ರತಿಧ್ವನಿಸ ತೊಡಗಿದವು.

ವಲ್ಲೀಶನಿಗೆ ಭಯ ಕಿತ್ತುಕೊಳ್ಳಲಾರಂಬಿಸಿತು. ಹೊರ ಹೋಗುವ ದಾರಿಯೇ ಇಲ್ಲದ ಸಣ್ಣ ಹಿತ್ತಲ ಅಂಗಳದಲ್ಲಿ ಸಿಲುಕಿದ್ದ.

ಆ ಸಮಯದಲ್ಲಿ ಆ ಡೂಮ್ಮಿಯ ಕೂಗುಗಳು ಇನ್ನೂ ಹೆಚ್ಚಾದವು.

"ಕಾಪಾಡಿ, ಕಾಪಾಡಿ! ಸಹಾಯ ಮಾಡಿ!"

ಮುಂಬಾಗಿಲು ತೆರೆದ ಶಬ್ದ, ಯಾರೋ ಗಂಡಸರ ಮಾತುಗಳು.

"ಯಾಕೇ? ಯಾರು ಬಂದರು? ಏನಾಯಿತು?"

ವಲ್ಲೀಶ ಸುತ್ತ-ಮುತ್ತ ನೋಡಿದ. ಅಂಗಳದ ಮೂಲೆಯಲ್ಲಿ ಒಂದು ಸಣ್ಣ ಕೋಳಿ ಗೂಡಿತ್ತು. ಗೂಡಿನ ಬಾಗಿಲನ್ನು ತೆಗೆದು ಅದರೊಳಗೆ ಹೊಕ್ಕು ಕೋಳಿಗಳ ಮೇಲೆ ಬಿದ್ದ.

ತನ್ನ ಅತ್ಯಮೂಲ್ಯ ಮಲ್ಲಿಗೆ ಹೂಗಲನ್ನು ಕೈಯಲ್ಲಿ ಹಿಡಿದು, ಕೋಳಿ ಗೂಡಿನ ಮೂಲೆಯೊಂದರಲ್ಲಿ ಅಡಗಿ ಕುಳಿತ.

ಮೊದಲಿಗೆ ಏನೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ನಂತರ ಧ್ವನಿಗಳು ಹತ್ತಿರ ಬರುತ್ತಿದ್ದಂತೆ ಡುಮ್ಮಿ ಹೆಂಗಸಿನ ಮಾತು ಕೇಳಿಸತೊಡಗಿದವು.

"ಸಣ್ಣದಾಗ್ ಇದ್ದ ರೀ, ಆದ್ರಾ ಎಂಥಾ ಕ್ರೂರ್ ರೂಪ ಅಂತೀರಿ? ನಾ ಅವನ್ನ ಒಂದ ಸರ್ತಿ ನೋಡಿದ್ದು - ನಂತರ ಲಗ್-ಲಗೂನ ಓಡಿಹೋದ. ನಾ ಹಂಗ್ ಕೂಗಿದ್ದಲ್ಲಾಂದ್ರ ನನ್ನ ಅಲ್ಲೇ ಕೊಲಿ ಮಾಡ್ತಿದ್ದ ಅವ. ಅದೆಂಥ ಹೇಡಿ ಅಂತೀರಿ! ನಾನೋ ಪಾಪದ್ ಹೆಣ್ ಹೆಂಗ್ಸು. ಅಲ್ಲೆ ಭಾಂಡಿಗೂಳ್ ಅದಾವಲ್ರಿ ಅಲ್ಲ್ ನಿಂತಿದ್ದ. ತುಡುಗ್ ಮಾಡಾಕ್ ಹತ್ತಿದ್ದ ಆಗ ನಾ ಅವನ್ನ್ ನೋಡ್ಬಿಟ್ಟೆ. ನಂಗ್ ಭಾಳ್ ಅಶಾಂತಿ ಉಂಟಾಗ್ಯದ. ಇನ್ಮ್ಯಾಲ್ ರಾತ್ರೋ ರಾತ್ರಿ ನಿದ್ದಿ ಬರಂಗಿಲ್ಲ ನಂಗ. ಅವನ್ ಕೇಡಿಗ್, ಕೊಲಿಪಾತಕ ಮುಖನ ಕಾಣ್ಸ್ತದ. ನಾ ಪಾಪದ್ ಹೆಣ್ ಹೆಂಗ್ಸು.."

"ಇನ್ನೇನ್ ನೆನಪಿದೆ ನಿಮಗೆ?" ಗಂಡಸಿನ ಧ್ವನಿ "ಮತ್ತೊಮ್ಮೆ ಸಿಕ್ಕಿದ್ರೆ ಗುರ್ತಿಸ್ತೀರ?"

"ಎಲ್ಲ್ ಸಿಕ್ಕಿದ್ರೂ ಗುರ್ತಿಸ್ತೇನ್ರೀ." ಡುಮ್ಮಿ ಹೇಳಿದಳು "ಅದೆಂಥ ಕೇಡಿಗನ್ ಮಸಡಿ ಅಂತೀರಿ. ನನಗ್ ಎಷ್ಟ್ ಅಶಾಂತಿ ಉಂಟಾಗ್ಯದಂತ ನಿಮ್ಗ ಗೊತ್ತಾಗಂಗಿಲ್ಲ. ಕೂಗಾಕ್ಕ ಧೈರ್ಯ ಇದ್ದಿಲ್ಲ ಅಂದ್ರ ನಾನೀಗ್ ಸತ್ತ್ ಹೆಣ ಆಗಿರ್ತಿದ್ದ್‌ನ್ಯಲ್ರೀ"

"ಅವನ ಕಾಲ್ಗುರ್ತು ಅಳೀತಿದೀವಿ, ಅಮ್ಮ. ಮುಂದಿನ್ ಬಾಗ್ಲಿಂದ ಹೊರ್ಗ್‌ಹೋದ ಅಂದ್ರಾ?"

"ಹೂ.. ಮುಂದಿನ್ ಕದ ತಕ್ಕೊಂಡ ಹೋದ ರೀ ಅವ. ಅಲ್ಲೇ ಆಚಿ ಪೊದಿಯಾಗ್ ಅಡಗ್ಕೊಂಡಾನ ಅನ್ನಿಸ್ತದ ರೀ. ಎಂಥ ಪರಿ ಮೂತಿ ಅಂತೀರಿ? ನನ್ಗ ಮೈಯೆಲ್ಲ ಝುಂ ಅನ್ನಾಕ್ಹತ್ಯದ!

"ಪೊದೆಗ್ಳೊಳ್ಗೆ ಮತ್ತೆ ಹುಡ್ಕ್ತೀವಿ, ಅಮ್ಮ. ಆದ್ರೆ ಇಷ್ಟ್‌ಹೊತ್ತಿಗ್ ತಪ್ಪಿಸ್ಕೊಂಡಿರ್ಬೇಕು"

"ಕೇಡ್ಗ" ಡುಮ್ಮಿ ಹೇಳಿದಳು "ಆ ಕೊಲಿಪಾತ್ಕ, ಅವನ್ ಮೂತಿ ನೋಡ್ಬೇಕಿತ್ರೀ. ನಾ ಕೂಗೋ ಸಾಹಸ ಮಾಡಿದ್ದಿಲ್ಲ್ ಅಂದ್ರ..."

ಧ್ವನಿಗಳು ಕುಂದಿದವು. ವಲ್ಲೀಶ ಕೋಳಿಗೂಡಿನ ಮೂಲೆಯಲ್ಲಿ ಒಬ್ಬೊಂಟಿಗನಾಗಿ ಉಳಿದ.

ಬಿಳಿ ಕೋಳಿಯೊಂದು ಗೂಡಿನ ಬಾಗಿಲಿಗೆ ಬಂದು, ವಲ್ಲೀಶನನ್ನು ಕಂಡು ಕೋಪದಿಂದ ಕೂಗುತ್ತ ಓಡಿತು. ಜೀವಾವದಿ ಕಾರಾವಾಸ, ನೇಣುಗಂಬಕ್ಕೆ ತೂಗಿರುವ ದುಃಸ್ವಪ್ನಗಳು ವಲ್ಲೀಶನನ್ನು ಕಾಡಿಹೋದವು. ನೇಣು ಹಾಕಿದರೆ ಒಳಿತು - ಹೌದು ಒಟ್ಟಿಗೆ ನೇಣು ಹಾಕಿಬಿಡಲಿ ಎಂದುಕೊಂಡ.

ನಂತರ ಡುಮ್ಮಿ ಆ ಗಂಡಸರನ್ನು (ಪೋಲೀಸರು ಎಂದು ಎಣಿಸಿದ್ದ) ಬೀಳ್ಕೊಡುವುದು ಕೇಳಿಸಿತು. ಪುನಃ ಯಾರೋ ಪಕ್ಕದ ಮನೆಯವಳ ಜೊತೆ ಹಿತ್ತಲಿಗೆ ಹಿಂತಿರುಗಿದ ಡುಮ್ಮಿ ತನ್ನ ತಾಪತ್ರಯಗಳ ವಿವರಣೆ ಮುಂದುವರೆಸುವುದು ಕೇಳಿಸಿತು.

"ಅಮ್ಯಾಲ್ ನನ್ನ್ ಮುಂದಾ ಓಡ್ಹೋದ್ನಲ್ರೀ. ಅವ ಸಣ್ಣಾಕಾರದವ, ಆದ್ರ ಎಂಥ ಕ್ರೂರ್ ಮುಖ ಅಂತೀರಿ"

ಮತ್ತೊಂದು ಕಪ್ಪು ಕೋಳಿ ಗೂಡಿನ ಬಾಗಿಲಲ್ಲಿ ಬಂದು, ವಲ್ಲೀಶನೆಡೆ ಕೋಪದ ಕೂಗು ಕೂಗಿ ಹೊರಟುಹೋಯಿತು.

"ನೀವೂ ಬಾಳ ಕಣ್ರೀ" ಅದೃಷ್ಯ ನೆರೆಯಾಕೆ ಹೇಳಿದಳು "ಅದೆಂಗೆ ಅಷ್ಟೊಂದ್ ಧೈರ್ಯ ಬಂತು ನಿಮ್ಗೆ?"

ಬಿಳಿ ಕೋಳಿ ಮತ್ತೊಮ್ಮೆ ಕರ್ಕಶ ಕೂಗು ಬೀರಿತು.

"ಒಳಗ್ ಬಂದು ಸೊಲ್ಪ ಹೊತ್ತ್ ಮಲ್ಕೊಳಿ"

"ಹೂ, ಸೊಲ್ಪ್ ಆರಾಮ್ ತೊಗೋತೀನಿ" ಎಂದಳು ಡುಮ್ಮಿ ಅಳಲಿದ ಧ್ವನಿಯಲ್ಲಿ "ನಾನು... ಅಲ್ಲಾಡಿಹೋದೆ..."

ಮಾತುಗಳು ನಿಂತು, ಬಾಗಿಲು ಮುಚ್ಚಿ ಎಲ್ಲವೂ ಶಾಂತವಾಯಿತು.

ನಿಧಾನವಾಗಿ, ಬಹಳ ನಿಧಾನವಾಗಿ ಬಟ್ಟೆ-ಕೂದಲುಗಳು ಅಡ್ಡಾದಿಡ್ಡಿ ಚದುರಿದ್ದ ವಲ್ಲೀಶ ಕೋಳಿ ಗೂಡಿನಿಂದ ಆಚೆ ಬಂದು, ಮೆಲ್ಲಗೆ ಮನೆಯ ಸುತ್ತ ತೆವಳುತ್ತ ಬೀಗ ಹಾಗಿದ್ದ ಗೇಟಿನ ಮೇಲೆ ಹಾರಿ ಸದ್ದಿಲ್ಲದೆ ರಸ್ತೆಗೆ ಹೊರಬಿದ್ದ.

ವಲ್ಲೀಶನ ಮನೆಯಲ್ಲಿ "ಇವತ್ತು ಸಂಜೆ ಎಲ್ಲಿದ್ದಾನೆ ವಲ್ಲೀಶ?" ಎಂದರು ಅವನ ಅಮ್ಮ "ಸಧ್ಯ ಮಲಗೋ ಹೊತ್ತಿಗೆ ಮನೆಗೆ ಬಂದರೆ ಸಾಕು".

"ಓ ಈಗಿನ್ನು ನೋಡ್ದೆ" ಎಂದಳು ಈಶ್ವರಿ "ಅವನ್ ರೂಮ್ಗೆ ಹೋಗ್ತಿದ್ದ. ಮೈಯ್ಯೆಲ್ಲ ಪುಕ್ಕ ಅಂಟಿಸ್ಕೊಂಡ್, ಕೈಯ್ಯಲ್ಲಿ ಮಲ್ಗೆ ಹೂವ್‌ಹಿಡ್ಕೊಂಡಿದ್ದ"

"ತಲೆಕೆಟ್ಟಿದೆ" ಅಪ್ಪ ಹೇಳಿದರು "ಪೂರ್ತಿ ಹುಚ್ಚ ಆಗ್ಹೋಗಿದಾನೆ"

ಮಾರನೆ ದಿನ ಬೆಳಗ್ಗೆ ವಲ್ಲೀಶ ಮಲ್ಲಿಗೆ ಹೂವಿನ ಗೊಂಚಲನ್ನು ಭಾನು ಮಿಸ್ ಮುಂದಿಟ್ಟ. ಮಲ್ಲಿಗೆ ಹೂವು ಭಾನು ಮಿಸ್‌ಗೆ ಕೊಡಲು ಅದೇನೋ ಒಂದು ಧೀರ ಹೆಮ್ಮೆ. ಮಲ್ಲಿಗೆ ಕಾಣುತ್ತಲೇ ಭಾನು ಮಿಸ್ ಹಿಂಜರಿದರು.

"ಮಲ್ಲಿಗೆ ಹೂವಾ? ಅಯ್ಯಪ್ಪ ನನಗೆ ಅದರ ವಾಸ್ನೆನೇ ಆಗಲ್ಲ"

ವಲ್ಲೀಶ ಅಚ್ಚರಿಯಿಂದ ಕೆಲ ಕ್ಷಣಗಳ ಕಾಲ ಅವರನ್ನು ನೋಡಿದ.

ನಂತರ: "ಆದ್ರೆ ನೀವೇ ಹೇಳಿದ್ರಲ್ಲ - ನೀವೇ ಹೇಳಿದ್ರಲ್ಲ... ನೀವೆ ಮಲ್ಲಿಗೆ ಹೂವ್ ಕಂಡ್ರೆ ತುಂಬ ಇಷ್ಟ. ಅದರ ಘಮ ನೋಡ್ತಿದ್ರೆ ಆಹಾ ಅಂತ ಅಂದಿದ್ರಲ್ಲಾ..."

"ಮಲ್ಲಿಗೆ ಅಂತ ಹೇಳಿದ್ನಾ?" ಸಂದಿಗ್ಧವಾಗಿ ನುಡಿದರು ಭಾನು ಮಿಸ್ "ನಾನು ಗುಲಾಬಿ ಅಂತ ಹೇಳಕ್ ಹೊರ್ಟಿದ್ದೆ"

ವಲ್ಲೀಶನ ನೋಟ ಕಠಿಣ ಉಪೇಕ್ಷೆ ಹೊತ್ತಿತ್ತು. ನಿಧಾನವಾಗಿ ಹಿಂದಿನ ಬೆಂಚಿನಲ್ಲಿದ್ದ ತನ್ನ ಹಳೆಯ ಸ್ಥಳಕ್ಕೆ ಹಿಂತಿರುಗಿದ.

ಅಂದು ಸಂಜೆ ಊರ ಹೊರಗಿನ ತೋಪಿನಲ್ಲಿ ಒಂದು ಬೆಂಕಿ ಹಾಕಿಕೊಂಡು ಗೆಳೆಯರ ಜೊತೆ ಗುಡ್ಡಗಾಡಿನ ಜನರ ಆಟವಾಡಿದ. ತನ್ನ ಹಳೇ ಜೀವನಕ್ಕಿ ಹಿಂತಿರುಗುವುದರಲ್ಲಿ ಏನೋ ಕಂಪನ.

ಮನೆಯ ಅಂಗಳದಲ್ಲಿ ಆಡುತ್ತಿದ್ದಾಗ ವಲ್ಲೀಶನ ಅಪ್ಪ ನೆಲದಲ್ಲಿ ತೆವಳುತ್ತಿದ್ದ ಅವನನ್ನು ಕಂಡು "ಏನೋ ವಲ್ಲೀಶ" ಎಂದರು "ಈಗ ಮನೇಲೂ ಓದ್ಕೋತಿದ್ಯಾ ಅಂದ್ಕೊಂಡಿದ್ದೆ"

ವಲ್ಲೀಶ ಎದ್ದು ನಿಂತ.

"ಇನ್ಮೇಲ್ ಅದಕ್ಕೆ ಅಷ್ಟ್ ತೊಂದ್ರೆ ತೊಗೊಳಲ್ಲ" ವಲ್ಲೀಶ ಹೇಳಿದ "ಭಾನು ಮಿಸ್ - ಅವರಿಗೆ ಸರಿಯಾಗಿ ಮಾತಾಡಕ್ಕೆ ಬರಲ್ಲ. ಏನ್ ಹೇಳ್ತಿದಾರೆ ಅಂತ ಅವ್ರಿಗೇ ಗೊತ್ತಿರಲ್ಲ"

"ಹೆಂಗಸರಲ್ಲಿ ಅದೇ ತೊಂದರೆ" ಒಪ್ಪಿದರು ಅಪ್ಪ. "ಅವನ್ ಆರಾಧ್ಯದೇವಿ ನಿಲುವು ಗಟ್ಟಿಯಿಲ್ಲ ಅಂತಿದಾನೆ ವಲ್ಲೀಶ" ಎಂದರು ಅಲ್ಲಿಗೆ ಬರುತ್ತಿದ್ದ ತಮ್ಮ ಪತ್ನಿಗೆ.

"ಗಟ್ಟಿಯಾಗ್ ನಿಲ್ತಾರೋ ಇಲ್ವೋ ಗೊತ್ತಿಲ್ಲ" ಎಂದ ವಲ್ಲೀಶ "ಅಂತು ನೆಟ್ಟಗ್ ಮಾತಾಡಕ್ ಬರಲ್ಲ ಅವ್ರಿಗೆ. ಎಲ್ಲಿಲ್ದಿರೊ ಕಷ್ಟ ಪಟ್ಟೆ, ಆದ್ರೆ ಏನ್ ಮಾತಾಡ್ತಿದಾರೆ ಅಂತ ಅವ್ರಿಗೇ ಗೊತ್ತಿರಲ್ಲ. ಸರಿಯಾಗೇನೋ ನಿಂತ್ಕೋತಾರೆ, ಸರಿಯಾಗ್ ನಡೀತಾರೆ. ಅದೂ ಅಲ್ದೇ ಗಟ್ಟಿಯಾಗ್ ನಿಲ್ದೆ ಹೋದ್ರೆ ಕುಸ್ದ್ ಬಿದ್ದು ಕೂತ್ಬಿಡ್ತಾರೆ ಅಷ್ಟೆ"

ಕಾಲಪಯಣ

ಕಾಲಪಯಣ

Language: Kannada
Category: Fantasy/Adventure-Thriller
Abstract: This is a fictional story about an archaeologist getting lost in time - he accidentally travels to the past and finds out interesting facts about the Sarasvati (Indus Valley) Civilization.
Keywords: time travel, indus valley civilization, saraswati civilization, fiction, fantasy, time portal, kannada, thriller, history


ನಾನು 'ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ'ದಲ್ಲಿ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾಲಕ್ಕೆ ಆ ಹಳ್ಳಿಯ ಬಳಿ ಇದ್ದ ಪ್ರವಾಸಿ ಮಂದಿರದಲ್ಲಿ ನನ್ನ ವಾಸಕ್ಕೆ ಏರ್ಪಾಡು ಮಾಡಲಾಗಿತ್ತು. ಸರಸ್ವತೀ ನಾಗರೀಕತೆ - ಪ್ರಪಂಚವು ಹೆಚ್ಚಾಗಿ ಸಿಂಧು ಕಣಿವೆ ನಾಗರೀಕತೆಯೆಂದೇ ಅರಿತಿದ್ದ - ಮತ್ತು ಆ ಜನಾಂಗದ ಒಂದು ಊರಿನ ಅವಶೇಶಗಳನ್ನು ಅಗಿದು ಹೊರತೆಗೆಯುತ್ತಿದ್ದೆವು.

ಅಂದು ಸಾಧಾರಣ ದಿನಗಳಿಗಿಂತ ಸ್ವಲ್ಪ ವಿಚಿತ್ರವಾದ ಹವಾಮಾನವಾಗಿತ್ತು. ದಿನವಿಡೀ ಮೋಡ ಕವಿದಿದ್ದು ಮಳೆರಾಯ ಹುಯ್ಯುವ ಬೆದರಿಕೆ ಹಾಕುತ್ತಿದ್ದ. ಮಳೆಯನ್ನು ಹೆದರಿ ನಮ್ಮ ಭೂಶೋಧನೆ ಬಹು ವೇಗದಿಂದ ಸಾಗಿತ್ತು. ಸಂಜೆಯಾಗಿತ್ತು, ಇನ್ನೇನು ಪ್ರವಾಸಿ ಮಂದಿರಕ್ಕೆ ಹಿಂತಿರುಗುವ ಸಮಯ. ಕೊನೆ ಘಳಿಗೆಯಲ್ಲಿ ಒಂದು ಪುಟ್ಟ ಆಕಾರದ ಮನುಷ್ಯನ ಮೂರ್ತಿ ನೆಲದಲ್ಲಿ ದೊರಕಿತು.

ಕುಳಿತಿರುವ ಓರ್ವ ಋತ್ವಿಕ-ರಾಜನ ಮೂರ್ತಿಯದು. ಸುಮಾರು ೧೭ ಸಿಂಟಿಮೀಟರ್ ಉದ್ದ, ೧೧ ಸಿಂಟಿಮೀಟರ್ ಅಗಲದ ಮೂರ್ತಿ, ಹಣೆಯ ಸುತ್ತ ಯಾವುದೋ ಒಂದು ಆಭರಣ ಧರಿಸಿದ್ದ, ಹಣೆಯ ಮಧ್ಯದಲ್ಲಿ ಚಕ್ರಾಕಾರ ಪದಕ. ತಲೆಯ ಕೂದಲು ಹಿಂದೆ ಬಾಚಿದಂತೆ ಕಾಣಿಸುತ್ತಿತ್ತು. ಗಡ್ಡ ಮೀಸೆಗಳು ಆ ಮೂರ್ತಿಗೆ ಕೆತ್ತಲಾಗಿದ್ದವು. ಉದ್ದನೆಯ ಕಿವಿ ಹಾಳೆಗಳು, ಕಿವಿಯಲ್ಲಿ ಏನೋ ಆಭರಣ. ಮೂಗಿನ ಭಾಗದಲ್ಲಿ ಮೂರ್ತಿ ಸ್ವಲ್ಪ ಮುರಿದಂತೆ ಕಾಣಿಸುತ್ತಿತ್ತು. ಆತ ಎಡಗಡೆ ಹೆಗಲಿನ ಮೇಲಿಂದ ಬಲ ಸೊಂಟಕ್ಕೆ ಒಂದು ಅಂಚುಳ್ಳ ಶಲ್ಯ ಹೊದ್ದುಕೊಂಡ ಹಾಗಿತ್ತು. ಬಲಗೈ ತೋಳಿನಲ್ಲಿ ಮತ್ತೊಂದು ಚಕ್ರಾಕಾರ ಪದಕವುಳ್ಳ ಆಭರಣ. ಇದರಿಂದ ಕೆಳಗೆ ಎಲ್ಲವೂ ಮುರಿದು ನಷ್ಟವಾಗಿದ್ದರೂ, ನೆಲದ ಮೇಲೆ ನಿಲ್ಲಲ್ಲು ಒಂದು ಚಪ್ಪಟ್ಟೆ ಬುಡವಿತ್ತು.

ಮಳೆ ರಭಸದಿಂದಾಗಮಿಸಲು, ನಾನು ಆ ಮೂರ್ತಿಯನ್ನು ಜೋಪಾನ ಮಾಡಲು ನನ್ನ ಚೀಲದೊಳಗೆ ಇರಿಸಿ ನನಗಾಗಿ ಕಾದಿದ್ದ ಜೀಪ್ ಹತ್ತಿ ಪ್ರವಾಸಿ ಮಂದಿರವನ್ನು ಸೇರಿದೆ. ಚೀಲವನ್ನು ಕೋಣೆಯಲ್ಲಿರಿಸಿ, ಬೆಳಗ್ಗಿನಿಂದ ಆಚೆ ಇದ್ದು ಬೆವರು, ಮಣ್ಣು, ಧೂಳುಗಳು ಅಂಟಿದ್ದ ಕಾಯವನ್ನು ತೊಳೆಯಲು ಸ್ನಾನದ ಕೋಣೆಗೆ ಹೋದೆ. ಹೊರಗೆ ಬಂದು ಎಂದಿನಂತೆ ಮಾಣಿ ತಂದು ಮೇಜಿನ ಮೇಲೆ ಇರಿಸಿದ್ದ ಕಾಪಿ ಕುಡಿಯುತ್ತಿದ್ದಾಗ ಮಳೆಯು ಸಿಡಿಲಬ್ಬರದ ಬಿರುಗಾಳಿಗಳಿಂದ ಕೂಡಿ, ವಾತವರಣವು ರೋಷ ತುಂಬಿಕೊಂಡಂತೆ ಕಾಣಿಸುತ್ತಿತ್ತು. ಸಿಡಿಲೊಂದು ಬಂದು ಮೇಜಿನ ಮೇಲೆ ಇರಿಸಿದ್ದ ನನ್ನ ಚೀಲಕ್ಕೆ ತಾಕಿದಹಾಗೆನಿಸಿತು. ತಿರುಗಿ ನೋಡಿದರೆ ನಿಂತಿದ್ದ ನನ್ನ ಚೀಲ ಅಲ್ಲಿಯೇ ಉರುಳಿಕೊಂಡಿತ್ತು. ಅದನ್ನು ಪುನಃ ನಿಲ್ಲಿಸಿ, ಆ ಮೂರ್ತಿಯನ್ನು ಹೊರತೆಗೆದಿಟ್ಟು. ದಿನಪತ್ರಿಕೆಯನ್ನು ಹಿಡಿದು ಕುರ್ಚಿಯಲ್ಲಿ ಕುಳಿತೆ.

ಸ್ವಲ್ಪ ಸಮಯ ಕಳೆದ ನಂತರ, ಇನ್ನೇನು ಊಟದ ಸಮಯವಾಯಿತೆಂದು ಯೋಚಿಸುತ್ತ, ಮಾಣಿಯು ಊಟ ತರುವುದನ್ನು ಎದುರು ನೋಡುತ್ತಿದ್ದೆ. ಬಾಗಿಲನ್ನು ಯಾರೋ ಬಡಿದ ಶಬ್ಧ ಕೇಳಿಸಿತು. ಹೋಗಿ ಬಾಗಿಲನ್ನು ತೆರೆದು ನೋಡದೆಯೇ ನನ್ನ ಕುರ್ಚಿಗೆ ಹಿಂತಿರುಗಿದೆ. ಏಕೋ ಏನೋ ಎಂದಿನಂತೆ ಮಾಣಿ ಊಟ ಹಿಡಿದು ಒಳಗೆ ಬಂದಿದ್ದು ಕೇಳಿಸಲಿಲ್ಲ. ಬದಲಿಗೆ ವಿಚಿತ್ರ ರೀತಿಯ ಶಬ್ಧ ಕೇಳಿಸಿತು. ಯಾರೋ ಬೇರೆ ಇರಬಹುದೇ ಎಂದು ಯೋಚಿಸಿ ಬಾಗಿಲಲ್ಲಿ ನೋಡಿದರೆ, ಆಶ್ಚರ್ಯ!

ಪ್ರವಾಸೀ ಮಂದಿರದ ಕೋಣೆಯ ಹೊರಗೆ ಕಾಣುವ ನೋಟ ಕಾಣಿಸಲಿಲ್ಲ. ಬದಲಾಗಿ ಕಾಡೊಂದು ಕಾಣಿಸಿತು! ನನಗೆ ನಂಬಲಾರದಾಗಿತ್ತು! ಪುನಃ ಬಾಗಿಲ ಬಳಿ ಹೋಗಿ ಇಣುಕಿ ನೋಡಿದೆ. ಪರಮಾಶ್ಚರ್ಯ! ದೈತ್ಯ ಹಲ್ಲಿ - ಡೈನೋಸಾರ್​ಗಳು! ಬೆರಗಾಗಿ ನೋಡುತ್ತ ನಿಂತೆ. ನೆಲ ನಡುಗುವ ಆಭಾಸ ನನ್ನ ಭ್ರಾಂತಿಯನ್ನು ಮುರಿಯಿತು. ಎಡಕ್ಕೆ ತಿರುಗಿ ನೋಡಿದರೆ ದೈತ್ಯವೊಂದು ನನ್ನೆಡೆಗೆ ಬರುತ್ತಿದೆ. ಬಾಯ್ತೆಗೆದು ಒಮ್ಮೆ ಅರಚಿತು. ಭೀತಿಯಿಂದ ಬಾಗಿಲನ್ನು ಜೋರಾಗಿ ಬಡಿದೆ.

ಮೀಸೋಝೋಯಿಕ್ ಕಾಡಿನ ಗದ್ದಲದ ನಡುವೆಯೋ, ನಾನೇ ಆ ಕಾಡಿನಲ್ಲಿ ಮಗ್ನನಾಗಿದ್ದು ಕೇಳಿಸಿಕೊಂಡಿರಲಿಲ್ಲವೋ, ಅಥವ ಹೊಸದಾಗಿ ಶುರುವಾಗಿತ್ತೋ ತಿಳಿಯದು. ಇದ್ದಕ್ಕಿದ್ದಂತೆ ಶಾಂತವಾದ ಕೋಣೆಯಲ್ಲಿ ಈಗ ಬೇರೆ ರೀತಿಯ ಶಬ್ಧಗಳು ಕೇಳಿಸತೊಡಗಿದವು. ಯುದ್ಧದ ಕೋಲಾಹಲ, ಕೂಗಾಟ. ಕುದುರೆ, ಆನೆಗಳ ಧಾಂಧಲೆ, ಮನುಷ್ಯರ ಅರಚಾಟ. ಕಿಟಕಿಯೊಂದು ಪೂರ್ಣವಾಗಿ ಮುಚ್ಚಿರಲಿಲ್ಲ - ಸ್ವಲ್ಪ ತೆರೆದಿತ್ತು. ಅದರಾಚೆಯಿಂದ ಬರುತ್ತಿದ್ದ ಶಬ್ಧಗಳವು. ಕಿಟಕಿಯ ಬಳಿ ಹೋಗಿ ನಿಂತೆ. ಮತ್ತೊಂದು ಕಾಣದಂತಹ ದೃಷ್ಯ. ಇತಿಹಾಸದಲ್ಲಿ ನೋಡಿದ ಚಿತ್ರಗಳಂತಹ ಗ್ರೀಕ್ ಸೈನಿಕರು ಯುದ್ಧದಲ್ಲಿ ವ್ಯಸ್ಥರಾಗಿದ್ದರು. ಎದುರಿಗೆ ಕಚ್ಚೆಪಂಚೆ, ಪೇಟಧಾರಿಗಳ ಭಾರತೀಯರ ಒಂದು ಸೈನ್ಯ. ಬಿಲ್ಲು ಬಾಣ, ಈಟಿ, ಕತ್ತಿಗಳ ಸಹಾಯದಿಂದ ನಡೆಯುತ್ತಿದ್ದ ಯುದ್ಧ. ನಮ್ಮವರೇ ಮೇಲುಗೈ ಸಾಧಿಸುತ್ತಿದ್ದಂತಿತ್ತು. ಅಲೆಕ್ಸಾಂಡರ್, ಮೌರ್ಯ ಎಂಬ ಹೆಸರುಗಳು ಆ ಕೋಲಾಹಲದಲ್ಲಿ ಕಿವಿಗೆ ಬಿದ್ದವು. ಬಾಣವೊಂದು ತೆರೆದ ಕಿಟಕಿಯೊಳಗೆ ಬಂದು ನನ್ನ ಬೆನ್ನಿನ ಹಿಂದಿದ್ದ ಸೋಫಾಗೆ ನಾಟಿದಾಗ ಆತುರದಿಂದ ಥಪಕ್ಕನೆ ಆ ಕಿಟಕಿಯನ್ನು ಮುಚ್ಚಿದೆ.

ಏನೂ ಅರ್ಥವಾಗಲಿಲ್ಲ. ನನಗೆ ಹುಚ್ಚು ಹಿಡಿದಿದೆಯೇ, ಇಲ್ಲವೇ ಭ್ರಾಂತಿಯುಂಟಾಗಿದೆಯೇ, ಯಾವುದೂ ತಿಳಿಯಲಿಲ್ಲ. ತಲೆ ಕೆಟ್ಟು, ಕನಸು ಕಂಡಿರಬಹುದೇ ಎಂದು ಯೋಚಿಸಿ ಅಲ್ಲೇ ಬಿದ್ದಿದ್ದ ರಿಮೋಟ್ ಕೈಗೆತ್ತಿಕೊಂಡು ಟೀವಿಯನ್ನು ಹಾಕಿದೆ. ಸ್ವಾತಂತ್ರ್ಯ ಹೋರಾಟದ ಒಂದು ದೃಷ್ಯ. ಬ್ರಿಟೀಷರ ವಿರುದ್ಧ ನಾರೆಗಳು, "ಭಾರತ ಬಿಟ್ಟು ತೊಲಗಿ" ಎಂಬ ಕೂಗು ಗನಕ್ಕೇರಿತ್ತು. ಅಷ್ಟರಲ್ಲಿ ಆ ಚಳುವಳಿಗಾರರ ಮೇಲೆ ಬ್ರಿಟೀಷ್ ಪೋಲೀಸರ ಧಾಳಿ ನಡೆಯಿತು. ಬಿಳಿಯನೊಬ್ಬ ಕ್ಯಾಮರಾ ಕಡೆ ತಿರುಗಿ ಬಂದೂಕಿನಿಂದ ಗುಂಡು ಹಾರಿಸಿದಾಗ ಟೀವಿ ಸ್ಕ್ರೀನ್ ಒಡೆದು ಹೋಗಿದ್ದನ್ನು ನೋಡಿ ದಿಗಿಲಾದೆ. ಒಡೆದ ಸ್ಕ್ರೀನಿನಿಂದ ಆ ಆಂದೋಳನ ಕಾಣಿಸುತ್ತಲೇ ಇತ್ತು. ಇದು ಹೇಗೆ ಸಾಧ್ಯ ಎಂದು ಯೋಚಿಸುವಷ್ಟರಲ್ಲಿ ಪೋಲೀಸ್ ಪ್ಯಾದೆಗಳು ಟೀವಿಯೊಳಗಿನಿಂದ ಹೊರ... ಅಲ್ಲ ನನ್ನ ಕೋಣೆಯ ಒಳಗೆ ಬರಹತ್ತಿದರು. ಹೆದರಿ ನಾನು ಸ್ನಾನದ ಕೋಣೆಯೊಳಗೆ ಓಡಿನೀರು ತುಂಬಿದ್ದದೆ. ಓಡುತ್ತಿದ್ದಾಗ ಮೇಜಿನ ಮೇಲಿದ್ದ ಆ ಪುಟ್ಟ ಮೂರ್ತಿಯನ್ನು ಕೈಗೆತ್ತಿಕೊಂಡೆ.

ಸ್ನಾನದ ಕೋಣೆಯ ಬಾಗಿಲು ತೆಗೆದೇ ಇತ್ತು - ಬಹುಶಃ ಸ್ನಾನ ಮುಗಿಸಿ ಹೊರ ಬಂದಾಗ ಬಾಗಿಲನ್ನು ಮುಚ್ಚಿರಲಿಲ್ಲವೇನೋ. ಒಂದು ನಿಮಿಷ ಯೋಚಿಸುವ ಸಮಯ ದೊರಕಿತು. ನನ್ನ ಕೈಯಲ್ಲಿದ್ದ ಆ ಪ್ರಾಚೀನ ವಿಗ್ರಹ, ಹಾಗು ಬಡಿದ ಸಿಡಿಲಿನ ಪ್ರತಿಕ್ರಿಯೆಯಿಂದ ನನ್ನ ಕೋಣೆಯೇ ಒಂದು ಟೈಮ್​ಮಶೀನ್ - ಸಮಯ ಬದಲಾಯಿಸುವ ಯಂತ್ರವಾಗಿರ ಬೇಕು. ಕೋಣೆಯ ಒಂದೊಂದು ಬಾಗಿಲು-ಕಿಟಕಿಗಳೂ ಒಂದೊಂದು ಕಾಲಕ್ಕೆ ಹೆಬ್ಬಾಗಿಲುಗಳಾಗಿರಬೇಕು! ಸ್ನಾನದ ಕೋಣೆಯ ಬಾಗಿಲು ತೆರೆದೇ ಇದ್ದರಿಂದ ಈ ಕೋಣೆಗೆ ಆ ಪ್ರತಿಕ್ರಿಯೆ ತಗುಲಿರಲಿಲ್ಲವೇನೋ ಎಂದುಕೊಂಡೆ. ಕುತೂಹಲದಿಂದ ಆ ಮೂರ್ತಿಯನ್ನು ಗಮನಿಸ ತೊಡಗಿದೆ.

ಬಚ್ಚಲು ಮನೆಯ ನಲ್ಲಿಯಲ್ಲಿ ನೇರು ತೊಟಕುತ್ತಿತ್ತು. ಸ್ನಾನ ಮುಗಿಸಿದಾಗ ಬಹುಶಃ ನಲ್ಲಿ ನಿಲ್ಲಿಸಿರಲಿಲ್ಲವೇನೋ. ಸ್ನಾನದ ಕೋಣೆಯಲ್ಲಿ ನೀರು ತುಂಬಲೆಂದು ಇದ್ದ ಒಂದು ತೊಟ್ಟಿಯ ಕಟ್ಟೆಯ ಮೇಲೆ ಕೈಯಲ್ಲಿದ್ದ ಮೂರ್ತಿಯನ್ನು ಇರಿಸಿ, ನೀರು ನಿಲ್ಲಿಸಲು ಬಚ್ಚಲಿಗಿಳಿದೆ. ನೇರು ನಿಲ್ಲಿಸಿ ಹೊರಬಂದಾಗ ನನ್ನ ಕೈ ತಗುಲಿ ಆ ಮೂರ್ತಿ ನೀರು ತುಂಬಿದ್ದ ತೊಟ್ಟೊಯೊಳಗೆ ಬಿದ್ದು ಮುಳುಗಿತು. ನಾನೂ ತೊಟ್ಟಿಯೊಳಗೆ ಬಗ್ಗಿ ನೋಡಿದೆ; ಮಬ್ಬು ಬೆಳಕಿದ್ದ ಕಾರಣ ಏನೂ ಕಾಣಿಸಲಿಲ್ಲ. ಮೂರ್ತಿಯನ್ನು ಉಳಿಸುವ ಯತ್ನದಲ್ಲಿ ನಾನೇ ತೊಟ್ತಿಯೊಳಕ್ಕಿಳಿದು ಬುಡದಲ್ಲಿ ಕಾಲು ತಡವರಿಸಿದೆ. ಬಹಳ ದಿನಗಳಿಂದ ತೊಳೆದಿರಲಿಲ್ಲವೋ ಏನೋ -ತೊಟ್ಟಿಯಲ್ಲಿ ಪಾಚಿ ಕಟ್ಟಿತ್ತು. ಪಾಚಿ, ಒಂದೇ ಕಾಲಿನ ಮೇಲೆ ಮೈ ಭಾರ, ಎಲ್ಲವೂ ಸೇರಿ ಜಾರಿ ಬಿದ್ದೆ.

ತೊಟ್ಟಿಯಲ್ಲಿ ಮುಳುಗಿದವ ತಲೆಯೆತ್ತಿದಾಗ ಎಲ್ಲೋ ಹೊರಗೆ ಎದ್ದ ಆಭಾಸ. ನೋಡಿದರೆ ಒಂದು ಸಾರ್ವಜನಿಕ ಸ್ನಾನದ ಹೊಂಡ. ಇಳಿದು ಬರಲು ಸುತ್ತಲೂ ಕಲ್ಲಿನ ಮೆಟ್ಟಲುಗಳು. ಬೆಳಗಿನ ಜಾವವಾಗಿತ್ತು. ಸೂರ್ಯ ಆಗಿನ್ನೂ ಹುಟ್ಟುತ್ತಿದ್ದ. ಸುತ್ತಲೂ ಬೆಳಗಿನ ಪೂಜೆಗಳಲ್ಲಿ ವ್ಯಸ್ಥವಾಗಿದ್ದ ಜನರು. ಪುನಃ ನನ್ನ ಮನಸ್ಸಿನಲ್ಲಿ ಗೊಂದಲವುಂಟಾಯಿತು. ಕೊನೆಗೆ ಕೊಂಡದಲ್ಲಿ ಬಿದ್ದವನು ಯಾವುದೋ ಬೇರೆ ಕಾಲದಲ್ಲಿ ಎದ್ದಿರಬೇಕೆಂದು ತೀರ್ಮಾನಿಸಿದೆ. ದಡದಲ್ಲಿ ನೋಡಿದರೆ ಮತ್ತೊಂದು ಆಶ್ಚರ್ಯ ಕಾದಿತ್ತು! ನಾನು ಹೊರತೆಗೆದ, ಈ ಕಾಲ-ಪಯಣಕ್ಕೆ ಕಾರಣನಾದ ಆ ಋತ್ವಿಕ-ರಾಜ; ಮೂರ್ತಿಯಲ್ಲ - ಪ್ರತ್ಯಕ್ಷವಾಗಿ, ಮಾಂಸ-ರಕ್ತಗಳಿಂದ ಕೂಡಿ!

ನೀರಿನೊಳಗೇ ನಿಧಾನವಾಗಿ ನಡೆಯಲಾರಂಭಿಸಿದೆ. ಮೊದಲ ಹೆಜ್ಜೆ ಇಟ್ಟ ತಕ್ಷಣವೇ ತಲೆ ಸುತ್ತುವ ಆಭಾಸ. ಕಷ್ಟ ಪಟ್ಟು ನಾಲ್ಕು ಹೆಜ್ಜೆ ನಡೆದು, ನೀರಿನಿಂದ ಹೊರಗೆದ್ದು ಆ ಋತ್ವಿಕನ ಕಾಲಿನ ಬಳಿ ಕುಸಿದುಬಿದ್ದೆ. ನಾನು ಓದಿದ್ದ 'ಸಯನ್ಸ್ ಫಿಕ್ಷನ್' ಕತೆಗಳು ನಿಜವೇನೋ ಎನ್ನುವಂತೆ ಕಾಲ ಪ್ರಯಾಣ ನನ್ನನ್ನು 'ಡಿಸ್​ಓರಿಯಂಟ್' ಮಾಡಿದೆ ಎಂದು ಯೋಚಿಸುವಷ್ಟು ತ್ರಾಣವಿತ್ತು. ಮರುಕ್ಷಣದಲ್ಲಿ ಎಲ್ಲವೂ ಕತ್ತಲಾಯಿತು.

*****

ನನ್ನ ಕಣ್ತೆರೆದಾಗ ಯಾವುದೋ ಮನೆಯ ಒಂದು ಕೋಣೆಯಲ್ಲಿ, ಅಟ್ಟಣಿಗೆಯ ಮೇಲೆ ಹಾಸಿದ್ದ ಮೆತ್ತನೆಯ ಹಾಸಿಗೆಯಲ್ಲಿ ಮಲಗಿದ್ದೆ. ಸುತ್ತ ಯಾರೂ ಕಾಣಿಸಲಿಲ್ಲ. ಎದ್ದು ಕೋಣೆಯಿಂದ ಹೊರಬಂದೆ. ಆಚೆ ಬೀದಿಯಿಂದ ಜನರ ಓಡಾಡುವ ಗದ್ದಲ ಒಳಬರುತ್ತಿತ್ತು. ಮತ್ತೊಂದು ಕಡೆ ಅಡುಗೆ ಮನೆಯಂತಿದ್ದ ಮೂಲೆಯೊಂದರಲ್ಲಿ ಒಲೆಗುಂಡದ ಮೇಲೆ ಮಣ್ಣಿನ ಮಡಿಕೆಗಳನ್ನಿಟ್ಟು ಒಬ್ಬಾಕೆ ಅಡಿಗೆ ಮಾಡುತ್ತಿದ್ದರು. ಅದನ್ನು ಕಂಡು ನನಗೆ ಹೊಟ್ಟೆ ಹಸಿವಾಗಿರುವುದು ನೆನಪಾಯಿತು.

ಆಡಿಗೆ ಮಾಡುತ್ತಿದ್ದಾಕೆ ನನ್ನನ್ನು ನೋಡಿದರೂ ಮಾತನಾಡಲಿಲ್ಲ. ಬಾಗಿಲಾಚೆ ಹೋಗಿ ಸಣ್ಣನೆಯ ಧ್ವನಿಯಲ್ಲಿ ಏನೋ ಮಾತನಾಡಿದ ಶಬ್ಧ ಕೇಳಿಸಿತು. ಕೆಲ ಕ್ಷಣಗಳ ನಂತರ ಆ ಋತ್ವಿಕರೊಡನೆ ಒಳಬಂದು, ಅಡಿಗೆ ಮೂಲೆಗೆ ಮರಳಿದರು. ಋತ್ವಿಕರು ನನ್ನ ಕಡೆ ಬಂದು ತಿಳಿಯದ ಭಾಷೆಯಲ್ಲಿ ಏನೋ ಮಾತನಾಡಿದರು. ನನ್ನನ್ನು ನಾನೇ ನೋಡಿಕೊಂಡೆ - ಶರ್ಟನ್ನು ಧರಿಸಿದ್ದರೂ ನನ್ನ ಎಂದಿನ ಅಭ್ಯಾಸದಂತೆ ಸ್ನಾನದ ನಂತರ ಪಂಚೆಯನ್ನೇ ಉಟ್ಟಿದ್ದೆ. ನನ್ನ ಬಟ್ಟೆಗಳು ಇನ್ನೂ ನನ್ನ ಮೇಲೇ ಇದ್ದವು. ಒಂದು ಕ್ಷಣದಲ್ಲಿ ಹಲವಾರು ಯೋಚನೆಗಳು ನನ್ನ ತಲೆ ಹಾಯ್ದು ಹೋದವು:

"ಕಾಲ ಪ್ರಯಾಣ ಮಾಡಿ ಇಲ್ಲಿಗೆ ಬಂದಿರುವುದಂತೂ ಖಚಿತ. ಇವರ ಭಾಷೆಯನ್ನೂ ಅರಿಯದವ ನಾನು. ಇಲ್ಲಿಗೆ ಹೇಗೆ ಬಂದೆ ಎಂದು ತಿಳಿದಿಲ್ಲ. ಇಲ್ಲಿಂದ ಹೇಗೆ ಹಿಂತಿರುಗುವುದು? ನನ್ನ ಕಾಲದಲ್ಲಿ ನನ್ನ ಮನೆ, ಮಠ, ಬಂಧು, ಬಳಗ? ಹಿಂತಿರುಗಲಾಗದಿದ್ದರೆ ಇಲ್ಲಿಯೇ ಬದುಕಿ, ಇಲ್ಲಿಯೇ ಸಾಯುವುದೇ? ಕಾಲ ಪ್ರಯಾಣದ ಪರಿಣಾಮಗಳು?" ಅಷ್ಟರಲ್ಲಿ ಮತ್ತೊಂದು ವಿಚಿತ್ರ ವಿಚಾರ ಹೊಳೆಯಿತು "ನನ್ನ ಕಾಲದಲ್ಲಿಯೂ ನಾನಿದ್ದೇನೆಯೇ? ಈ ಕಾಲ ಪ್ರಯಾಣ ಎಂಥದ್ದು ಎಂದು ಅರಿತವರಾರು?" ಈ ವಿಚಾರಗಳು ಮುಗಿಯುವಷ್ಟರಲ್ಲಿ ಮತ್ತಷ್ಟು ವಿಚಾರಗಳು - "ಇದೇನು ಬರೀ ಕಾಲ ಪ್ರಯಾಣವೋ, ಅತವ ನಾನೇನಾದರೂ ಮತ್ತೊಂದು ಲೋಕಕ್ಕೇ ಬಂದಿರುವೆನೋ? ಕಾಲ ಪ್ರಯಾಣ ಸಾಧ್ಯವಾದರೆ 'ಪ್ಯಾರಲಲ್ ಯೂನಿವರ್ಸ್' ಏಕೆ ಸಾಧ್ಯವಿಲ್ಲ?"

"ನನ್ನ ಕಾಲದಲ್ಲಿ ನಾನು ಕಾಣೆಯಾದರೆ ನಮ್ಮವರು ನನಗಾಗಿ ಹುಡುಕುವರೆ? ನನ್ನ ಆ ವಿಚಿತ್ರ ಕೋಣೆಯೊಳಗೆ ಯಾರಾದರೂ ಬರಲು ಸಾಧ್ಯವೇ? ತೊಟ್ಟಿಯಲ್ಲಿ ಮುಳುಗಿದವ ಬೇರೆ - ಯಾರಾದರೂ ಪತ್ತೆ ಹಚ್ಚುವರೇ? ಭಗವಂತ, ನನಗೆ ಮೋಕ್ಷವೆಲ್ಲಿ?" ಇಷ್ಟೆಲ್ಲ ನನ್ನ ತಲೆಯಲ್ಲಿ ಹಾಯ್ದು ಹೋಗಲು ಇದನ್ನು ಬರೆಯುವಷ್ಟು, ಹೇಳುವಷ್ಟು ಅಥವ ಓದುವಷ್ಟು ಸಮಯ ತೆಗೆದುಕೊಳ್ಳಲಿಲ್ಲ. ಒಂದೇ ಕ್ಷಣದಲ್ಲಿ ಹಾಯ್ದು ಹೋದವು.

ನಾನು ಪುನಃ ಎಚ್ಚೆತ್ತುಕೊಂಡಾಗ ನನ್ನೆದುರಿದ್ದ ಮನುಷ್ಯ ಮತ್ತೇನೋ ಹೇಳುತ್ತಿದ್ದರು. ನನ್ನ ಮುಖದ ಶೂನ್ಯ ಭಾವ ನೋಡಿ ಮತ್ತೆ ನಿಧಾನವಾಗಿ ಹೇಳಲಾರಂಭಿಸಿದರು. ಹಿಂದಿ, ಸಂಸ್ಕೃತಗಳನ್ನೂ, ಹಾಗೂ ಆ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಅರಿತಿದ್ದೆ. ಅವರು ಹೇಳುತ್ತಿದ್ದ ಕೆಲವು ಪದಗಳು ಅರ್ಥವಾಗತೊಡಗಿದವು. ಹೊಟ್ಟೆ ಹಸಿದಿತ್ತು, ಇದು ನಿಜವಾಗಿ ಅನ್ಯ ಲೋಕವಾಗಿ ಇವರ ಆಹಾರ ಬೇರೆಯಾಗಿದ್ದರೆ? ನಾನು ಸಸ್ಯಾಹಾರಿ, ಇಲ್ಲಿ ಸಸ್ಯಾಹಾರ ಇಲ್ಲವಾದರೆ? ಎಂದೆಲ್ಲ ಯೋಚನೆ ಬಂದರೂ, ಹೊಟ್ಟೆ ಕೇಳಬೇಕೇ! ಹೊಟ್ಟೆಯ ಕಡೆ ಸನ್ನೆ ಮಾಡಿ ತೋರಿಸಿದೆ. ಅವರು ತಲೆ ಕುಲುಕುತ್ತ ಹಿಂದೆ ತಿರುಗಿ ಕೂಗಿದರು. ಒಂದು ಮಣ್ಣಿನ ಬೋಸಿಯಲ್ಲಿ ಬೆಂದ ಹೆಸರುಬೇಳೆ ಹಾಗು ಲೋಹದ ತಟ್ಟೆಯಲ್ಲಿ ಗಂಜಿಯುಕ್ತ ಅನ್ನವನ್ನು ನನ್ನ ಮುಂದೆ ತಂದಿಟ್ಟರು. ಮನೆಯ ಅಡಿಗೆ ನೆನಪಾಯಿತು - ಅನ್ನ-ಸಾರಿನ ನನ್ನ ಪರಮಪ್ರಿಯ ಅಡಿಗೆ. ಒಟ್ಟಾರೆ ಅನ್ನದಲ್ಲಿ ಬೇರೆಯ ರುಚಿಯಿದ್ದರೂ ಅನ್ನವೇ ಆಗಿತ್ತು. ಹೊಟ್ಟೆ ತುಂಬ ತಿಂದು ಮತ್ತೊಂದು ಪುಟ್ಟ ಮಡಿಕೆಯಲ್ಲಿ ತಂದಿಟ್ಟ ನೀರನ್ನು ಕುಡಿದೆ. ಈಗ ಉಳಿದ ವಿಚಾರಗಳನ್ನು ಯೋಚಿಸುವ ಶಕ್ತಿ ಬಂದಿತ್ತು.

ಋತ್ವಿಕರ ಬಳಿ ಹೋಗಿ ಕುಳಿತೆ. ಅವರು ದೊಡ್ಡ ವಾಕ್ಯಗಳನ್ನು ಪುನಃ ಮಾತನಾಡಿದರು. ಈಗ ಅವರ ಮೇಲೆ ನನ್ನ ಸಂಪೂರ್ಣ ಗಮನ ಇದ್ದರಿಂದಲೋ ಏನೋ ಇನ್ನೂ ಹೆಚ್ಚು ಪದಗಳು ಪರಿಚಿತವಾಗಿ ಕೇಳಿಸಿದವು. ಹೆಚ್ಚು ಕಡಿಮೆ "ನೀನು ಯಾರು? ಎಲ್ಲಿಂದ ಬಂದಿರುವೆ?" ಎಂದು ಕೇಳುತ್ತಿದ್ದಾರೆಂದು ಊಹಿಸಿದೆ. ಇವರಿಗೇನು ಹೇಳಲಿ? ಹೇಗೆ ಹೇಳಲಿ? "ಕಾಲ ಪ್ರಯಾಣ ಮಾಡಿ ಬಂದಿರುವೆ, ನಾನು ಭವಿಷ್ಯ ಮಾನವ" ಎಂದು ಹೇಳಲೇ? ಅದು ಇವರಿಗೆ ಅರ್ಥವಾದೀತೆ? ನಂಬಿಯಾರೆ? ಎಂಬ ಯೋಚನೆಗಳು ಮನಸ್ಸನ್ನು ಕಾಡಹತ್ತಿದವು.

ಕಡೆಗೆ "ದೂರದ ಊರಿನಿಂದ ಬಂದಿರುವವ, ಈ ಊರಿನಲ್ಲಿ ಯಾರೂ ಗೊತ್ತಿಲ್ಲ" ಎಂದು ಹೇಳಲು ನಿರ್ಧರಿಸಿದೆ. ಇದನ್ನು ಹೇಳುವುದಾದರೂ ಹೇಗೆ? ಸಂಸ್ಕೃತ, ಹಿಂದಿ ಹಾಗು ನಾನರಿತ ಇತರ ಭಾಷೆಗಳನ್ನು ಉಪಯೋಗಿಸಿಕೊಂಡು ಒಂದೊಂದಾಗಿ ಪದಗಳನ್ನು ಹೇಳಲಾರಂಭಿಸಿದೆ. ಒಂದೊಂದು ಪದವನ್ನೂ ಎಲ್ಲ ಭಾಷೆಗಳಲ್ಲಿ ಹೇಳತೊಡಗಿದೆ. ಭಾವಹೀನರಾಗಿದ್ದರೆ ಮುಂದಿನ ಭಾಷೆಯಲ್ಲಿ ಹೇಳುತ್ತಿದ್ದೆ, ಅವರ ಮುಖದಲ್ಲಿ ಜ್ಞಾನೋದಯ ಕಂಡಾಗ ಮುಂದಿನ ಪದಕ್ಕೆ ವೃದ್ಧಿಸುತ್ತಿದ್ದೆ. ಹಲವು ನಿಮಿಷಗಳು ಇದೇ ರೀತಿ ಮಾತನಾಡಿದ ನಂತರ ನನ್ನ ಮಾತು ಅವರ ಬುದ್ಧಿಗೆ ತಲುಪಿತೆಂದು ನಿಟ್ಟುಸಿರೆಳೆದೆ. ಈಗ ಇವರಿಗರ್ಥವಾಗುವ ಕೆಲವು ಪದಗಳು ನನ್ನ ಕೈಯಲ್ಲಿದ್ದವು. ಅವನ್ನು ಕಾಳಜಿ ವಹಿಸಿ ನೆನಪಿನಲ್ಲಿಟ್ಟುಕೊಂಡೆ.

ನಾನು ಆಚೆ ಹೋಗಲು ಹೊರಟಾಗ ಋತ್ವಿಕರು ನನ್ನನ್ನು ಅವರ ಕೈ ಅಡ್ಡ ಹಾಕಿ ತಡೆದರು. ಅವರ ಮಾತುಗಳಿಂದ ನನ್ನ ದೇಹಸ್ಥಿತಿ ಇನ್ನೂ ಸರಿಯಾಗಿಲ್ಲವೆಂದೂ, ಹಾಗು ನಾನು ಈಗಲೇ ಹೊರ ಹೋಗಬಾರದೆಂದು ಅರ್ಥವಾಯಿತು. ನಾನು ಎಷ್ಟು ದಿನ ಮಲಗಿದ್ದೆ ಎಂದು ಸನ್ನೆ ಮಾಡಿ ಸೂರ್ಯನಕಡೆ ತೋರಿಸಿ ಕೇಳಿದೆ. ಅವರು ಆರು ಬೆರಳುಗಳನ್ನು ಎತ್ತಿ ಹಿಡಿದರು. "ಅಂದರೆ, ನಾನು ಮುಳುಗಿದ್ದು ಬುಧವಾರದಂದು - ಹಾಗಾದರೆ ಇವತ್ತು...ಛೆ-ಛೇ....ಇದೇನು ಸಮಯ ಪ್ರಯಾಣ ಮಾಡಿ ಹಿಂದೆ ಬಂದ ಮೇಲೆ ನನ್ನ ಕಾಲದಲ್ಲಿ ಸಮಯ ಗತಿಸುವುದೇ?" ಎಂದೆಲ್ಲ ಆಲೋಚನೆಯುಂಟಾಗಿ ಅದರ ಬಗ್ಗೆ ಯೋಚಿಸಲೇಬಾರದೆಂದು ನಿರ್ಧರಿಸಿದೆ.

ಸುಮಾರು ಒಂದು ವಾರದ ಕಾಲ ನನ್ನನ್ನು ಆಚೆ ಹೋಗಲು ಬಿಡಲಿಲ್ಲ. ದಿನ ನಿತ್ಯ ಎರಡು ಬಾರಿ ಊಟ ತಿಂದು ಮಲಗಿರುತ್ತಿದ್ದೆ. ಋತ್ವಿಕರು ಆಗಾಗ ಔಷಧದೊಡನೆ ಬಂದು ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು. ಇವರ ಭಾಷೆಯ ಇನ್ನೂ ಹಲವಾರು ಪದಗಳು ಗೊತ್ತಾಗಿ ಈಗ ಇವರೊಂದಿಗೆ ಸಂಭಾಷಣೆ ನಡೆಸಲಾಗುತ್ತಿತ್ತು. ಏಳನೆಯ ದಿನದಂದು ಋತ್ವಿಕರೇ ಬಂದು ನನ್ನನ್ನು ಬಾಗಿಲಿಂದ ಹೊರಗೆ ಕರೆದೊಯ್ದರು. ಅವರೊಂದಿಗೆ ಮಾತನಾಡುತ್ತ ನನಗೆ ಅವರು ತೋರಿಸಿದ ಆರು ಬೆರಳುಗಳು ನಾನು ಮೂರ್ಛೆ ಬಿದ್ದಿದ್ದ ಸಮಯವಲ್ಲ, ನಾನು ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದ್ದ ಸಮಯವೆಂದು ಅರ್ಥವಾಯಿತು.

ಮುಂದೇನು ಮಾಡುವುದು ತಿಳಿಯಲಿಲ್ಲ. ಹಿಂತಿರುಗುವುದು ನನ್ನ ಕೈಯಲ್ಲಿರಲಿಲ್ಲ. ನನ್ನೊಳಗಿನ ಆರ್ಕಿಯಾಲಜಿಸ್ಟ್ ಎಚ್ಚೆತ್ತುಕೊಂಡಿದ್ದ. ನನ್ನ ಊಹೆ ಸರಿಯಾಗಿದ್ದರೆ ಈ ಜನಾಂಗದ ಬಗ್ಗೆ ಇವರ ಅವಶೇಶಗಳನ್ನು ನೋಡಿ ಕೇವಲ ಊಹಿಸಿದ್ದೆವು. ಈಗ ನನಗೆ ಇವರುಗಳ ಮಧ್ಯೆ ಜೀವನ ಮಾಡಿ ಇವರ ರೀತಿ-ರಿವಾಜುಗಳನ್ನು ತಿಳಿಯುವ ಅವಕಾಶ ದೊರಕಿತ್ತು. ಆದಷ್ಟು ಇವರುಗಳ ಬಗ್ಗೆ ತಿಳಿಯಬೇಕೆಂದು ತೀರ್ಮಾನಿಸಿದೆ. ಜೊತೆಗೆ ನಾನು ಬಹು ಎಚ್ಚರದಿಂದಿರಬೇಕೆಂದೂ ಅರ್ಥಮಾಡಿಕೊಂಡೆ. ಇವರು ಪ್ರಾಚೀನ ಕಾಲದವರಾಗಿ ನನ್ನ ಈ ಕಾಲದ ತಂತ್ರಜ್ಞಾನದಿಂದ ಇವರ ತಾಂತ್ರಿಕ ಅಭಿವೃದ್ಧಿ ಬದಲಾಯಿಸಬಾರದು. ಹಾಗೇನಾದರೂ ಆದಲ್ಲಿ, ಹಾಗೂ ನಾನು ನೋಡಿರುವ 'ಸಯನ್ಸ್ ಫಿಕ್ಶನ್' ನಿಜವಾಗಿದ್ದಲ್ಲಿ, ಇವರ ತಂತ್ರಜ್ಞಾನವೇನಾದರೂ ಬದಲಾದರೆ ನಮ್ಮ-ನಿಮ್ಮ ಭವಿಷ್ಯವಷ್ಟೇ ಅಲ್ಲ ನಮ್ಮ ಕಾಲವೇ ಬದಲಾಗಿ, ನಾವೆಲ್ಲರು ಹುಟದೆಯೇ ಇರಬಹುದು. ಆದರೆ ನಾನು ಹುಟ್ಟದಿದ್ದರೆ, ಇಲ್ಲಿಗೆ ಬರಲು ಹೇಗೆ ಸಾಧ್ಯ? ಇದು ಕಾಲ ಪ್ರಯಾಣದ ದೊಡ್ಡ ವಿರೋಧಾಭಾಸ!

ಸರಸ್ವತೀ-ಸಿಂಧು ಜನಾಂಗದ ನಡುವ ಜೀವನ ಮಾಡಲು ನಿರ್ಧಾರ ಮಾಡಿ, ಅದಕ್ಕೆ ಮಾನಸಿಕವಾಗಿ ಸಿದ್ಧನಾದೆ. ನಾನು ಬಿಟ್ಟು ಬಂದ ಕಾಲದ ಬಗ್ಗೆ ಹೆಚ್ಚು ಯೋಚಿಸಿ ಗೊಂದಲಕ್ಕೊಳಗಾಗಬಾರದೆಂದೂ ತೀರ್ಮಾನಿಸಿದೆ.

*****

ನಾ ಕಂಡ ಎಲ್ಲವನ್ನೂ ದಾಖಲೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆ. ಆದರೆ ದಾಖಲೆ ಎಲ್ಲಿ ಮಾಡಲಿ? ಕೊನೆಗೆ ನನ್ನ ಶರ್ಟಿನ ಜೇಬಿನಲ್ಲಿದ್ದ ಪೆನ್ನೊಂದು ನೆನಪಿಗೆ ಬಂತು. ನಾನು ಮಲಗಿದ್ದ ಹಾಸಿಗೆಯ ಪಕ್ಕದಲ್ಲೇ ಬಿಚ್ಚಿಟ್ಟಿದ್ದ ಶರ್ಟ್ ಕೈಗೆತ್ತಿಕೊಂಡೆ. ಅದರೊಳಗಿನ ನನ್ನ ಚೆಕ್ ಸಹಿ ಮಾಡುವ ಪೆನ್ ಸ್ವಲ್ಪ ಒದ್ದೆಯಾಗಿದ್ದರೂ ನನ್ನ ಕೈ ಮೇಲೆ ಗೀಚಿ ನೋಡಿದಾಗ ಬರೆಯುತ್ತಿತ್ತು. ಬರೆಯಲು ಹಾಳೆಗಳೆಲ್ಲಿ? ಈ ಕಾಲದಲ್ಲಂತೂ ಹಾಳೆಗಳು ಸಿಗುವ ಹಾಗಿಲ್ಲ - ಇನ್ನೂ ನಾವು ಕಾಣುವಂತಹ ಹಾಳೆಗಳ ಅವಿಶ್ಕಾರವೇ ಆಗಿರಲಿಲ್ಲ! ಇವರು ಬರೆಯುತ್ತಿದ್ದದ್ದು ಕಲ್ಲು ಶಾಸನಗಳೆಂದು ನಮ್ಮ ಕಾಲದಲ್ಲಿಯೇ ನನ್ನ ಶೋಧನೆಯಿಂದ ಅರಿತಿದ್ದೆ. ಆ ಕಲ್ಲುಗಳ ಮೇಲೆ ಬರೆಯುವುದು ಕಷ್ಟವಷ್ಟೇ ಅಲ್ಲ, ಅಕಸ್ಮಾತ್ ನನ್ನ ಕಾಲಕ್ಕೆ ಹಿಂತಿರುಗುವ ಸಂದರ್ಭ ಬಂದರೆ ಹೇಗೆ ಕೊಂಡೊಯ್ಯುವುದು? ಕಡೆಗೆ ನನ್ನ ಬಿಳಿಯ ಪಂಚೆಯ ಮೇಲೆ ಬರೆಯುವ ನಿರ್ಧಾರ ಮಾಡಿದೆ. ಹಾಗೆ ಬರೆದರೆ ಅದನ್ನು ಉಡುವಹಾಗಿಲ್ಲ. ಮೇಲಾಗಿ ಆ ಪಂಚೆಯುಟ್ಟು ಹೊರಗೆ ಹೋಗಲಾಗದು. ಹಾಗಾಗಿ ಮೊದಲಿಗೆ ಈ ಕಾಲದ ವಸ್ತ್ರಗಳ ಏರ್ಪಾಡು ಮಾಡುವುದು ಸೂತ್ಕವೆನಿಸಿತು.

ಆ ಯೋಚನೆ ಬಂದಾಗ ಋತ್ವಿಕರ ಬಳಿ ಹೋಗಿ ಆದಷ್ಟು ನಿಖರವಾದ ಭಾಷೆಯಲ್ಲಿ ಕೇಳಿಕೊಂಡೆ:

"ನನ್ನ ವಸ್ತ್ರಗಳನ್ನು ಧರಿಸಿ ಹೊರ ಹೋಗುವಂತಿಲ್ಲ. ನಿಮ್ಮ ರೀತಿಯ ವಸ್ತ್ರಗಳನ್ನು ನನಗೆ ಕೊಡಲಾಗುತ್ತದೆಯೇ?"

ಅವರ ಮುಖದ ಮೇಲೆ ಕಂಡ ಅಚ್ಚರಿ ನನಗರ್ಥವಾಗಲಿಲ್ಲ. ನಂತರ ಇದಕ್ಕೆ ಕಾರಣ ತಿಳಿದಿದ್ದು. ಅವರು ಧರಿಸಿದ್ದ ವಸ್ತ್ರಗಳು ಅವರ ಪದವಿ ಹಾಗು ಸ್ಥಾನ-ಮಾನಗಳ ಸಂಕೇತ. ಅವರು ಕಂದು ಬಣ್ಣದ ದಪ್ಪನೆಯ ಕಾರ್ಪಸ (ಕಾಟನ್) ಬಟ್ಟೆಯನ್ನು ಎಡ ಹೆಗಲಿನ ಮೇಲಿನಿಂದ ಬಲ ಹೆಗಲಿನ ಕೆಳಕ್ಕೆ ಮಂಡಿಯಿಂದ ಸ್ವಲ್ಪ ಕೇಳಗಿನ ವರೆಗು ಧರಿಸಿದ್ದರು. ಅವರ ಈ ವಸ್ತ್ರಕ್ಕೆ ವಿಶೇಷವಾದ ಕೆಂಪು ಬಣ್ಣದ ಅಂಚಿತ್ತು. ಅಂಚಿನ ಮೇಲೆ ಹಳದಿ ಬಣ್ಣದ ಹೂ-ಬಳ್ಳಿಗಳ ವಿನ್ಯಾಸ. ಈ ವಸ್ತ್ರಕ್ಕೆ ಎಲ್ಲಿಯೂ ಹೊಲಿಗೆಗಳಿರಲಿಲ್ಲ. ಹಣೆ ಹಾಗು ತೋಳಿನ ಮೇಲೆ ಬಂಗಾರದ ಪದಕ ಹಾಗು ಆನೆಯ ದಂತದ ಮಣಿಗಳುಳ್ಳ ಆಭರಣಗಳನ್ನು ಧರಿಸಿದ್ದರು.

ಆ ರೀತಿಯ ವಸ್ತ್ರಗಳನ್ನು ಇತರರು ಧರಿಸುವಂತಿರಲಿಲ್ಲ. ನನಗಾಗಿ ಸಾಮಾನ್ಯ ಜನರು ಧರಿಸುವಂತಹ ವಸ್ತ್ರಗಳನ್ನು ತರಿಸಿ ಕೊಟ್ಟರು. ಇವೂ ಸಹ ಅದೇ ರೀತಿ ಎಡ ಹೆಗಲಿನ ಮೇಲಿನಿಂದ ಬಲ ಹೆಗಲಿನ ಕೆಳಕ್ಕೆ ಧರಿಸುವಂಥದ್ದಾದರೂ ಇದು ಅಷ್ಟು ಒಳ್ಳೆಯ ಗುಣಮಟ್ಟದ ಬಟ್ಟೆಯಾಗಿರಲಿಲ್ಲ. ಮೇಲಾಗಿ ಇದು ಋತ್ವಿಕರು ಉಟ್ಟಂತಹ ಹೊಲಿಗೆಯಿಲ್ಲದ ವಸ್ತ್ರವಾಗಿರಲಿಲ್ಲ. ಇದನ್ನು ಆ ಆಕಾರದಲ್ಲಿ ಹೊಲಿಯಲಾಗಿತ್ತು. ತಲೆಯ ಮೇಲೆ ಕಟ್ಟಿಕೊಳ್ಳಲು ಮತ್ತೊಂದು ತುಣುಕು ವಸ್ತ್ರವೂ ಇತ್ತು. ತೋಳಿನ ಮೇಲೆ ಮಣಿಗಳ ಒಂದು ಕಟ್ಟು ಆಭರಣ.

ನನ್ನ ಪಂಚೆ ಈಗ ನನ್ನ ದಾಖಲೆ ಪುಸ್ತಕವಾಗಲು ಯಾವ ಅಡ್ಡಿಯೂ ಇರಲಿಲ್ಲ. 'ಹೊಸ' ವಸ್ತ್ರಗಳನ್ನು ತೊಟ್ಟು ಬೀದಿಗೆ ಹೋದೆ. ದಾಖಲೆ ಮಾಡಲು ಎಷ್ಟೊಂದು ವಿಚಾರಗಳು. ಎಲ್ಲಿ ಆರಂಭಿಸಲಿ? ಇಲ್ಲಿ ಮೊದಲಿಗೆ ಕಾಣಿಸುವಂತಹ ವಸ್ತ್ರ ವಿನ್ಯಾಸದ ವಿಚಾರ ಹೇಳುವುದೇ ಸೂಕ್ತವೆನಿಸಿತು. ಪುರುಷರ ವಸ್ತ್ರಗಳನ್ನು ಮೇಲಾಗಲೇ ಹೇಳಿರುವೆ - ಅಂದರೆ ನನ್ನ ವಸ್ತ್ರಗಳಂತೆ ಪುರುಷರ ವಸ್ತ್ರಗಳು. ಜೊತೆಗೆ ಗಡ್ಡ ಮೀಸೆಗಳನ್ನು ಆಗಾಗ ಕತ್ತರಿಸಿಕೊಂಡು ಹದದಲ್ಲಿಟ್ಟುಕೊಳ್ಳುತ್ತಿದ್ದದ್ದೂ ತೋರುತ್ತಿತ್ತು. ತಲೆಗೂದಲನ್ನೂ ಆಗಾಗ ಕತ್ತರಿಸಿಕೊಂಡಿರುವುದು ಕಂಡು ಬರುತ್ತಿತ್ತು. ಉದ್ದವಾದ ಜಟೆಗಳನ್ನು ತಲೆಯ ಹಿಂದೆ ಗಂಟಿನಾಕಾರದಲ್ಲಿ ಕಟ್ಟಿಕೊಳ್ಳುತ್ತಿದ್ದರು. ಮೇಲಾಗಿ ವಸ್ತ್ರಗಳು ಕೇವಲ ಕಂದು ಬಣ್ಣಕ್ಕೆ ಸೀಮಿತವಾಗಿರಲಿಲ್ಲ. ಕಂದು, ಬಿಳಿ, ಹಳದಿ, ಕೆಂಪು, ಹಸಿರು ಹಾಗು ನೀಲಿ ಬಣ್ಣಗಳ ಬಟ್ಟೆಗಳು ಎಲ್ಲೆಲ್ಲೂ ಕಾಣಿಸುತ್ತಿದ್ದವು.

ಮಹಿಳೆಯರ ವಸ್ತ್ರ ವಿನ್ಯಾಸ ಸ್ವಲ್ಪ ವಿಭಿನ್ನವಾಗಿತ್ತು. ಕೆಳಗೆ ಲಂಗದಂತಹ ಒಂದು ವಸ್ತ್ರ. ಬರಿದಾದ ಸೊಂಟ, ಮೇಲೆ ಎರಡೂ ಹೆಗಲು ಮುಚ್ಚುವಂತಹ ಕುಪ್ಪಸ. ಮಹಿಳೆಯರಲ್ಲಿ ಈಗಿನಂತೆ ಆಗಲೂ ಆಭರಣಗಳು ಬಹು ಪ್ರಚಲಿತ. ಕೆಂಪು ಹಾಗು ಕಪ್ಪು ಚಿತ್ರಾಕಾರಗಳ ವಿನ್ಯಾಸ ಮಣ್ಣಿನ ಬಳೆಗಳು, ಉದ್ದನೆಯ ಕಂಬಿಯನ್ನು ಚಕ್ರಾಕಾರದಲ್ಲಿ ಬಗ್ಗಿಸಿ ಮಾಡಿದ ತಾಮ್ರದ ಬಳೆಗಳು, ಚಿನ್ನ, ಬೆಳ್ಳಿ, ಹಾಗು ಹರಳು-ಮಣಿಗಳುಳ್ಳ ಹಣೆಪಟ್ಟಿಗಳು, ಬಳೆಗಳು, ಓಲೆಗಳು, ಕುತ್ತಿಗೆ-ಹಾರಗಳು, ಕಾಲ್ಬಳೆಗಳು, ಚೂಡಾಮಣಿಗಳು, ಸೊಂಟದ ಪಟ್ಟಿಗಳು ಹೀಗೆ. ಇಲ್ಲಿಯ ಮತ್ತೊಂದು ವಿಶಿಷ್ಟತೆ ಶಂಕದ ಬಳೆಗಳು.

ಮಣ್ಣಿನ ಬಳೆಗಳನ್ನು ನಮ್ಮ ಕಾಲದಲ್ಲಿ ಗಾಜಿನ ಬಳೆಗಳನ್ನು ಬಳಸುವ ರೀತಿಯಲ್ಲಿ ಬಳಸುತ್ತಿದ್ದರು. ಉಪಯೋಗಿಸುವುದು, ಒಡೆದರೆ ಅಲ್ಲೇ ಬಿಸಾಡುವುದು! ಈ ತುಣುಕುಗಳೇ ನಮಗೆ ಶೋಧನೆ ಮಾಡುವ ಸಮಯದಲ್ಲಿ ಸಿಗುತ್ತಿದ್ದವೆಂದು ಅರ್ಥವಾಯಿತು. ಇವರುಗಳು ಆಭರಣಗಳನ್ನು ಮಾಡುವುದರಲ್ಲಿ ಬಹು ತೀಕ್ಷ್ಣ ಕುಶಲಕರ್ಮಿಗಳು. ಚಿನ್ನದ ತಗಡನ್ನು ತಟ್ಟಿ ಆಭರಣಗಳನ್ನು ಮಾಡುತ್ತಿದ್ದರು. ಚಿನ್ನದ ಕಟ್ಟಿನಲ್ಲಿ ನಾನಾರೀತಿಯ ಅಮೂಲ್ಯವಾದ ಕಲ್ಲುಗಳನ್ನು ಕೂರಿಸಿ ಹಲವಾರು ಆಭರಣಗಳನ್ನು ತಯಾರಿಸುತ್ತಿದ್ದರು.

ಋತ್ವಿಕರ ಮನೆಯಲ್ಲಿದ್ದ ಒಂದು ಆಭರಣ ಹತ್ತಿರದಿಂದ ನೋಡಿ ಪರಿಶೀಲಿಸುವ ಅವಕಾಶ ಒಮ್ಮೆ ದೊರಕಿತು: ಬಹು ಸುಂದರವಾದ ಹಾರ ಅದು. ಚಿನ್ನ ಹಾಗು ನೀಲ ಮಣಿಗಳನ್ನು ದಾರದಲ್ಲಿ ಪೋಣಿಸಲಾಗಿತ್ತು. ಪದಕವಾಗಿ ಮೂರು ಮಣಿಗಳು - ಮಧ್ಯೆ ದೊಡ್ಡ ನೀಲ ಮಣಿ, ಎರಡೂ ಬದಿಯಲ್ಲಿ ಆನೆಯ ದಂತದ ಮಣಿಗಳು. ನಮ್ಮ ಕಾಲದಲ್ಲೂ ಇದು ಫ್ಯಾಶನ್ ಸ್ಟೇಟ್ಮೆಂಟ್ ಆಗಬಹುದೆಂದುಕೊಂಡೆ. ಕಳ್ಳತನ ಜಗದ ಅತ್ಯಂತ ಹಳೆಯ ವೃತ್ತಿಗಳಲ್ಲೊಂದು ಎನ್ನುವುದು ಸತ್ಯ. ಈ ಕಾಲದಲ್ಲೂ ಕಳ್ಳ ಕಾಕರ ಭಯವಿರುತ್ತಿತ್ತು. ಹಾಗಾಗಿ ಇಂತಹ ಬೆಲೆ ಬಾಳುವ ಒಡವೆಗಳನ್ನು ಮಾಲಿಕರು ನೆಲದಲ್ಲು ಹುಗಿದಿಟ್ಟಿರುತ್ತಿದ್ದರು!

ಕಾರ್ಪಸ! ಇಷ್ಟು ಹಿಂದಿನ ಜನಾಂಗಗಳಲ್ಲಿ ನೇಯ್ದ ಬಟ್ಟೆ ಕಾಣುವುದೇ ವಿರಳ - ಪ್ರಾಣಿ ಚರ್ಮಗಳನ್ನು ತೊಡುತ್ತಿದ್ದವರೇ ಹೆಚ್ಚು. ಆದರೆ ಈ ಜನಾಂಗ ತೆಳ್ಳನೆಯ ಕಾರ್ಪಸ ಬಟ್ಟೆಯನ್ನು ನೇಯುತ್ತಿದ್ದರು. ಅನೇಕ ಬೆಳೆಗಳೊಂದಿಗೆ ಹತ್ತಿಯನ್ನೂ ಬೆಳೆಯುತ್ತಿದ್ದರು. ಈ ಹತ್ತಿಯಿಂದ ನೂಲು ತೆಗೆದು, ಆ ನೂಲಿನಿಂದ ಬಟ್ಟೆ ನೇಯ್ಯುವ ವಿಧಾನವನ್ನೂ ಅರಿತಿದ್ದರು. ಅರೆಯುಳ್ಳ ಗಾಲಿಯನ್ನರಿತಿದ್ದ ಇವರು, ಪ್ರಾಚೀನ ಚರಕಗಳ ಸಹಾಯದಿಂದ ನೂಲು ತೆಗೆಯುತ್ತಿದ್ದರು. ಈ ನೂಲನ್ನು ಮಣ್ಣಿನ ಲಾಳಿಯಲ್ಲಿ ಸುತ್ತಿ ನಂತರ ನೆಯ್ಗೆ ಯಂತ್ರದಲ್ಲಿ ಬಟ್ಟೆಯಾಗಿ ನೇಯ್ಯುತ್ತಿದ್ದರು. ಎಲುಬು, ಅಥವ ತಾಮ್ರದ ಸೂಜಿಯಿಂದ ಹೊಲಿಯುವುದನ್ನೂ ಅರಿತಿದ್ದರು.

ಜೊತೆಗೆ ಬಣ್ಣಗಳು. ಬಟ್ಟೆಗಳಿಗೆ ಬಣ್ಣ ಹಚ್ಚುವುದನ್ನು ಹೇಗೆ ಕಲಿತಿದ್ದರೆಂದು ಯಾರಿಗೂ ತಿಳಿಯದು. ಬಹುಶಃ ಅದು ಕಾಕತಾಳೀಯವಾಗಾದದ್ದು. ಆದರೆ ಇವರು ಬಟ್ಟೆಗಳಿಗೆ ಅನೇಕ ಬಣ್ಣಗಳನ್ನು ಹಾಕುತ್ತಿದ್ದರು. ಭಾರತದ ಪ್ರಸಿದ್ಧ ವಜ್ರನೀಲಿ, ಅರಗಿನಿಂದ ಕೆಂಪು, ಅರಿಶಿನದಿಂದ ಹಳದಿ, ಹಾಗು ಮಸಿಯಿಂದ ಕಪ್ಪು ಹೀಗೆ ಪ್ರಥಮ ಬಣ್ಣಗಳು. ಇವುಗಳನ್ನು ಬೆರೆಸಿ ಯಾವ ಬಣ್ಣ ಬೇಕಾದರೂ ಮಾಡುವ ಸಾಧ್ಯತೆ ಇತ್ತು.

ಕಾಲ ಕ್ರಮೇಣ ನನ್ನ ಎರಡು ಮಡಿಕೆಯ ಪಂಚೆಯಮೇಲೆ ರೇಖೆಗಳೆಳೆದು ಅದನ್ನು ವಿಭಾಗಿಸಿಕೊಂಡೆ. ಒಂದೊಂದು ವಿಭಾಗಕ್ಕೂ ಓಡು-ಸಂಖ್ಯೆಗಳನ್ನು ಕೊಟ್ಟು ಕಾಗದ ಹಾಳೆಗಳಂತೆ ಬಳಸುತ್ತಿದ್ದೆ. ಪೆನ್ನು ಹೊಸದಾಗಿತ್ತು, ಸಾಕಷ್ಟು ಬರೆಯುವ ಸಾಧ್ಯತೆ ಇತ್ತು, ಆದರೆ ಅದು ಮುಗಿದರೆ ಬೇರೆಯಿರಲಿಲ್ಲ, ಸಿಗುವಹಾಗಿರಲಿಲ್ಲ. ಹಾಗಾಗಿ ನನ್ನದೇ ಆದ ಒಂದು ತುಣುಕು ಭಾಷೆ ಮಾಡಿಕೊಂಡು ಅದರಲ್ಲಿ ನನಗರ್ಥವಾಗುವ ಹಾಗೆ ಚಿಕ್ಕ ಅಕ್ಷರಗಳಲ್ಲಿ ನನ್ನ ಅನುಭವ ಹಾಗು ಅವಲೋಕನಗಳನ್ನು ಬರೆಯಲಾರಂಭಿಸಿದೆ.

*****

ನಾನು ಹಿಂದೆ ಹೇಳಿರುವ ವಸ್ತ್ರಾಭರಣಗಳ ವಿಚಾರಗಳನ್ನು ದಾಖಲೆ ಮಾಡಿದ್ದು ಬಹು ದಿನಗಳ ನಂತರ - ನಾನು ವಸ್ತ್ರ ತಯಾರಿಕೆ ಕೆಲಸದಲ್ಲಿ ವ್ಯಸ್ಥನಾದಮೇಲೆ. ಅದು ಅಲ್ಲಿ ಹೇಳಲು ಸೂಕ್ತವಾಗಿದ್ದರೂ ನನ್ನ ಕತೆಯಲ್ಲಿ ಕಾಲ ಕ್ರಮ ತಪ್ಪಿ ಹೋಗಿದೆ. ನಾನು ಗುಣವಾದ ದಿನಗಳಿಗೆ 'ರಿವೈಂಡ್' ಮಾಡಿಕೊಳ್ಳೋಣ.

ಹೊರಗೆ ಕಾಲಿಟ್ಟಿದ್ದಾಯಿತು. ಮುಂದೇನು ಮಾಡುವುದು? ನನ್ನ ಕಾಲದಲ್ಲಿ ಭೂಶೋಧನೆ ನಡೆಸುತ್ತಿದ್ದದ್ದು ಇದೇ ಊರಿನಲ್ಲಿ ಎಂಬುದು ನನಗೀಗ ಖಚಿತವಾಗಿತ್ತು, ಹಾಗಾಗಿ ಈ ಊರಿನ ರಸ್ತೆ-ಮಾರ್ಗಗಳು ಸುಮಾರಾಗಿ ಗೊತ್ತಿದ್ದವು. ಆದರೆ ಎಲ್ಲಿ ಹೋಗಲಿ? ಯಾರನ್ನು ಮಾತನಾಡಿಸಲಿ? ನೋಡಬೇಕಾದ್ದನ್ನು ತೋರಿಸುವವರಾರು? ಇಲ್ಲಿಯ ವಿಚಾರಗಳನ್ನು ಹೇಳುವರಾರು? ನನ್ನೊಡನೆ ಮಾತನಾಡಿ ಅರ್ಥಮಾಡಿಕೊಳ್ಳುವವರಿದ್ದದ್ದು ಒಬ್ಬರೆ - ಋತ್ವಿಕರು. ಅದಕ್ಕೂ ಮುಂಚೆ ಮತ್ತೊಂದು ವಿಚಾರ ವಿನಿಮಯ ಮಾಡಿಕೊಳ್ಳಬೇಕಾಗಿತ್ತು. ಅವರನ್ನು ಹೋಗಿ ಕೇಳಿದೆ:

"ನನಗೆ ಈ ಊರಿನಲ್ಲಿ ಯಾರೂ ಗೊತ್ತಿಲ್ಲ. ಇಷ್ಟು ದಿನಗಳ ಕಾಲ ನಿಮ್ಮ ಮನೆಯಲ್ಲಿಟ್ಟುಕೊಂಡು ನಾನು ಅಸ್ವಸ್ಥನಾಗಿದ್ದಾಗ ನನ್ನ ಸುಶ್ರೂಷೆ ಮಾಡಿದ್ದೀರಿ. ನಿಮ್ಮ ಆತ್ಮೀಯತೆಗೆ ಬೆಲೆ ಕಟ್ಟಬೇಕೆಂದಲ್ಲ - ಹಾಗೆ ಮಾಡಲಾರೆನು, ಆದರೆ ನಿಮ್ಮ ಆತಿಥ್ಯಕ್ಕೆ ಪ್ರತಿಯಾಗಿ ಕೊಡಲು ನನ್ನ ಬಳಿ ಏನೂ ಇಲ್ಲ. ಮೇಲಾಗಿ ನನ್ನ ಮುಂದಿನ ಜೀವನಕ್ಕೆ ಹೇಗಾದರೂ ಒಂದು ದಾರಿ ಮಾಡಿ ಕೊಡಿ" ಎಂದು ಕೇಳಿದೆ.

ಅವರು ನನ್ನನ್ನು ಮೇಲೆ-ಕೆಳಗೆ ನೋಡಿ "ಯಾವುದಕ್ಕೆ ಬೆಲೆ? ನನಗರ್ಥವಾಗಲಿಲ್ಲ. ನೀನು ನನ್ನ ಮನೆಯಲ್ಲಿದ್ದದ್ದಕ್ಕೆ ಯಾವ ಬೆಲೆಯೂ ಕೊಡುವ ಅಗತ್ಯವಿಲ್ಲ. ಆದರೆ ಹೀಗೆ ಹೆಚ್ಚು ದಿನಗಳ ಕಾಲ ಬದುಕುವ ಹಾಗೂ ಇಲ್ಲ. ಏನಾದರೂ ಕಾರ್ಯ ಮಾಡುವುದು ಅನಿವಾರ್ಯ. ನೀನೇನು ಮಾಡಬಲ್ಲೆ?" ಎಂದರು.

"ನಾನು ಆರ್ಕಿಯಾಲಜಿಸ್ಟ್" ಎಂದು ಹೇಳಲು ಹೊರಟಿದ್ದೆ. ಅಷ್ಟರಲ್ಲಿ ನಾಲಿಗೆ ಹಿಡಿದೆ. ಈ ಕಾಲದಲ್ಲಿ ನನ್ನ ವೃತ್ತಿಬಾಂಧವರಿಗೆ ಏನು ಕಾರ್ಯವಿದ್ದೀತು? "ಏನು ಕಾರ್ಯ ಬೇಕಾದರೂ ಮಾಡಲು ಸಿದ್ಧ."

ಅವರು ಸ್ವಲ್ಪ ಹೊತ್ತು ಯೋಚಿಸಿ "ಸಧ್ಯಕ್ಕೆ ಮನೆಯಲ್ಲಿ ಸಹಾಯ ಮಾಡು - ನಿನ್ನ ವಸ್ತ್ರಾಹಾರಗಳಿಗೆ ಅಡ್ಡಿಯಿಲ್ಲ. ನಿನ್ನ ನಿಷ್ಠೆ, ಯೋಗ್ಯತೆ ನೋಡಿ, ಸಾಧ್ಯವಾದರೆ ಏನಾದರೂ ವ್ಯಾಪಾರ ಒದಗಿಸುತ್ತೇನೆ" ಎಂದರು.

ನಾನು ಕೊನೆಗೆ ಋತ್ವಿಕರ ಮನೆಯಾಳಾದೆ. ಕೆಲಸ ಕಷ್ಟಕರವಾದರೂ ಅಸಾಧ್ಯವಾಗಿರಲಿಲ್ಲ. ಮನೆಯ ಕೆಲಸ, ಜೊತೆಗೆ ನಾನು ಮೊದಲೇ ಹೇಳಿರುವ ವಸ್ತ್ರ ತಯಾರಿಕೆಯ ಕೆಲಸಕ್ಕೂ ಕೈಹಾಕಿದೆ. ಸ್ವಲ್ಪವೇ ದಿನಗಳಲ್ಲಿ ಋತ್ವಿಕರ ಪ್ರೀತಿಯೊಂದಿಗೆ ನಂಬಿಕೆಗೂ ಪಾತ್ರನಾದೆ. ಋತ್ವಿಕರಿಗಂತು ಮಕ್ಕಳಿರಲಿಲ್ಲ - ಇದ್ದರೆ ಇವರೊಂದಿಗೆ ಇರಲಿಲ್ಲ - ಇವರನ್ನು ನೋಡಲು ಬಂದಿರಲಿಲ್ಲ. ನನ್ನನ್ನು ಮಗನಂತೇ ನೋಡ ತೊಡಗಿದರು.

ಕೊಂಚ ದಿನಗಳನಂತರ, "ನಾನು ಮೊದಲೇ ಹೇಳಿದಂತೆ ದಕ್ಷಿಣ ದೇಶದಿಂದ ಬಂದಿರುವವನು. ನಾನು ಬಂದ ಊರು ನಿಮ್ಮ ಊರಿನ ಹಾಗಿಲ್ಲ. ನಿಮ್ಮ ಊರು ಬಹು ಸೊಗಸಾಗಿದೆ. ಒಮ್ಮೆ ನನಗೆ ಈ ಊರಿನ ದರ್ಶನ ಮಾಡಿಸುವಿರಾ?" ಎಂದು ಕೇಳಿಕೊಂಡೆ.

ಋತ್ವೀಕರು "ಆಗಲಿ" ಎಂದು, ಊರು ತೋರಿಸಲು ನನ್ನನ್ನು ಕರೆದೊಯ್ದರು.

ಅದೆಂಥಹ ಯಾತ್ರೆ, ಅದೆಂಥಹ ಊರು! ಅಮೇರಿಕ ಅಥವ ಯೂರೋಪಿನ ಯಾವ ಆಧುನಿಕ ನಗರಕ್ಕೂ ಕಡಿಮೆಯಿಲ್ಲದಂಥಹ ಊರು! ದೂರದಿಂದ ಬಂದರೆ ಮೊದಲಿಗೆ ಕಾಣಿಸುತ್ತಿದ್ದದ್ದು ಊರಿನ ಕೋಟೆಯ ಎತ್ತರವಾದ ಧೃಡ ಗೋಡೆಗಳು. ಈ ಧೃಡಗೋಡೆಗಳ ಮಧ್ಯೆ ಕೂಲಂಕುಶವಾಗಿ ವಿನ್ಯಾಸ ಮಾಡಿದ ಒಂದು ಸುಂದರ ನಗರ. ಈ ಕೋಟೆಯು ಎತ್ತರಿಸಿದ ಅಟ್ಟಣಿಗೆಯ ಮೇಲೆ ನಿಂತಿತ್ತು. ಈ ಕೋಟೆಯೊಳಗೆ ಅಚ್ಚುಕಟ್ಟಾಗಿ ಕಡಿದ ಕಲ್ಲುಗಳಿಂದ ಕಟ್ಟಿದ ಹಲವಾರು ಕಟ್ಟಡಗಳು. ಜೊತೆಗೆ ಜಾಗರೂಕವಾಗಿ ಸಂಯೋಜಿಸಿದ ಚರಂಡಿ ವ್ಯವಸ್ಥೆ ಹಾಗು ಒಂದು ಅಪಾರ ಬಾವಿ. ಈ ಕೋಟೆಯೊಳಗಿನ ಕಟ್ಟಡಗಳಿಂದ ಈ ಊರಿನ ಆಡಳಿತ ನಡೆಯುತ್ತಿತ್ತು. ಆಡಳಿತಕಾರರು, ಹಾಗು ಇತರ ಮಾನ್ಯರು ಈ ಕೋಟೆಯೊಳಗೆ ವಾಸ ಮಾಡುತ್ತಿದ್ದರು. ಜೊತೆಗೆ ಧಾರ್ಮಿಕ ಕಾರ್ಯಗಳೂ ಈ ಕೋಟೆಯಲ್ಲಿನ ಕಟ್ಟಡಗಳಲ್ಲೇ ನಡೆಯುತ್ತಿದ್ದವು. ಈ ಕೋಟೆಯ ಮೂರು ದಿಕ್ಕುಗಳಲ್ಲಿ - ಉತ್ತರ, ಪೂರ್ವ ಹಾಗು ಪಶ್ಚಿಮ - ಹೆಬ್ಬಾಗಿಲುಗಳಿದ್ದವು. ಹೆಬ್ಬಾಗಿಲ ಎರಡೂ ಬದಿಯಲ್ಲಿ ಕಲ್ಲಿನ ಕಂಬಗಳು, ಕಂಬಗಳ ಮೇಲೊ ನಿಂತ ಒಂದು ಕೈಸಾಲೆ. ಬಾಗಿಲಿಗೊಂದು ತೋರಣ, ಬಾಗಿಲ ಮೇಲೊಂದು ಫಲಕ, ಫಲಕದ ಮೇಲೆ ಏನೋ ಬರೆದ ಅಕ್ಷರಗಳು. ಅದೇನೆಂದು ಕೇಳಿದಾಗ ಋತ್ವಿಕರು "ಅದು ಊರಿನ ಹೆಸರು" ಎಂದರು. ಆ ಅಕ್ಷರಗಳನ್ನು ಹೆಚ್ಚಾಗಿ ಗಮನಿಸುವ ಅವಕಾಶ ಸಿಗಲಿಲ್ಲ.

ಕೋಟೆಯ ಉತ್ತರ ಭಾಗದಲ್ಲಿ ಊರಿನ 'ಮಧ್ಯ-ಭಾಗ'ವಿತ್ತು. ಇದರ ಸುತ್ತಲೂ ಕೋಟೆಗಿಂತ ಸ್ವಲ್ಪ ಕಿರಿದಾದ ಕಲ್ಲಿನ ಗೋಡೆಗಳಿದ್ದವು. ಇಲ್ಲಿಯ ರಸ್ತೆಗಳನ್ನು ಆಧುನಿಕ ಪಟ್ಟಣಗಳಂತೆ 'ಗ್ರಿಡ್' ಆಕಾರ ನಿರ್ಮಿಸಲಾಗಿತ್ತು. ಇಲ್ಲಿ ಒಂದು ಹಾಗು ಎರಡು ಅಂತಸ್ತಿನ ಮನೆಗಳನ್ನು ಕಟ್ಟಲಾಗಿತ್ತು. ಊರಿನ ಶ್ರೀಮಂತರು ವಾಸವಾಗಿದ್ದ ಭಾಗ ಇದು. ಋತ್ವಿಕರ ಮನೆಯೂ ಇದೇ ಭಾಗದಲ್ಲಿತ್ತು. 'ಮಧ್ಯ-ಭಾಗ'ದ ನಡುವೆ ನಾಲ್ಕೂ ದಿಕ್ಕಿನಲ್ಲಿ + ಆಕಾರದಲ್ಲಿ ಬಹು ಅಗಲವಾದ 'ಮುಖ್ಯ ರಸ್ತೆ'ಗಳಿದ್ದವು. ರಸ್ತೆಗಳ ಬದಿಗಳಲ್ಲಿ ನೆರಳಿಗಾಗಿ ಮರಗಳನ್ನು ನೆಡಲಾಗಿತ್ತು.

ಮಧ್ಯ ಭಾಗದ ಆಚೆ ಇದ್ದ ಊರಿನ ಮೂರನೆಯ ಬಾಗ 'ತಗ್ಗು' ಅತವ 'ಕೀಳು-ಬಾಗ'. ಇಲ್ಲಿಯೂ 'ಗ್ರಿಡ್' ಆಕಾರದ ರಸ್ತೆಗಳಿದ್ದರೂ, ಈ ಭಾಗಕ್ಕೆ ಸುರಕ್ಷಾ ಗೋಡೆಗಳನ್ನು ಕಟ್ಟಿರಲಿಲ್ಲ. ವ್ಯವಸಾಯ ಮಾಡುವವರು, ಮಣಿ-ಹರಳುಗಳನ್ನು ಮಾಡುವವರು, ಶಿಲ್ಪಿಗಳು, ನೇಯ್ಗೆದಾರರು, ಕಾರ್ಮಿಕರು, ಇತರೆ ಸಾರವಜನಿಕರು ವಾಸವಾಗಿದ್ದ ಭಾಗ ಇದು. ಇದರ ಆಚೆ ವ್ಯವಸಾಯ ನಡೆಸುವ ಹೊಲ-ಗದ್ದೆಗಳಿದ್ದವು. ಹೊಲಗದ್ದೆಗಳಾಚೆಯೂ ಕೆಲವು ಮನೆ-ಶಿಬಿರಗಳಿದ್ದವು. ಹೊರದೇಶಗಳಿಂದ ಬಂದ ವ್ಯಾಪಾರಿಗಳು ಇಲ್ಲಿ ತಳವೂರಿ, ಊರಿನವರ ಜೊತೆ ವ್ಯಾಪಾರ-ವ್ಯವಹಾರಗಳನ್ನು ನಡೆಸುತ್ತಿದ್ದರು.

ಊರಿನ ಮೂರು ಭಾಗಗಳ ಮಧ್ಯೆ ಸಾಕಷ್ಟು ಬಯಲು ಪ್ರದೇಶಗಳನ್ನು ಬಿಡಲಾಗಿತ್ತು - ಬೇಕಿದ್ದರೆ ಆಯಾ ಭಾಗಗಳನ್ನು ವಿಸ್ತರಿಸಲೆಂದು. ಕೋಟೆ ಹಾಗು ಮಧ್ಯ-ಭಾಗಗಳ ನಡುವೆ ಒಂದು ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. ಇಲ್ಲಿ ಎಲ್ಲಾ ರೀತಿಯ ಸಾರ್ವಜನಿಕ ಸಮಾರಂಭಗಳು ನಡೆಯುತ್ತಿದ್ದವು - ಆಟಗಳು, ಹಬ್ಬ ಹಾಗು ಇತರ ಧಾರ್ಮಿಕ ಸಮಾರಂಭಗಳು, ಜಾತ್ರೆಗಳು, ಇತ್ಯಾದಿ.

ಊರು ಸರಸ್ವತೀ ನದಿಯ ತೀರದಲ್ಲಿತ್ತು. ನಮ್ಮ ಕಾಲದಲ್ಲಿ ಈ ನದಿಗೆ 'ಘಗ್ಗರ್' ಎಂದು ಹೆಸರು. ಊರು ನದಿಯ ದಡದಿಂದ ಸ್ವಲ್ಪ ದೂರದಲ್ಲಿದ್ದ ಕಾರಣ ನದಿಯ ನೀರನ್ನು ಊರಿಗೆ ತರಲು ಜಾಗ್ರತೆ ವಹಿಸಲಾಗಿತ್ತು. ನೀರನ್ನು ಊರಿನ ಬಳಿ ಇರಿಸಲು ಎರಡು ಅಪಾರ ಕೊಂಡಗಳನ್ನು, ಹಾಗು ಸ್ನಾನ ಇತರ ಕಾರ್ಯಗಳಿಗೆಂದು ಒಂದು ಪುಟ್ಟ ಕೊಂಡವನ್ನೂ ಸೂಕ್ಷ್ಮವಾಗಿ ಕಡಿದ ಕಲ್ಲುಗಳನ್ನು ಜೋಡಿಸಿ ಕಟ್ಟಲಾಗಿತ್ತು. ನದಿಯಿಂದ ಊರಿನವರೆಗು ಕೊರೆದಿದ್ದ ದೈತ್ಯ ಕಾಲುವೆಗಳು ಈ ಕೊಂಡಗಳನ್ನು ತುಂಬಿಸುತ್ತಿದ್ದವು. ಕೊಂಡಗಳು ತುಂಬಿದ ನಂತರ ಹೆಚ್ಚಿನ ನೀರು ಹೊರ ಹೋಗಿ ಪುನಃ ನದಿಯನ್ನು ಸೇರಲು ಮತ್ತೊಂದು ಬದಿಯಿಂದ ಕಾಲುವಗಳಿದ್ದವು. ಇದಲ್ಲದೆ ಊರಿನಲ್ಲಿ ಹಲವಾರು ಮನೆಗಳಲ್ಲಿ ಸಣ್ಣ ನೀರಿನ ತೊಟ್ಟಿಗಳು ಅಥವ ಬಾವಿಗಳನ್ನು ತೋಡಲಾಗಿತ್ತು. ಹೀಗಾಗಿ ಯಾವ ಮನೆಯಲ್ಲೂ ನೀರಿನ ತೊಂದರೆಯಿರಲಿಲ್ಲ.

ಊರಿನ ಪಶ್ಚಿಮ ಭಾಗದಲ್ಲಿ ಹತರನ್ನು ಭೂಗತ ಮಾಡಲು ಸ್ಮಶಾನವೊಂದಿತ್ತು. ಈ ಜನಾಂಗವು ನಮ್ಮ ಕಾಲದಂತೆಯೇ ಹತರನ್ನು ಎರಡು ರೀತಿಗಳಲ್ಲಿ ವಿಸರ್ಜಿಸುತ್ತಿದ್ದರು - ಒಂದು ಶವವನ್ನು ಹೂಳುವುದು (ಜೊತೆಗೆ ವಸ್ತ್ರಾಭರಣಗಳನ್ನೂ ಹುಗಿಯುತ್ತಿದ್ದರು), ಮತ್ತೊಂದು ದಹನಕ್ರಿಯೆ. ಕೋಟೆ ಹಾಗು ಮಧ್ಯಭಾಗಗಳಲ್ಲಿ ವಾಸವಾಗಿದ್ದ ಜನರು ಹೆಚ್ಚಾಗಿ ದಹಿಸುವರು, ಕೀಳು-ಭಾಗದಲ್ಲಿದ್ದ ಜನರು ಹೆಚ್ಚಾಗಿ ಹುಗಿಯುವರು ಎಂದು ತಿಳಿದು ಬಂದಿತ್ತು.

ಕೋಟೆ, ರಕ್ಷಾಗೋಡೆಗಳು ಕಲ್ಲಿನವಾದರೆ ಮನೆಗಳನ್ನು ಇಟ್ಟಿಗೆಗಳಿಂದ ಕಟ್ಟಲಾಗಿತ್ತು. ಜೇಡಿ ಮಣ್ಣಿನ ಚೌಕಾಕಾರದ ಅಚ್ಚುಗಳನ್ನು ಮಾಡಿ, ಅವುಗಳನ್ನು ದೈತ್ಯಾಕಾರದ ಒಲೆಗಳಲ್ಲಿ ಸುಟ್ಟು ಇಟ್ಟಿಗೆಗಳನ್ನು ಮಾಡುವುದು ಈ ಜನರು ಅರಿತಿದ್ದರು. ಇಟ್ಟಿಗೆಗಳನ್ನು ೪:೨:೧ ಉದ್ದ:ಅಗಲ:ದಪ್ಪ ಗಾತ್ರದಲ್ಲಿ ಮಾಡುತ್ತಿದ್ದರು. ಇವುಗಳನ್ನು ಒಗ್ಗೂಡಿಸಿ ಮಣ್ಣಿನಿಂದ ಗೂಡನ್ನು ಕಟ್ಟಿ, ಹುಲ್ಲು, ಮರ ಇತ್ಯಾದಿ ಉರಿಯುವ ಸಾಮಗ್ರಿಗಳನ್ನು ಬಳಸಿ ಗೂಡಿನ ತಳಕ್ಕೆ ಬೆಂಕಿ ಹಚ್ಚುತ್ತಿದ್ದರು. ಬೆಂಕಿ ಉರಿದು ಆರಿದ ನಂತರ ಗೂಡನ್ನು ಮುರಿದು ಇಟ್ಟಿಗೆ ಅಚ್ಚುಗಳನ್ನು ಹೊರತೆಗೆಯುತ್ತಿದ್ದರು. ಇವು ನಮ್ಮ ಕಾಲದ ಇಟ್ಟಿಗೆಗಳಿಗಿಂತ ಏನೂ ಕಡಿಮೆಯಿರಲಿಲ್ಲ.

ಮನೆಗಳು ಒಂದು ಅಥವ ಎರಡು ಅಂತಸ್ತಿನವಾಗಿದ್ದವು. ಮನೆಯ ಸುತ್ತ ಅಂಗಳ, ಹಾಗು ರಸ್ತೆಯಿಂದ ದೂರದಲ್ಲಿ ಒಳಗೆ ಬರುವ ಬಾಗಿಲು. ಮುಂಬಾಗಿಲು ಪೂರ್ವ ಅಥವ ಉತ್ತರಕ್ಕೆ ತೆರೆಯುತ್ತಿದ್ದವು. ಮನೆಯಲ್ಲಿ ಹಲವಾರು ಕೋಣೆಗಳು, ಪ್ರತ್ಯೇಕವಾದ ಅಡಿಗೆಮನೆ, ಹಾಗು ಸ್ನಾನ-ಶೌಚಗಳ ಕೋಣೆಗಳು. ಅಡಿಗೆ ಮನೆಯಲ್ಲಿ ಒಲೆಗುಂಡಕ್ಕೊಂದು ಮೂಲೆ, ಹೊಗೆ ಹೋಗಲು ಕಿಂಡಿಗಳು. ಸ್ನಾನಕ್ಕೆ ಬಚ್ಚಲು, ಸ್ನಾನದ ಕೊಳೆ ನೀರು ಹರಿದು ಹೋಗಲು ಮಣ್ಣಿನ ಕೊಳವೆಗಳಿರುತ್ತಿದ್ದವು. ಎಲ್ಲಕ್ಕಿಂತ ಅತೀ ಕುತೂಹಲಕಾರಿಯಾಗಿದ್ದದ್ದು ಶೌಚಾಲಯ. ನಮ್ಮ ಕಾಲದ ಯಾವ ಪಾಶ್ಚಾತ್ಯ ಟಾಯ್ಲೆಟ್ಟಿಗೂ ಕಡಿಮೆಯನಿಸದ ಶೌಚಾಲಯ!

ಶೌಚ ಕೋಣೆಯ ಗೋಡೆಗೆ ಸೇರಿದಂತೆ ನೆಟ್ಟಗೆ ನಿಂತ ಎರಡು ಮೋಟು ಗೋಡೆಗಳು. ಆ ಮೋಟು ಗೋಡೆಗಳ ಮೇಲೆ ಇರಿಸಿದ ಮರದ ಒಂದು ಮಣೆಯ ಮೇಲೆ ಕೂಳಿತುಕೊಳ್ಳತಕ್ಕದ್ದು. ಮಣೆಯಲ್ಲಿ ಒಂದು ದೊಡ್ಡ ಕಿಂಡಿ. ಕೆಳಗೆ ನೀರನ್ನು ಸಾಗಿಸಲು ಮಣ್ಣಿನ ಕೊಳವೆಗಳು. ಕೊಳವೆಗಳು ಸ್ನಾನ ಹಾಗು ಶೌಚಗಳ ನೀರನ್ನು ರಸ್ತೆಯ ಬದಿಯಲ್ಲಿ ಇದ್ದ ಚರಂಡಿಗೆ ಸಾಗಿಸುತ್ತಿದ್ದವು. ಈ ಚರಂಡಿಗಳೋ ನೆಲದ ಕೆಳಗೆ ಸುಮಾರು ೧ ಮೀಟರ್ ಅಗಲ, ೨ ಮೀಟರ್ ಆಳವಾಗಿದ್ದು ಸುಟ್ಟ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದವು. ಈ ನೀರನ್ನು ನದಿಗೆ ಹರಿಯಲು ಬಿಡುತ್ತಿರಲಿಲ್ಲ. ಅಲ್ಲಲ್ಲೇ ಅಪಾರ 'ಸೆಪ್ಟಿಕ್' ಗುಂಡಿಗಳಿದ್ದು ಈ ಕೊಳಚೆ ನೀರು ಅವುಗಳೊಳಗೆ ಇಂಗಿಕೊಳ್ಳುತ್ತಿದ್ದವು. ಆ 'ಸೆಪ್ಟಿಕ್' ಗುಂಡಿಗಳಿಗೆ ಮರ ಅಥವ ಕಲ್ಲಿನಿಂದ ಮಾಡಿದ ಮುಚ್ಚಳಗಳು.

ಇವುಗಳಲ್ಲದೆ ಮಳೆ ನೀರನ್ನು ಹಿಡಿದು ಹೋಗಲಾಡಿಸಲು ಬೇರೆ ಚರಂಡಿಗಳಿದ್ದವು. ಇವೂ ಕೂಡ ಅಪಾರ ಗಾತ್ರವಿದ್ದು, ಕಲ್ಲಿನ ಅಚ್ಚುಗಳಿಂದ ಕಟ್ಟಲ್ಪಟ್ಟಿದ್ದವು. ಮಳೆಗಾಲದಲ್ಲಿ ಮಳೆಯ ನೀರನ್ನು ಎಲ್ಲೆಡೆಯಿಂದ ಹಿಡಿದು ಈ ಚರಂಡಿಗಳ ಮೂಲಕ ನದಿಗೆ ತಲುಪಿಸಲಾಗುತ್ತಿತ್ತು. ಈ ರೀತಿ ಕೊಳಚೆ ನೀರು ಹಾಗು ಮಳೆ ನೀರುಗಳನ್ನು ಬೇರ್ಪಡಿಸಿ ಶುಚಿ ಹಾಗು ಸ್ವಾಸ್ಥ್ಯ ಪರಿಪಾಲನೆಯ ಉನ್ನತ ಮಟ್ಟವನ್ನು ಕಾಪಾಡಿಕೊಂಡಿದ್ದರು.

ಈ ಊರಿನ ಮತ್ತೊಂದು ವಿಶಿಷ್ಟತೆ ಇಲ್ಲಿಯ ವಿಶಾಲ ಉಗ್ರಾಣ. ಇಟ್ಟಿಗೆಯ ಅಟ್ಟಣಿಗೆಯ ಮೇಲೆ ಕಟ್ಟಲ್ಪಟ್ಟ ಈ ಉಗ್ರಾಣವು ಸುಮಾರು ೫೦ ಮೀಟರ್ ಅಗಲ ೨೫ ಮೀಟರ್ ಉದ್ದವಾಗಿದ್ದು ಇಟ್ಟಿಗೆಗಳ ಅಡಿಪಾಯ ಹೊಂದಿತ್ತು. ಉಗ್ರಾಣದ ಒಳಗೆ ೨೭ ಸಣ್ಣ ಖಾನೆಗಳು ಹಾಗೂ ಈ ಖಾನೆಗಳಿಗೆ ಹೋಗಲು ಸಣ್ಣ ಪಡಸಾಲೆಗಳನು ಮಾಡಲಾಗಿತ್ತು. ಗೋಡೆಗಳಲ್ಲಿ ಕಿಂಡಿಗಳನ್ನು ಮಾಡಿ ಮರದ ತೊಲೆಗಳನ್ನು ಇರಿಸಿ, ಆ ತೊಲೆಗಳ ಮೇಲೆ ಮರದ ಹಲಿಗೆಗಳಿಂದ ಮಾಡಿದ ಛಾವಣಿಯನ್ನು ಇರಿಸಲಾಗಿತ್ತು. ಅಟ್ಟದ ಮೇಲೆ ಹತ್ತಲು ಮೆಟ್ಟಲು, ಒಳಗೇ ಒಂದು ಬಾವಿ, ಹಾಗು ಸ್ನಾನದ ಘಟ್ಟಗಳನ್ನು ಕಟ್ಟಲಾಗಿತ್ತು. ಈ ಉಗ್ರಾಣವು ನೀರಿನ ಕೊಂಡಗಳ ಪಕ್ಕದಲ್ಲಿಯೇ ಇತ್ತು. ಕೊಂಡದ ಪಕ್ಕದಲ್ಲಿ ಸರಕನ್ನು ದೋಣಿಗಳಿಗೆ ಹತ್ತಿಸಲು ಅಥವ ಇಳಿಸಲು ಒಂದು ಕಟ್ಟೆಯನ್ನು ಕಟ್ಟಲಾಗಿತ್ತು. ನದಿಯಿಂದ ಕಾಲುವೆ ಮಾರ್ಗವಾಗಿ ಕೊಂಡದೊಳಕ್ಕೆ ಬಂದ ದೋಣಿಗಳಿಂದ ಸರಕನ್ನು ಹತ್ತಿಸಿದ ಯಾ ಇಳಿಸಿಕೊಂಡ ನಂತರ ದೋಣಿಗಳು ಪುನಃ ಕಾಲುವೆ ಮಾರ್ಗವಾಗಿ ನದಿಗೆ ಹಿಂತಿರುಗುತ್ತಿದ್ದವು. ಈ ಉಗ್ರಾಣದಲ್ಲಿ ವ್ಯವಸಾಯದ ಸರಕಷ್ಟೇ ಅಲ್ಲ, ಬಣ್ಣ ಹಾಕಿದ ಕಾರ್ಪಸ ಬಟ್ಟೆ, ಹಾಗು ವ್ಯಾಪಾರಕ್ಕೆ ಬಳಸುವ ಇತರ ಸರಕನ್ನೂ ಇರಿಸಲಾಗುತ್ತಿತ್ತು.

ಇಷ್ಟೆಲ್ಲ ತಾಂತ್ರಿಕತೆ ಕಂಡು ನನ್ನ ತಲೆ ತಿರುಗುತ್ತಿತ್ತು. ಮರೆಯುವ ಮುನ್ನ ಎಲ್ಲವನ್ನೂ ನನ್ನ 'ಪುಸ್ತಕ'ದಲ್ಲಿ ದಾಖಲೆ ಮಾಡುವ ಹಂಬಲ. ಆದರೆ ಯಾವಾಗ? ಹೇಗೆ? ಎಲ್ಲರೂ ನೋಡುತ್ತಿರುವಂತೆ ದಾಖಲೆ ಮಾಡುವಹಾಗಿಲ್ಲ. ಹುಣ್ಣಿಮೆ ಕಳೆದು ಎರಡು-ಮೂರು ದಿನಗಳಾಗಿದ್ದವು. ಈ ಕಾಲದಲ್ಲೇ ಹೀಗೋ ಅಥವ ನನ್ನ ಕಣ್ಣಿಗೆ ಚಂದ್ರ ಹೆಚ್ಚು ಪ್ರಕಾಶಮಯಿಯಾಗಿ ಕಾಣಿಸುತ್ತಿದ್ದನೋ ಅರಿಯೆ. ಅಂತೂ ಪೆನ್ನು, ಪಂಚೆ ಹಿಡಿದು ಮನೆಯ ಹೊರ ಹೋದೆ. ಒಂದು ಸಣ್ಣ ಬಯಲಿನಲ್ಲಿ ಕುಳಿತು ಎಲ್ಲವನ್ನೂ ಬರೆದುಕೊಂಡೆ. ನಂತರ ಮನೆಗೆ ಹಿಂತಿರುಗಿ ಪಂಚೆಯನ್ನು ಯಾರಿಗೂ ಕಾಣಿಸದ ಹಾಗೆ ಅಟ್ಟಣಿಗೆಯ ಮೇಲಿಟ್ಟು ಮಲಗಿದೆ.

*****

ನನ್ನ ಮುಂದಿನ ದೃಷ್ಟಿ ವ್ಯವಸಾಯ ಹಾಗು ವ್ಯಾಪಾರಗಳತ್ತ ಹರಿಸಿದೆ. ಹಿಮಾಲಯ ಪರ್ವತಗಳಿಂದ ಮಂಜು ಕರಗಿ ಬರುವ ನೀರಿನ ಜೊತೆಗೆ ಮಳೆಗಾಲದ ಮಳೆ ಸೇರಿ ಈ ಸ್ಥಳವನ್ನು ಸಮೃದ್ಧ ನೆಲವಾಗಿಸಿತ್ತು. ಈ ಸಮೃದ್ಧ ನೆಲವು ಈ ಜನಾಂಗದಂತಹ ವಿಶಾಲ ಜನತೆಗೆ ಬೇಕಾಗುವ ಕೃಷಿ-ವ್ಯವಸಾಯ, ತೋಟಗಾರಿಕೆ, ಹುಲ್ಲುಗಾವಲುಗಳು, ಜಲ ಹಾಗು ವನ್ಯ ಪ್ರಾಣಿಗಳಿಗೆ ಅವಶ್ಯಕವಾದ ಸಂಪನ್ಮೂಲಗಳನ್ನು ದೊರಕಿಸುತ್ತಿತ್ತು. ಈ ಜನರು ನೀರಾವರಿ ಯೋಜನೆ ಹಾಗು ನೆರೆಯಿಂದ ಬರುವ ಸಮೃದ್ಧ ಕೆಸರುಗಳ ಮೇಲೆ ಆಧಾರಿತ ವ್ಯವಸಾಯದಿಂದ ಅಭ್ಯುದಯ ಹೊಂದಿದ್ದರು. ಅಕ್ಕಿ, ಗೋಧಿ, ಹೆಸರು ಬೇಳೆ ಹಾಗು ಜೋಳ ಇವರ ಮುಖ್ಯ ಬೆಳೆಗಳಾಗಿದ್ದವು. ಜೊತೆಗೆ ಎಣ್ಣೆ ಕಾಳುಗಳಾದ ಸಾಸುವೆ, ಎಳ್ಳು ಹಾಗು ಇತರ ಬೆಳೆಗಳನ್ನೂ, ಬಟಾಣಿ, ಬದನೇಕಾಯಿ ತರಕಾರಿಗಳನ್ನೂ ಬೆಳೆಯುತ್ತಿದ್ದರು. ತಿನಿಸುಗಳನ್ನು ಬಿಟ್ಟರೆ ಮತ್ತೊಂದು ಬಹುಮುಖ್ಯ ಬೆಳೆ ಹತ್ತಿ.

ವ್ಯವಸಾಯ ಕಾಯಕವು ಸಾಕಷ್ಟು ಫಲದಾಯಕವಾಗಿತ್ತು. ಹಾಗಾಗಿ ಕೃಷಿಯಲ್ಲಿ ನಿರತರಾದವರು ವ್ಯಾಪಾರಿಗಳು, ಕುಶಲಕಾರ್ಮಿಕರು, ಮತ್ತಿತರ ಕಾಯಕಗಳಲ್ಲಿ ವ್ಯಸ್ಥರಾದವರಿಗೂ ಸಾಕಾಗುವಷ್ಟು ಧಾನ್ಯಗಳನ್ನು ಬೆಳೆಯುವುದಲ್ಲದೆ ಬರ-ಕ್ಷಾಮ ಕಾಲಗಳಿಗೆ ಧಾನ್ಯಗಳನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಇಷ್ಟೆಲ್ಲ ಸಾಧ್ಯವಾದದ್ದು ತಾಂತ್ರಿಕ ಉನ್ನತಿಯಿಂದ. ನೀರಾವರಿ ಯೋಜನೆಯ ಜೊತೆಗೆ ಇವರು ನೇಗಿಲನ್ನೂ ಅರಿತಿದ್ದರು. ಬೆಳೆಗಳನ್ನು ಪ್ರತಿ ವರ್ಷವೂ ಬದಲಾಯಿಸುವುದನ್ನೂ ಅರಿತಿದ್ದರು. ಜೊತೆಗೆ ಎತ್ತಿನ ಗಾಡಿಗಳನ್ನು ಉಪಯೋಗಿಸುತಿದ್ದರು.

ರೈತರು ಬೆಳೆದ ಪ್ರತಿಯೊಂದು ಫಸಲಿನಿಂದಲೂ ಒಂದು ಭಾಗವನ್ನು ಸಾರ್ವಕನಿಕ ಉಗ್ರಾಣಗಳಿಗೆ ಪಾವತಿ ಮಾಡಬೇಕಾಗಿತ್ತು. ಎತ್ತಿನ ಗಾಡಿಗಳಲ್ಲಿ ಪಾವತಿ ಮಾಡಬೇಕಾದ ಧಾನ್ಯಗಳನ್ನು ತುಂಬಿಕೊಂಡು ಬಂದು ಅದನ್ನು ಉಗ್ರಾಣದಲ್ಲಿ ಇಳಿಸಲಾಗುತ್ತಿತ್ತು. ಇದು ನಮ್ಮ ಕಾಲದ ಬ್ಯಾಂಕಿಗೆ ಸಮಾನವಾದ ಒಂದು ಸಂಸ್ಥೆ. ನಾನು ಸೇರಿದ್ದ ಊರು ಒಂದು ಕೇಂದ್ರವಾಗಿತ್ತು. ಸುತ್ತ ಮುತ್ತಲಿನ ಹಳ್ಳಿ, ಸಣ್ಣ ಊರುಗಳಿಂದ ನಾನಿದ್ದ ಊರಿನ ಉಗ್ರಾಣಕ್ಕೆ ದೋಣಿಗಳಲ್ಲಿ ಧಾನ್ಯಗಳ ಠೇವಣಿ ಬರುತ್ತಿತ್ತು. ಅದಕ್ಕೆ ಬದಲಾಗಿ ನಮ್ಮ ಊರಿನಿಂದ ಸುತ್ತ ಮುತ್ತಲಿನ ಹಳ್ಳಿಗಳಿಗೆ ಸೈನಿಕರು, ಇತರ ಆರಕ್ಷಕರನ್ನು, ಲೋಹ ಹಾಗು ಮಣ್ಣಿನ ಪದಾರ್ಥಗಳನ್ನು ಕಳುಹಿಸಲಾಗುತ್ತಿತ್ತು.

'ಪಟ್ಟಣಗಳು ಅಸ್ಥಿತ್ವಕ್ಕೆ ಬರಲು ವ್ಯವಸಾಯವೇ ಕಾರಣ, ವ್ಯವಸಾಯ ಸುಗಮವಾಗಾಗಬೇಕಾದರೆ ದಬ್ಬಾಳಿಕೆಯಿಂದ ಜನರನ್ನು ಆಳುಗಳಾಗಿಸಿ ನೀರಾವರಿ ಯೋಜನೆ ಕಟ್ಟಿದ ನಂತರ ಪಟ್ಟಣಗಳ ಅಸ್ಥಿತ್ವ ಸಾಧ್ಯ' ಎಂದು ಕೆಲವು ಸಿದ್ಧಾಂತಗಳು ಹೇಳುತ್ತವೆ. ಆದರೆ ಇದು ನಿಜವಲ್ಲ ಎಂದು ಈ ಜನಾಂಗ ತೊರ್ಪಡಿಸುತ್ತಿದ್ದರು. ಇಲ್ಲಿ ಯಾವ ದಬ್ಬಾಳಿಕೆಯ ಸುಳಿವೂ ಇರಲಿಲ್ಲ. ದೈತ್ಯ ಅಣೇಕಟ್ಟುಗಳನ್ನೂ ಕಟ್ಟಲಾಗಿರಲಿಲ್ಲ. ನದಿಯಿಂದ ಸಣ್ಣ ಕಾಲುವೆಗಳನ್ನು ಕೊರೆದು ವ್ಯವಸಾಯಕ್ಕೆ ಅನುಕೂಲ ಮಾಡಿಕೊಳ್ಳಲಾಗಿತ್ತು. ಈ ರೀತಿಯಲ್ಲಿ ದಬ್ಬಾಳಿಕೆಯಿಲ್ಲದ ಉತ್ಕರ್ಷ ವ್ಯವಸಾಯ, ಹಾಗೂ ಅದರಿಂದ ಪಟ್ಟಣಗಳ ಅಸ್ಥಿತ್ವ ಸಾಧ್ಯವಾಗಿತ್ತು.

ಈ ಜನರು ಹಲವಾರು ಪ್ರಾಣಿಗಳನ್ನು ಸಾಕುವುದು ಕಲಿತಿದ್ದರು. ಹಸು, ಎಮ್ಮೆ, ಎತ್ತು, ಗೂಳಿ, ನಾಯಿ, ಬೆಕ್ಕು, ಕೆಲವೆಡೆ ಕತ್ತೆ, ಕುದುರೆ, ಹಂದಿ, ಹಾಗು ಒಂಟೆಗಳನ್ನು ಸಾಕುತ್ತಿದ್ದರು. ಇನ್ನು ಕೆಲವು ಊರುಗಳಲ್ಲಿ ಆನೆಗಳನ್ನು ಪದಾರ್ಥ ಸಾಗಾಣಿಕೆಯಲ್ಲಿ ಉಪಯೋಗಿಸುತ್ತಾರೆಂದು ಕೇಳಿದ್ದೆ - ನೋಡಿರಲಿಲ್ಲ. ಆನೆಯ ದಂತವನ್ನಂತು ಕುಶಲಕರ್ಮಗಳಲ್ಲಿ ಉಪಯೋಗಿಸುತ್ತಿದ್ದರು. ಗಾಳ ಅಥವ ಬಲೆ ಬೀಸಿ ಮೀನು ಹಿಡಿಯುವುದು, ಆಹಾರ ಹಾಗು ಕ್ರೀಡೆಗಾಗಿ ವನ್ಯ ಪ್ರಾಣಿಗಳನ್ನು ಬೇಟೆಯಾಡುವುದು ಎಲ್ಲವೂ ಈ ಕಾಲದಲ್ಲಿ ಪ್ರಚಲಿತವಾಗಿತ್ತು.

ಈ ಜನಾಂಗದ ಆರ್ಥಿಕ ವ್ಯವಸ್ಥೆಯು ವ್ಯವಸಾಯದೊಂದಿಗೆ ವ್ಯಾಪಾರ ಹಾಗೂ ವಾಣಿಜ್ಯಗಳಮೇಲೆ ನಿರ್ಭರವಾಗಿತ್ತು. ನಾನೊಮ್ಮೆ ಋತ್ವಿಕರ ಪರವಾಗಿ ವ್ಯಾಪಾರಕ್ಕೆಂದು ಹೋಗಿದ್ದಾಗ ಈ ವ್ಯವಸ್ಥೆಯನ್ನು ಅವಲೋಕಿಸುವ ಅವಕಾಶ ದೊರಕಿತು. ದೂರ-ದೂರದ ಪ್ರದೇಶಗಳು ನೆಲ ಹಾಗು ಜಲ ಮಾರ್ಗಗಳಿಂದ ಸಂಪರ್ಕ ಹೊಂದಿದ್ದವು. ಹಳ್ಳಿ ಹಾಗು ಸಣ್ಣ ಊರಿಗಳಿಂದ ಧಾನ್ಯಗಳು, ಪ್ರಾಣಿಗಳು, ಮರ, ಇತ್ಯಾದಿ ಬಂದರೆ ದೊಡ್ಡ ಊರುಗಳಿಂದ ಲೋಹದ ಆಯುಧಗಳು, ಮಡಿಕೆಗಳು, ಕಾರ್ಪಸ, ಮತ್ತಿತರ ಸಂಪನ್ಮೂಲಗಳು ಹೋಗುತ್ತಿದ್ದವು. ಕತ್ತೆ, ಕುದುರೆ, ಇತರ ಭಾರ ಹೊರುವ ಪ್ರಣಿಗಳು, ಎತ್ತಿನ ಗಾಡಿಗಳು ಭೂಮಾರ್ಗವಾಗಿ ಸಂಚರಿಸಿದರೆ, ನಾನಾರೀತಿ ದೋಣಿಗಳು ಜಲಮಾರ್ಗವಾಗಿ ಸಂಚರಿಸುತ್ತಿದ್ದವು.

ಎತ್ತಿನ ಗಾಡಿಗಳಿಗೆ ಒಂದು ಚತುರಸ್ರ ಮರದ ಕಟ್ಟಡವಿದ್ದು, ಗಾಲಿಗಳಿಗೆ ಬಂಡಿಯ ಕೆಳಗೊಂದು ಅಚ್ಚನ್ನು ಇರಿಸಲಾಗುತ್ತಿತ್ತು. ಅಚ್ಚಿನ ಎರಡೂ ತುದಿಗಳಲ್ಲಿ ಮರದ ಜರೆರಹಿತ ಗಾಲಿಗಳು, ಗಾಲಿಗಳನ್ನು ಹಿಡಿಯಲು ಕಡಾಣಿಗಳು. ಚತ್ರುರಸ್ರ ಕಟ್ಟಡದ ಮಧ್ಯಬಾಗದಿಂದ ಅಚ್ಚಿಗೆ ಊರ್ಧ್ವವಾಗಿ ಮತ್ತೊಂದು ಮರದ ಬಡಿಗೆ. ಈ ಬಡಿಗೆ ತುದಿಗೆ ಎತ್ತುಗಳನ್ನು ಕಟ್ಟಲು ಏರು. ಚತುರಸ್ರ ಕಟ್ಟಡದ ಮೇಲೆ ಕಾರ್ಯಕ್ಕೆ ತಕ್ಕಂತೆ ನಿರ್ಮಾಣ. ಸರಕು ಸಾಗಿಸಲು ಕಟ್ಟಡದ ಸುತ್ತ ನೆಲಕ್ಕೆ ಊರ್ಧ್ವವಾಗಿ ಬಡಿಗೆಗಳು, ಜನರನ್ನು ಸಾಗಿಸಲು ನೆರಳು ನೀಡಲೊಂದು ಛಾವಣಿ. ಇಂತಹ ವಾಹನಗಳು ನೆಲದಮೇಲೆ ಚಲಿಸಿದರೆ, ನೀರಿನಲ್ಲಿ ಚಲಿಸಲು ಪ್ರಸ್ತಾರ ತಳವುಳ್ಳ ದೋಣಿಗಳನ್ನು ಬಳಸಲಾಗುತ್ತಿತ್ತು. ದೋಣಿಯ ಮಧ್ಯದಲ್ಲಿ ಒಂದು ಸಣ್ಣ ಗುಡಿಸಿಲು, ದೋಣಿಯ ನಿಯಂತ್ರಣಕ್ಕೆ ಎರಡು ಚುಕ್ಕಾಣಿಗಳು.

ತೂಕಕ್ಕೆ ಘನಾಕಾರದ ಪ್ರಮಾಣಬದ್ಧ ತೂಕದ ಬಟ್ಟುಗಳನ್ನು ಬಳಸಲಾಗುತ್ತಿತ್ತು. ಅತೀ ಸಣ್ಣ ಬಟ್ಟು ಹೆಚ್ಚು-ಕಡಿಮೆ ನಮ್ಮ ಕಾಲದ ೧ ಗ್ರಾಂ ಇದ್ದರೆ, ಅದರ ಮುಂದಿನ ಬಟ್ಟು ಅದರ ೧೬ ಪಟ್ಟು. ಹೀಗೆ ೧೬ ಪಟ್ಟು ಹೆಚ್ಚುತ್ತ ಅತೀ ತೂಕವಾದ ವಸ್ತುಗಳನ್ನು ತೂಗುವ ಬಟ್ಟುಗಳನ್ನೂ ಕಾಣಬಹುದಾಗಿತ್ತು. ಬಟ್ಟುಗಳನ್ನು ಬಳಸುತ್ತಿದ್ದವರು ತೂಗಲು ತಕ್ಕಡಿಗಳನ್ನು ಬಳಸುತ್ತಿದ್ದರು ಎಂದು ಹೇಳುವ ಅವಶ್ಯಕತೆಯಿಲ್ಲ.

ದೂರ ದೂರ ಪ್ರದೇಶಗಳೊಂದಿಗೂ ವ್ಯಾಪಾರ-ವ್ಯವಹಾರಗಳನ್ನು ಇಲ್ಲಿಯ ಜನ ನಡೆಸುತ್ತಿದ್ದರು. 'ಸಾಗರ ದಾಟಿ ವ್ಯಾಪಾರ' ಎಂದು ಮಾತ್ರ ಕೇಳಿಬರುತ್ತಿತ್ತು. ಆದರೆ ನನ್ನ ಕಾಲದಲ್ಲಿಯೇ ಇವರು ಮಧ್ಯ ಏಶಿಯಾ, ಪರ್ಶಿಯನ್ ಗಲ್ಫ್, ಇರಾಕ್ ದೇಶಗಳೊಂದಿಗೆ ವ್ಯಾಪಾರ-ಸಂಬಂಧಗಳನ್ನಿಟ್ಟುಕೊಂಡಿದ್ದರೆಂಬುದಕ್ಕೆ ಸಿಕ್ಕಿದ್ದ ಪುರಾವೆಗಳನ್ನು ನಾನೇ ಪರಿಶೀಲಿಸಿದ್ದೆ.

ಈ ಜನರ ಧರ್ಮಾಚರಣೆಗಳ ಬಗ್ಗೆ ಆಗಲೇ ಹೇಳಿರುವೆ. ಇವರುಗಳ ಧರ್ಮ ನಮ್ಮ ಹಿಂದೂ ಧರ್ಮಕ್ಕೆ ಬಹು ಸಮೀಪವಾದದ್ದು. ಔಪಚಾರಿಕ ಸಂಸ್ಕೃತವನ್ನರಿತವರು ಇವರು. ಋಗ್ವೇದವನ್ನು 'ಋಗ್ವೇದ' ಎಂದು ಕರೆಯದಿದ್ದರೂ, ಅದನ್ನು ಮಂಡಲಗಳಾಗಿ ವಿಂಗಡಿಸದಿದ್ದರೂ 'ವೇದ'ವನ್ನು ೧೦೨೮ ಸೂಕ್ತಗಳಾಗಿ, ೧೦೧೭೦ ಶ್ಲೋಕಗಳಾಗಿ ವಿಂಗಡಿಸಿದ್ದರು. ಋಗ್ವೇದದ ಜೊತೆಗೆ ಯಜುರ್ವೇದದ ಹಲವು ಶ್ಲೂಕಗಳನ್ನು ಪಠಿಸುವವರಾದರೂ ಇವರು ಅರಿತಿದ್ದು ಒಂದೇ ವೇದವನ್ನು. 'ಪಶುಪತಿ', ಮತ್ತು 'ದೇವಿ' ಸಾಮಾನ್ಯ ಜನರು ಪೂಜಿಸುವ ದೇವತೆಗಳಾದರೆ, ಔಪಚಾರಿಕವಾಗಿ ವೇದಮಂತ್ರಗಳೊಡಗೂಡಿ ಇಂದ್ರ, ಅಗ್ನಿ, ಸೂರ್ಯ, ವಾಯು, ವರುಣ, ಮಾರುತ, ರುದ್ರ, ವಿಶ್ವಕರ್ಮ, ಯಮ, ಪ್ರಜಾಪತಿ ಮತ್ತಿತರ ದೇವತೆಗಳನ್ನು ಪೂಜಿಸುತ್ತಿದ್ದರು.

ಈ ಜನಾಂಗದ ಧರ್ಮದ ಮತ್ತೊಂದು ಮುಖ್ಯ ವೈಶಿಷ್ಟ್ಯ ಅಗ್ನಿ ಕರ್ಮಗಳು ಹಾಗು ಅಗ್ನಿ ಆಹುತಿ. ಹೋಮ ಕುಂಡಗಳನ್ನು ರಚಿಸಲು ಖಗೋಳಶಾಸ್ತ್ರದೊಡನೆ ರೇಖಾಗಣಿತದ ಜ್ಞಾನವನ್ನೂ ಉಪಯೋಗಿಸಿಕೊಳ್ಳುತ್ತಿದ್ದರು. ಈ ಜ್ಞಾನವನ್ನು ಮುಂದಿನ ಪೀಳಿಗೆಗಳಿಗೆ ಉಳಿಸಲು ಯಜ್ಞಕುಂಡಗಳನ್ನು ನಿರ್ಮಿಸುವ ಬಗೆಯನ್ನು ಶ್ಲೋಕಗಳಾಗಿಸಿ ಪಠಿಸುತ್ತಿದ್ದರು. ಇವುಗಳನ್ನು ನೋಡುತ್ತಿದ್ದಂತೆ ನನಗೆ ನಮ್ಮ ಧರ್ಮ ಹುಟ್ಟಿ ಬೆಳೆದದ್ದು ಹೇಗೆಂದು ಅರ್ಥವಾಯಿತು. ಆರ್ಯನ್ ಆಕ್ರಮಣ ಸಿದ್ಧಾಂತ ಕಡಾಖಂಡಿತವಾಗಿ ಸುಳ್ಳೆಂದು ಖಚಿತವಾಯಿತು.

*****

ಕಾಲ ಕಳೆಯುತ್ತಿದ್ದಂತೆ ನನಗೂ ಸ್ವಲ್ಪ ಬೇಸರವಾಗ ತೊಡಗಿತು. ಇಲ್ಲಿ ನೋಡಲು ಕಲಿಯಲು ಬಹಳಷ್ಟಿತ್ತು. ಆದರೆ ಇದನ್ನು ನನ್ನ ಕಾಲದಲ್ಲಿ ಹೇಳಿದರೆ ಅಲ್ಲವೆ ಇದಕ್ಕೆ ಬೆಲೆ? ಜೊತೆಗೆ ನನ್ನ ಮನೆ, ಮಠ, ಬಂಧು, ಬಳಗಗಳ ನೆನಪುಗಳು ನನ್ನನ್ನು ಕಾಡತೊಡಗಿದವು. ಹಿಂತಿರುಗುವುದಾದರೂ ಹೇಗೆ? ಇದರ ಯೋಚನೆಯಲ್ಲೇ ಕಾಲವೆಲ್ಲ ಕಳೆಯುವಂತಾಗಿತ್ತು. ಯೋಚಿಸಿದಷ್ಟೂ ನನಗೆ ನನ್ನ ಕಾಲಕ್ಕೆ ಹಿಂತಿರುಗುವ ಲಕ್ಷಣ, ವಿಧಾನಗಳು ಕಾಣಿಸಲೊಲ್ಲವಾದವು.

ಈಗ ಮಳೆ ಕೂಡಿದ ಛಳಿಗಾಲ ಬಂದಿತ್ತು. ನಾನು ಈ ರೀತಿ ವ್ಯಾಕುಲನಾಗಿ ಒಂದು ದಿನ ಎಲ್ಲಿಂದಲೋ ಹಿಂತಿರುಗುತ್ತಿದ್ದಾಗ ಮಳೆ ಬಂದು ನನ್ನ ಬಟ್ಟೆಗಳು ತೋಯ್ದು ಹೋದವು. ರಾತ್ರಿಯಾಗಿತ್ತು, ಹಾಗಾಗಿ ಸದ್ದಿಲ್ಲದೆ ನಾನು ಋತ್ವಿಕರ ಮನೆಯಲ್ಲಿ ನನಗಾಗಿ ಇರಿಸಿದ್ದ ಮೂಲೆಯನ್ನು ಹೋಗಿ ಸೇರಿದೆ. ತೋಯ್ದ ಬಟ್ಟೆಗಳಲ್ಲಿ ಮಲಗುವುದೇ? ಸಾಧ್ಯವಿರಲಿಲ್ಲ. ಈ ಹೊತ್ತಿನಲ್ಲಿ ಮಲಗಿದ್ದ ಬೇರೆಯವರನ್ನು ಎಬ್ಬಿಸದೇ ಬೇರೆ ಬಟ್ಟೆಗಳು ಸಿಗುವಂತಿರಲಿಲ್ಲ. ಬೇರೆ ದಾರಿಯೇ ಕಾಣದೆ ನನ್ನ ಒದ್ದೆ ಬಟ್ಟೆಗಳನ್ನು ಒಣಗಲು ಹಾಕಿದೆ. ಧರಿಸಲು ಇದ್ದದ್ದು ನಾನು ಈ ಕಾಲಕ್ಕೆ ಬಂದಾಗ ಧರಿಸಿದ್ದ, ನಂತರ ನನ್ನ ದಾಖಲೆ ಪುಸ್ತಕವಾಗಿದ್ದ ಪಂಚೆ, ಅದರ ಜೊತೆಗಿನ ಶರ್ಟು. ವಿಧಿಯೇ ಇಲ್ಲದೆ ಅವುಗಳನ್ನು ಧರಿಸಿ ಮಲಗಿದೆ.

ನಿದ್ದೆ ಬರಲೊಲ್ಲದಾಯಿತು. ನಾನು ಬಂದು ಸುಮಾರು ಆರು ತಿಂಗಳಿಗೂ ಹೆಚ್ಚು ಸಮಯವಾಗಿತ್ತು. ನನ್ನ ಕಾಲದಲ್ಲಿ ಇಷ್ಟು ಹೊತ್ತಿಗೆ ನನ್ನ ಪುಟ್ಟ ಮಗಳ ಎರಡು ವರ್ಷದ ಹುಟ್ಟು ಹಬ್ಬ ಹತ್ತಿರವಾಗಿದೆ ಎಂದುಕೊಂದೆ. ಇದನ್ನು ಯೋಚಿಸಿದೊಡನೆ ವ್ಯಾಕುಲತೆ ಹೆಚ್ಚಾಯಿತು. ನನ್ನ ಕಾಲದಲ್ಲಿ ಸಮಯ ಇಲ್ಲಿಯ ಗತಿಯಲ್ಲೇ ಗತಿಸುವುದೇ? ನಾನೀಗ ಹಿಂತಿರುಗಿದರೆ ಯಾವ ಕಾಲಕ್ಕೆ ಹಿಂತಿರುಗುವೆ? ನಾನು ಬಿಟ್ಟು ಬಂದ ಸಮಯದಿಂದ ಆರು ತಿಂಗಳ ನಂತರವೋ? ಆರು ವರ್ಷದ ನಂತರವೋ? ನನ್ನ ಹೆಂಡತಿ, ಮಗು ಏನಾಗಿರಬಹುದು? ನನ್ನನ್ನು ಇಷ್ಟು ದಿನಗಳ ಕಾಲ ಕಾಣದೆ ಅವರೇನು ಯೋಚಿಸಿರಬಹುದು? ಏನು ಮಾಡಿರಬಹುದು? ಎಂದೆಲ್ಲ ಯೋಚನೆಗಳು ಬರತೊಡಗಿದವು.

ಕಷ್ಟ ಪಟ್ಟು ಆ ವಿಚಾರಗಳಿಂದ ನನ್ನ ಬುದ್ಧಿಯನ್ನು ಹೊರತೆಗೆದು, ಹಿಂತಿರುಗುವ ಬಗ್ಗೆ ಯೋಚಿಸಲಾರಂಭಿಸಿದೆ. ಹಲವಾರು ಕಥೆ-ಕಾದಂಬರಿ-ಸಿನಿಮಾಗಳ ನೆನಪಾಯಿತು. ನಾನೇನಾದರೂ ಪ್ರಯೋಗವನ್ನು ಮಾಡಿ ಈ ಕಾಲಕ್ಕೆ ಬಂದವನಾಗಿದ್ದರೆ, ಹಿಂತಿರುಗಲು ಅದಕ್ಕೆ ವಿರುದ್ಧವಾಗಿ ಏನಾದರೂ ಮಾಡಬಹುದಿತ್ತೇನೋ ಎನ್ನಿಸಿತು. ಪುನಃ ಅಂದಿನ ದಿನದ ಸ್ಮರಣೆ ಮಾಡಿಕೊಂಡೆ. ಯೋಚಿಸಿದಷ್ಟೂ, ನಾನು ಕೈಯಲ್ಲಿ ಹಿಡಿದ್ದ ಆ ಮೂರ್ತಿಯೇ ಇದರ ಪರಿಹಾರವಿರಬಹುದೆನಿಸಿತು. ಅದೆಲ್ಲಿರಬಹುದು ಎಂದು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆ ಕ್ಷಣಗಳು ಅದೇಕೋ ಮಬ್ಬಾಗಿದ್ದವು!

ಕೊನೆಗೆ ಹೊಳೆಯಿತು. ಅದನ್ನು ಹುಡುಕಲು ಸ್ನಾನದಮನೆಯ ತೊಟ್ಟಿಯಲ್ಲಿ ಮುಳುಗಿದವ ಎದ್ದಿದ್ದು ಬೇರೆಲ್ಲೋ ಎಂದು. ಹಾಗಾದರೆ ಆ ಮೂರ್ತಿ ನನ್ನೊಡನೆ ಈ ಕಾಲಕ್ಕೆ ಬಂದಿತ್ತೇ? ಬಂದಿದ್ದರೆ ಎಲ್ಲಿರಬಹುದು? ನಾನು ಎದ್ದ ಆ ಸಾರ್ವಜನಿಕ ಸ್ನಾನದ ಕೊಂಡದಲ್ಲಿಯೇ ಇರಬಹುದೇ? ಎಂದು ಯೋಚಿಸ ತೊಡಗಿದೆ. ಎಲ್ಲ ಮನೆಗಳ ಬಚ್ಚಲು ಮನೆ/ಶೌಚಖಾನೆಗಳಲ್ಲಿ ಕೊಳವೆಗಳ ಮೂಲಕ ಬರುವ ನೀರಿದ್ದ ಕಾರಣ ನಾನೆಂದೂ ಆ ಸಾರ್ವಜನಿಕ ಸ್ನಾನ ಕುಂಡಕ್ಕೆ ಹೋಗಿಯೇ ಇರಲಿಲ್ಲ. ಸರಿ, ಮೆಲ್ಲನೆ ಮೆಟ್ಟಿನಗಾಲುಗಳ ಮೇಲೆ ನಡೆದು ಮನೆಯಾಚೆ ಬಿದ್ದೆ. ಮಳೆ ಸ್ವಲ್ಪ ಕಡಿಮೆಯಾಗಿತ್ತಾದರೂ ಗುಡುಗು ಘರ್ಜಿಸುತ್ತಲೇ ಇತ್ತು. ಹೊಳೆವ ಮಿಂಚೇ ನನಗೆ ದಾರಿ ತೋರಿಸುವ ದೇಪಗಳಾದವು.

ಆ ಮೂರ್ತಿಯನ್ನು ಶಪಿಸುತ್ತ, ಅದು ನನ್ನ ಕೈಗೆ ಸಿಕ್ಕ ದಿನವೂ ಇದೇ ರೀತಿಯ ವಾತಾವರಣವಿತ್ತೆಂದು ಯೋಚಿಸುತ್ತ ಸ್ನಾನದ ಕುಂಡದ ಕಡೆಗೆ ನಡೆದೆ. ಅಲ್ಲಿಗೆ ಹೋಗಿ ನೋಡಿದರೆ ಅದೊಂದು ದೊಡ್ಡ ಕುಂಡ. ಅದರಲ್ಲಿ ನಾನೆದ್ದದ್ದೆಲ್ಲಿ ಎಂದು ಹೇಗೆ ನಿರ್ಧರಿಸುವುದು? ಮೂರ್ತಿಯನ್ನು ಎಲ್ಲಿ ಹುಡುಕಬೇಕೆಂಬುದನ್ನು ಯೋಚಿಸುತ್ತಿದ್ದಂತೆ, ಆ ದೈವ ನಿಯಂತ್ರಿತ ದಿನವನ್ನು ಸ್ಮರಿಸತೊಡಗಿದೆ. ಮಿಂಚೊಂದು ಹೊಳೆದಾಗ ದಂಡೆಯಲ್ಲಿ ಒಂದು ಸಣ್ಣ ಗುಡಿ ಕಾಣಿಸಿತು. ಋತ್ವಿಕರು ಆ ಗುಡಿಯಲ್ಲಿ ಏನೋ ಆಚರಣೆ ನಡೆಸುತ್ತಿದ್ದ ಚಿತ್ರಗಳು ನನ್ನ ತಲೆಯೆಲ್ಲಿ ಮೂಡಿದವು. ನಾನು ನಾಲ್ಕಾರು ಹೆಜ್ಜೆ ನಡೆದು ಅವರ ಬಳಿ ಬಂದು ಕುಸಿದಿದ್ದು ನೆನಪಾಯಿತು. ಆದರೆ "೬ ತಿಂಗಳಿಗೂ ಹೆಚ್ಚಿನ ಕಾಲ ಗತಿಸಿದೆ. ಮೇಲಾಗಿ ಕುಂಡದೊಳಗೆ ಹರಿಯುವ ನೀರು - ಅದರಿಂದ ಆ ಮೂರ್ತಿ ಅಲುಗಾಡಿ ಎಲ್ಲಿಯಾದರೂ ಬೇರೆಡೆಗೆ ಹೋಗಿದ್ದರೆ? ಈ ದೊಡ್ಡ ಕೊಳದಲ್ಲಿ ಅದನ್ನು ಹೇಗೆ ಹುಡುಕುವುದು? ಸಿಗದಿದ್ದರೆ?" ಎಂದೆಲ್ಲ ಯೋಚನೆಗಳು ಬಂದರೂ "ಒಮ್ಮೆ ಪ್ರಯತ್ನ ಮಾಡಿ ನೋಡಲೇಬೇಕು." ಎಂದು ನಿರ್ಧರಿಸಿದೆ.

ಸರಿ, ಗುಡಿಯ ಬಳಿ ಕೊಳಕ್ಕೆ ಇಳಿದು ಕೊಳದ ಮಧ್ಯಭಾಗಕ್ಕೆ ನಡೆಯ ತೊಡಗಿದೆ. ಕೊಳದ ನೆಲಕ್ಕೆ ಚಪ್ಪಟ್ಟೆ ಕಲ್ಲುಗಳನ್ನು ಕೂರಿಸಲಾಗಿತ್ತು. "ಓಹೋ, ಹೀಗಿದ್ದರೆ ಮೂರ್ತಿ ಇಲ್ಲೆಲ್ಲಾದರೂ ಇದ್ದರೆ ಸುಲಭವಾಗಿ ಸಿಕ್ಕೀತು" ಎಂದು ಯೋಚಿಸುತ್ತ ನಡೆದೆ. ಸೊಂಟದ ಮಟ್ಟಕ್ಕೆ ನೀರು, ಕತ್ತಲು ಬೇರೆ ಏನೂ ಕಾಣಿಸುವ ಹಾಗಿಲ್ಲ. ಹಾಗಾಗಿ ಜೋಪಾನವಾಗಿ ಕಾಲುಗಳನ್ನೇ ತಡವರಿಸುತ್ತ ಒಂದೊಂದೇ ಹೆಜ್ಜೆ ಇಡಲಾರಂಭಿಸಿದೆ. ಕಾಲಿಗೆ ಏನೋ ಹತ್ತಿದಂತಾಯಿತು. ನೀರಿನಲ್ಲಿ ಮುಳುಗಿ ಹೊರಗೆತ್ತಿ ನೋಡಿದರೆ ತಾಮ್ರದ ಪಾತ್ರೆಯೊಂದು. ಅದನ್ನು ತೆಗೆದು ದಡಕ್ಕೆಸೆದು, ಹುಡುಕಾಟವನ್ನು ಮುಂದುವರೆಸಿದೆ. ಹೀಗೆ ಅನೇಕ ವಸ್ತುಗಳು ಕೈಗೆ ಸಿಕ್ಕವು ಪಾತ್ರೆಗಳು, ಮಡಿಕೆಗಳು, ಇತ್ಯಾದಿ. ನನ್ನ ಉತ್ಸಾಹ ಸ್ವಲ್ಪ ಕುಗ್ಗ ತೊಡಗಿತು. ನರಿ ಹಾಗು ಹುಳಿ ದ್ರಾಕ್ಷಿಯ ಕತೆಯಂತೆ "ಅದು ಸಿಕ್ಕರೇನು? ಅದರಿಂದ ನಾನು ಹಿಂತಿರುಗಬಲ್ಲೆ ಎಂಬುದಕ್ಕೆ ಆಧಾರವೇನು?" ಎಂದು ಯೋಚಿಸುತ್ತ ಕೊನೆಯದಾಗಿ ಒಮ್ಮೆ ನೋಡಿ ಹಿಂತಿರುಗಿ ಬೇರೇನಾದರೂ ಮಾಡುವೆ ಎಂದು ನಿರ್ಧರಿಸಿದೆ.

ಕೊನೆಗೆ, ಸುಮಾರು ೨-೩ ತಾಸುಗಳ ಕಾಲ ಹುಡುಕಿದ ನಂತರ ಸೋತು ಮನೆಗೆ ಹಿಂತಿರುಗಲು ದಡದೆಡೆಗೆ ನಡೆಯ ತೊಡಗಿದೆ. ಕಾಲಿಗೆ ಏನೋ ಸಿಕ್ಕಹಾಗಾಯಿತು. ಅಭ್ಯಾಸ ಬಲದಿಂದ ಅದೇನೆಂದು ನೋಡಲು ಬಗ್ಗಿದೆ. ನನ್ನ ಬೆರಳುಗಳು ಮೂರ್ತಿಯಾಕಾರದ ವಸ್ತುವನ್ನು ಸುತ್ತುವರಿದವು. ಆ ಕ್ಷಣದಲ್ಲಿ ಮಿಂಚೊಂದು ಹೊಳೆಯಿತು. ಬೆದರಿ ಕಾಲುಜಾರಿ ನೀರಿನಲ್ಲಿ ಬಿದ್ದವ ಎದ್ದು ನೋಡಿದರೆ ನನ್ನ ಕೋಣೆಯ ತೊಟ್ಟಿಯಲ್ಲಿ ಎದ್ದಿದ್ದೇನೆ. ಒಂದು ನಿಮಿಷ ಅರ್ಥವಾಗಲಿಲ್ಲ - ಪುನಃ ತಲೆ ಸುತ್ತುವಿಕೆ, ಮೂರ್ಛೆಬೀಳುವ ಆಭಾಸ. ಹೇಗೋ ಅಂತು ಸಂಭಾಳಿಸಿಕೊಂಡು ತೊಟ್ಟಿಯಿಂದ ಹೊರಗೆ ಇಳಿದುಕೊಂಡೆ. "ನಾನು ಯಾವ ಕಾಲಕ್ಕೆ ಬಂದಿರುವೆ; ಎಷ್ಟು ದಿನಗಳು ಗತಿಸಿವೆ" ಎಂಬ ಪ್ರಶ್ನೆಗಳು ಪುನಃ ಕಾಡ ತೊಡಗಿದವು.

ನೋಡಿದಾಗ ನನ್ನ ಟವಲ್ಲು ಆ ಬಚ್ಚಲು ಮನೆಯ ಕೊಕ್ಕೆಯ ಮೇಲೆ ಎಂದಿನಂತೆ ನೇತುಹಾಕಿತ್ತು. ನೀರಿನಲ್ಲಿ ನೆಂದ ಮೈಒರಸಿಕೊಳ್ಳಲು ಟವಲ್ಲನ್ನು ಕೈಗೆತ್ತಿಕೊಂಡಾಗ ಅದರ ಹಿಂದೆ ಸಿಕ್ಕಿಸಿದ್ದ ನನ್ನ ಕೈಗಡಿಯಾರ ಕಾಣಿಸಿತು. ಅದನ್ನು ಅಕಾಮ್ಯವಾಗಿ ಕೈಗೆ ಕಟ್ಟಿಕೊಂಡೆ. ಮೊದಲಿಗೆ ನನ್ನ ಕಣ್ಣು ಬಿದ್ದದ್ದು ವೇಳೆ ಹಾಗು ತಾರೀಖಿನ ಮೇಲೆ. ಅದರ ಪ್ರಕಾರ ಇನ್ನೇನು ಊಟದ ಸಮಯವಾಗಿತ್ತು, ತಾರೀಖು ನಾನು ಈ ಕಾಲವನ್ನು ಬಿಟ್ಟು ಆ ಕಾಲಕ್ಕೆ ಹೋದ ದಿನ. ಈ ವಿಚಾರ ತಲೆದಾಕಿದ್ದಕ್ಕೋ ಅಥವ ಕಾಲ ಪ್ರಯಾಣದ ಪರಿಣಾಮವೋ ತಿಳಿಯದು. ತಲೆ ಸುತ್ತಲಾರಂಭಿಸಿ ಬಚ್ಚಲು ಮನೆಯಲ್ಲೇ ಕುಳಿತೆ. ಏಳುವ ಹೊತ್ತಿಗೆ ನನ್ನ ತಲೆ ಸ್ವಲ್ಪ ನಿಯಂತ್ರಣಕ್ಕೆ ಬಂದು ಹೊರಗೆ ಕಾದಿದ್ದ ಸೈನಿಕರು, ಡೈನೋಸಾರ್​ಗಳ ನೆನಪಾಯಿತು. ಒದ್ದೆ ಬಟ್ಟೆಗಳನ್ನು ಬಿಚ್ಚಿ ಟವಲ್ಲನ್ನುಟ್ಟುಕೊಂಡೆ.

ಬಾಗಿಲಿಗೆ ಕಿವಿ ಕೊಟ್ಟು ಕೇಳಿದೆ. ಹೊರಗೆ ನಿಶ್ಯಬ್ಧವಾಗಿತ್ತು. ನಿಧಾನವಾಗಿ ಬಾಗಿಲನ್ನು ತೆಗೆದು ನೋಡಿದೆ. ಏನೂ ಅಲುಗಾಡುತ್ತಿರಲಿಲ್ಲ. ಹೊರಹೋಗಿ ನೋಡಿದೆ ಯಾರ ಸುಳಿವೂ ಕಾಣಿಸಲಿಲ್ಲ. ಪುನಃ ಗೊಂದಲ: ಕೈಯಲ್ಲೇ ಇದ್ದ ಮೂರ್ತಿಯನ್ನು ಮತ್ತೆ ಮೇಜಿನ ಮೇಲಿರಿಸಿದೆ. ನಿಧಾನವಾಗಿ ಬಾಗಿಲು ತೆಗೆದು ನೋಡಿದರೆ ದೈತ್ಯ ಹಲ್ಲಿಯೂ ಇಲ್ಲ, ಕಾಡೂ ಇಲ್ಲ. ಎಂದಿನಂತೆ ಪ್ರವಾಸಿ ಮಂದಿರದ ಮುಂದಿನ ಅಂಗಳ. ಮಳೆ ನಿಂತಿತ್ತು; ಮೋಡಗಳು ಸರಿದು ಚಂದ್ರ ತಾರೆಗಳು ಕಾಣಿಸುತ್ತಿದ್ದವು. ತಂಪಾದ ಗಾಳಿ ಬೀಸುತ್ತಿತ್ತು.

ಒಣಗಿದ್ದ ಬಟ್ಟೆ ಧರಿಸಿ ಬೆಚ್ಚಗೆ ಹೊದ್ದುಕೊಂಡು ಹಾಸಿಗೆಯಲ್ಲಿ ಮಲಗಿ ಇನ್ನೇನು ಒಂದು ನಿಮಿಷವೂ ಆಗಿರಲಿಲ್ಲ, ಬಾಗಿಲು ತಟ್ಟುವ ಶಬ್ಧ. ಪ್ರವಾಸಿ ಮಂದಿರದ ಮಾಣಿ ನನ್ನ ರಾತ್ರಿಯ ಊಟವನ್ನು ಹಿಡಿದು ಬಂದಿದ್ದ.

ಕಳೆದ ಆರು ತಿಂಗಳುಗಳು ಕಣ್ಣಿಗ ಕಟ್ಟಿದಹಾಗಿದ್ದವು - ಆದರೆ ೬ ತಿಂಗಳು ಗತಿಸಿಯೇ ಇಲ್ಲ. ಕೆಲವೇ ನಿಮಿಷಗಳು - ಇಲ್ಲವೇ ಕ್ಷಣಗಳು ನಾನು ಆ ತೊಟ್ಟಿಯಲ್ಲಿದ್ದದ್ದು. ಮೇಲಾಗಿ ಕಾಡು, ದೈತ್ಯ ಹಲ್ಲಿ, ಯುದ್ಧ, ದಂಗೆ, ಕೋಣೆಗೆ ಬಂದ ಬ್ರಿಟೀಷ್ ಸೈನಿಕರು - ಯಾರ ಸುಳಿವೂ ಇಲ್ಲ. ನಾನೇನೂ ಕನಸು ಕಂಡೆನೆ? ಎಂದು ಯೋಚಿಸಿದೆ. ಆದರೆ ಅಂತಹ ಕನಸು ಯಾರಾದರೂ ಕಾಣಲು ಸಾಧ್ಯವೇ? ನಾನು ಅಲ್ಲಿಗೆ ಹೋಗಿ ಬಂದದ್ದಕ್ಕೆ ಯಾವ ಸಾಕ್ಷಿಯೂ ಇಲ್ಲ... "ಓ! ನನ್ನ ದಾಖಲೆ ಪುಸ್ತಕ!" ಎಂದು ಯೋಚಿಸಿ ಬಚ್ಚಲು ಮನೆಕಡೆಗೋಡಿದೆ. "ಅಯ್ಯೋ ನೀರಲ್ಲಿ ನೆನೆಯಿತೇ. ಏನಾದರೂ ಇದ್ದರೆ ಅಳಿಸಿಹೋಗಿರಬೇಕು" ಎಂಬ ಉದ್ಗಾರ. ಆಚೆ ಮಾಣಿ ಇನ್ನೂ ಊಟ ಬಡಿಸುತ್ತಲೇ ಇದ್ದ.

ಬಚ್ಚಲು ಮನೆಯಲ್ಲಿದ್ದ ನನ್ನ ಒದ್ದೆ ಪಂಚೆಯನ್ನು ಹೊರತಂದು ನೆಲದ ಮೇಲೆ ಹರಡಿದೆ. ನನ್ನ ಚೆಕ್ ಸಹಿ ಮಾಡುವ ಪೆನ್ನಿನ ಚಮತ್ಕಾರವೋ ಏನೋ ಪಂಚೆಯ ಮೇಲೆ ಬರೆದಿದ್ದೆಲ್ಲವೂ ಹಾಗೆಯೇ ಇತ್ತು. ಹರ್ಷ, ಕಳೆ ನನ್ನ ಮನಸ್ಸಿಗೆ ಬರುತ್ತಿರುವಂತೆ ಮಾಣಿ "ಸಾಬ್ ಯೆ ಬಾಹರ್ ಸೋಫಾ ಮೆ ಚುಬಾ ಹುಆ ಥಾ" (ಸಾರ್ - ಇದು ಹೊರಗಡೆ ಸೋಫಾಗೆ ನಾಟಿತ್ತು) ಎಂದು ಹೇಳುತ್ತ ಒಂದು ಬಿದುರಿನ ಬಾಣವನ್ನು ಕೈಯಲ್ಲಿ ಹಿಡಿದು ಬಂದ.